Thursday, December 29, 2022

‘ಮೆಲುಹಾ’ದ ಅಮರರು : ಅಮಿಶ್ ರ ಜಗತ್ಪ್ರಸಿದ್ಧ ಕಥೆಯ ಕುರಿತು

 ಅಮಿಶ್ ರ Shiva Triology ಸರಣಿ ಪುಸ್ತಕಗಳ ಕುರಿತು ನೀವು ಕೇಳಿರಬಹುದು. ಇಂಗ್ಲೀಷ್ ಕಾದಂಬರಿಗಳ ಓದುಗರಾಗಿದ್ದರೆ, ಖಂಡಿತ ಓದಿರುತ್ತೀರಿ ಕೂಡ. ಏಕೆಂದರೆ, ಇದು ಭಾರತದ ಪುಸ್ತಕ ಪ್ರಪಂಚದ ಎಲ್ಲ ದಾಖಲೆಗಳನ್ನು ಮುರಿದ ಸರಣಿ. ಎಲ್ಲೋ ಬ್ಯಾಂಕ್ ಒಂದರಲ್ಲಿ ದೊಡ್ಡ ಹುದ್ದೆಯಲ್ಲಿದ್ದ ಅಮಿಶ್ ರನ್ನು ಪೂರ್ಣಕಾಲಿಕ ಬರಹಗಾರರಾಗುವಂತೆ ಮಾಡಿ, ಅವರಿಗೆ ಇನ್ನಿಲ್ಲದ ಖ್ಯಾತಿಯನ್ನು ತಂದುಕೊಟ್ಟ ಕೃತಿ. ಉದಾಹರಣೆಗೆ, ಈ ಸರಣಿಯ ಮೊದಲ ಭಾಗ: The Immortals of Meluhaದ 60 ಲಕ್ಷಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿವೆ! ನಾನು ಈಗ ಬರೆಯ ಹೊರಟಿರುವುದು ಇದೇ ಕೃತಿಯ ಬಗ್ಗೆ.


ಒಬ್ಬ ಸಾಮಾನ್ಯ ಶಿವನಾಗುವ ಕಥೆಯಿದು. ಶಿವ, ಮಹಾದೇವನಾಗುವ ಕಥೆಯಿದು. ಹಿಮಾಲಯ ಪ್ರಾಂತ್ಯದ ಬುಡಕಟ್ಟುವಿನಲ್ಲಿ ಜನಿಸಿದ ಗಟ್ಟಿಮುಟ್ಟಾದ ಯುವಕನೊಬ್ಬ, ಹಿಮಾಲಯದಾಚೆಯ ಮೆಲುಹಾ ಸಾಮ್ರಾಜ್ಯದ ನಾಯಕನಾಕುವ, ‘ನೀಲಕಂಠ’ನಾಗುವ, ಮಹಾದೇವನಾಗುವ ಕಥೆಯಿದು. ಒಬ್ಬ ಸಾಮಾನ್ಯ ಯಾವ ಯಾವ ಮಾನಸಿಕ, ದೈಹಿಕ ತುಮುಲಗಳಿಗೆ ಒಳಗಾಗುತ್ತಾನೋ, ಈ ಕಥೆಯಲ್ಲಿ ಶಿವನೂ ಅವೆಲ್ಲವನ್ನೂ ಅನುಭವಿಸುತ್ತಾನೆ.


ಈ ಕಥೆಯ ಇನ್ನೊಂದು ವಿಶೇಷವೆಂದರೆ, ಇತಿಹಾಸದಲ್ಲಿದ್ದ ಏಕೈಕ ಶಿವನನ್ನಾಗಿ ಈ ಕಥೆಯ ನಾಯಕನನ್ನು ಲೇಖಕ ಬಿಂಬಿಸುವುದಿಲ್ಲ. ಹಿಂದೆ ಕೂಡ ಮಹಾದೇವರಿದ್ದರು, ರುದ್ರನಿದ್ದನು, ಈಗ ಪ್ರಪಂಚದಲ್ಲಿ ‘ದುಷ್ಟತನ’ ಮತ್ತೆ ಹೆಚ್ಚಾಗಿರುವುದರಿಂದ ಮತ್ತೊಬ್ಬ ಮಹಾದೇವ ಉದಯಿಸಿದ್ದಾನೆ ಎಂಬುದು ಇಲ್ಲಿಯ ದೃಷ್ಟಿಕೋನ.


ಬಹುಶಃ ಲೇಖಕರು ನಮ್ಮ ನಾಗರೀಕತೆಗಳ ಬಗ್ಗೆ, ಉದಾಹರಣೆಗೆ ಸಿಂಧು ನಾಗರೀಕತೆ, ವೈದಿಕ ನಾಗರೀಕತೆ, ವಿವಿಧ ರಾಜರುಗಳ ಆಡಳಿತದಲ್ಲಿದ್ದ ನಾಗರೀಕತೆಗಳನ್ನು ಚೆನ್ನಾಗಿ ಅಭ್ಯಸಿಸಿ, ಈ ಕಥೆಯಲ್ಲಿ ‘ಮೆಲುಹ’ನ್ನರ ನಾಗರೀಕತೆಯನ್ನು ಚಿತ್ರಿಸಿದ್ದಾರೆ. ಮೆಲುಹನ್ನರು ಸೂರ್ಯವಂಶದವರು. ಅವರ ಅತ್ಯುಚ್ಛ ದೇವ ರಾಮ. ಅದೇ ಸಮಯದಲ್ಲಿ ಇವರ ನೆರೆಹೊರಯವರಾಗಿ ಇದ್ದವರು ಚಂದ್ರವಂಶಿಗಳು - ಸ್ವದ್ವೀಪ ಎಂಬ ರಾಜ್ಯದಲ್ಲಿ ಅವರ ವಾಸ. ಇವರಿಬ್ಬರ ನಡುವೆ ಅದಮ್ಯ ವೈಷಮ್ಯ. ಇಬ್ಬರೂ ನೀಲಿಯಾದ ಕಂಠ ಉಳ್ಳ ಮಹಾದೇವ ಉದಯಿಸಿ, ತಮ್ಮನ್ನು ಸೇರಿಕೊಂಡು ತಮ್ಮ ವೈರಿಯನ್ನು ನಾಶಮಾಡುತ್ತಾನೆ ಎಂದು ನಂಬುವವರು. ಕೊನೆಗೆ ‘ನೀಲಕಂಠ’ ಯಾರ ಪಂಗಡ ಸೆರುತ್ತಾನೆ, ಯಾರನ್ನು ಸಂಹರಿಸುತ್ತಾನೆ, ಸಂಹರಿಸಿದ ನಂತರ ಏನು ಮಾಡುತ್ತಾನೆ ಎಂದು ತಿಳಿಯಲು ನೀವು ಪುಸ್ತಕವನ್ನೇ ಓದಬೇಕು.


‘ಶಿವ’ ಎಂದರೆ ನಮ್ಮ ಸಂಸ್ಕೃತಿಯಲ್ಲಿ ಯಾವುದೇ ನಾಗರೀಕತೆಯಿಲ್ಲದೇ wild ಆಗಿ ಬದುಕಿದವನು ಎಂದೇ ಬಿಂಬಿತವಾದವ. ಎಂದರೆ, ಶಿವ ಸ್ಮಶಾನದ ವಿಭೂತಿಯನ್ನು ಬಳಿದುಕೊಳ್ಳುತ್ತಿದ್ದ, ಸ್ನಾನ ಬಹಳ ಅಪರೂಪಕ್ಕೆ ಮಾಡುತ್ತಿದ್ದ, ಭಂಗಿ ಸೇದುತ್ತಿದ್ದ, ಹುಲಿಯ ಚರ್ಮವನ್ನು ಧರಿಸುತ್ತಿದ್ದ…. ಹೀಗೆ. ಇಲ್ಲಿಯೂ ಶಿವನ ಈ ಅಂಶಗಳನ್ನು ಕಾಪಿಟ್ಟುಕೊಳ್ಳುವಲ್ಲಿ ಒಂದು ಸಮತೋಲನವನ್ನು ಕಂಡುಕೊಂಡಿರುವುದಕ್ಕೆ ಲೇಖಕರನ್ನು ಅಭಿನಂದಿಸಬೇಕು.


ಇಷ್ಟೆಲ್ಲ ಹೇಳಿಯೂ - ನಮ್ಮ ಕಥೆಗಳಲ್ಲಿ, ಇತಿಹಾಸದಲ್ಲಿ ಬರುವ ಶಿವನಿಗೆ ಹೋಲಿಸಿದರೆ, ಇಲ್ಲಿಯ ಶಿವ ಒಂದು ಬಹಳ dumbed down ವರ್ಷನ್ ಆಗಿ ಕಾಣಿಸುತ್ತಾನೆ. ನಮ್ಮ ಕಥೆಗಳಲ್ಲಿ ಬರುವ ಶಿವನಿಗಿಂತ ಈತ ಬಹಳ ಲೈಟ್ ವರ್ಷನ್ ಆಗಿ ಕಾಣಿಸುತ್ತಾನೆ. ಏಕೆಂದರೆ  ನಮ್ಮ ಕಥೆಗಳಲ್ಲಿ ಬರುವ ಶಿವ ಮತ್ತಷ್ಟು, ಇನ್ನಷ್ಟು wild ಸ್ವರೂಪಿ. ಆತನಿಗೆ ಸರಿ-ತಪ್ಪು ಲೆಕ್ಕಕ್ಕಿಲ್ಲ. ಆತನಿಗೆ ಯಾರೂ ಬುದ್ಧಿ ಹೇಳಬೇಕಾಗಿಲ್ಲ. ನಮ್ಮ ಶಿವ ಕೇವಲ ಭಂಗಿಯನ್ನೊಂದೇ ಸೇದುವುದಿಲ್ಲ - ಧ್ಯಾನಕ್ಕೆ ನಿಶ್ಚಲವಾಗಿ ಕುಳಿತನೆಂದರೆ ಮುಗಿಯಿತು - ಮೂರು ತಿಂಗಳಾಗಲೀ, ಮೂರು ವರ್ಷವಾಗಲೀ ಆತ ಕದಲುವುದಿಲ್ಲ.ಆತ ಯಾರಿಗೋ ಹೆದರುತ್ತ ಕೂರುವುದಿಲ್ಲ. ಒಟ್ಟಿನಲ್ಲಿ ಶಿವನಿಗೆ, ಶಿವನೇ ಸಾಟಿ.


ಆದರೆ ಇದು(ಈ ಪುಸ್ತಕ) ಒಂದು ಕಥೆಯಷ್ಟೆ. ಲೇಖಕನಿಗೆ ತನ್ನ ಕಲ್ಪನಾ ಲಹರಿಯನ್ನು ಹರಿದುಬಿಡುವ ಸ್ವಾತಂತ್ರ್ಯ ಇದೆ. ಸಾಮಾಜಿಕ ಹಾಗೂ ಕಾಲೇಜ್ ಲೈಫ್ ಕಾದಂಬರಿಗಳೇ, ಭಾರತೀಯ ಇಂಗ್ಲೀಷ್ ಕಾದಂಬರಿ ಸಾಹಿತ್ಯವನ್ನು ಆಳುತ್ತಿದ್ದ ಕಾಲದಲ್ಲಿ ಬಂದು, ಇಂಥಹ ಕಥಾವಸ್ತುವಿನೊಂದಿಗೆ ಸಾಹಿತ್ಯಲೋಕವನ್ನು ಬಡಿದೆಬ್ಬಿಸಿದ ಅಮಿಶ್ ರನ್ನು ಶ್ಲಾಘಿಸಲೇಬೆಕು. ನೀವಿನ್ನೂ ಓದಿಲ್ಲವಾದರೆ, ಒಮ್ಮೆ ಓದಿ :)



ಮೊನ್ನೆ CEASEFIRE ಎಂದು ಟ್ರಂಪ್ ಟ್ವೀಟ್ ಮಾಡಿದಾಗ ನಂಬಲೇ ಆಗಿರಲಿಲ್ಲ… ಈ ಮನುಷ್ಯ ಸ್ವಲ್ಪ ಎಡವಟ್ಟು ಜಾಸ್ತಿ… ಏನೋ ಮಾಡಿದ್ದಾನೆ… ನಾವು ಒಪ್ಪಿರಲಿಕ್ಕಿಲ್ಲ ಅನ್ನಿಸಿತ್...