Wednesday, May 10, 2023

ಆ ಪಕ್ಷ, ಈ ಪಕ್ಷವಲ್ಲ - ಆಡಳಿತದಲ್ಲಿರಬೇಕಿರುವುದು 'ಪ್ರಜಾಪ್ರಭುತ್ವ'!


ಮತದಾನ ಮುಗಿದಿದೆ. ಕರ್ನಾಟಕ ವಿಧಾನಸಭೆಯ ಚುಕ್ಕಾಣಿಯನ್ನು ಯಾರು ಹಿಡಿಯಲಿದ್ದಾರೆ ಎಂಬುದನ್ನು ಮತದಾರ ಗುಪ್ತವಾಗಿ ತೀರ್ಮಾನಿಸಿದ್ದಾನೆ. 

ಪ್ರಜಾಪ್ರಭುತ್ವ ಭಾರತದಲ್ಲಿ ಬಂದು 50 ವರ್ಷಗಳ ನಂತರ ಜನಿಸಿರುವ ನನ್ನಂತವರಿಗೆ, ಅಥವಾ ಅದು ಬಂದ ನಂತರ 10-20-30-40 ವರ್ಷಗಳ ನಂತರ ಜನಿಸಿರುವ ಓದುಗರಿಗೆ ಪ್ರಜಾಪ್ರಭುತ್ವವನ್ನು ಪಡೆಯುವಲ್ಲಿ ಹಿಂದಿನ ಜನಾಂಗಗಳು ಪಟ್ಟ ಕಷ್ಟ ಎಷ್ಟರ ಮಟ್ಟಿಗೆ ಅರ್ಥವಾಗುತ್ತೆ ಗೊತ್ತಿಲ್ಲ. ದೊಡ್ಡ ಸಂಖ್ಯೆಯಲ್ಲಿ ಜನರು ಯಾರನ್ನು ಬೆಂಬಲಿಸುತ್ತಾರೋ ಅವರು ರಾಜನಾಗುವ, ರಾಜನಾದ ನಂತರವೂ ಅವಶ್ಯವಿದ್ದಲ್ಲಿ ಅವನನ್ನು ಮುಂದಿನ ಐದೇ ವರ್ಷಗಳಲ್ಲಿ ಅಧಿಕಾರದಿಂದ ಕೆಳಗಿಳಿಸಬಲ್ಲ ಅಧಿಕಾರವನ್ನು ಜನರಿಗೆ ನೀಡಿರುವ ಈ ವ್ಯವಸ್ಥೆ ಸಾಮಾನ್ಯವಾದುದಲ್ಲ.

ಆದರೆ ವ್ಯವಸ್ಥೆ ಎಂತದ್ದೇ ಆದರೂ ಅದನ್ನು ಸರಿಯಾಗಿ, ಸಮರ್ಪಕವಾಗಿ ಬಳಸಿಕೊಳ್ಳುವ ಜನರಿಲ್ಲದಿದ್ದರೆ ಏನು ಪ್ರಯೋಜನ? ನಾನು ನನ್ನ ಜಾತಿಯವರನ್ನು ಮಾತ್ರ ಗೆಲ್ಲಿಸುತ್ತೇನೆ, ನನ್ನ ಜಾತಿಯವನು ಮಾತ್ರ ಮಂತ್ರಿಯಾಗಬೇಕು, ಮುಖ್ಯಮಂತ್ರಿಯಾಗಬೇಕು - ಹೀಗೆ, ನಾವು ಇದರ ಸುತ್ತವೇ ಸುತ್ತಿದರೆ ಇದು ಮತ್ತೆ ಒಂದೇ ಕುಟುಂಬದವರು(ಈಗ ಒಂದೇ ಜಾತಿಯವರು) ರಾಜನಾಗುವುದಕ್ಕಿಂತ ಹೇಗೆ ಭಿನ್ನವಾದಂತಾಗುತ್ತದೆ? Democracy ಅಥವಾ ಪ್ರಜಾಪ್ರಭುತ್ವ ಪ್ರಜೆಗೆ ಕೊಟ್ಟಿರುವ ಅತ್ಯಂತ ದೊಡ್ದ ಶಕ್ತಿ ಎಂದರೆ ಅವನಿಗೆ ‘ಯೋಚಿಸುವ ಶಕ್ತಿ’ಯನ್ನು ಕೊಟ್ಟಿದ್ದು. ಪ್ರತಿ ಚುನಾವಣೆಯಲ್ಲೂ ಅವನು ಯೋಚಿಸಿ ತನ್ನ ರಾಜ ಯಾರಾಗಬೇಕೆಂದು ನಿರ್ಧರಿಸಬಹುದು. ಕೆಲಸ ಮಾಡಿಲ್ಲವೆಂದರೆ ಮುಂದಿನ ಚುನಾವಣೆಯಲ್ಲಿ ಅವನನ್ನು ಬೀಳಿಸಬಹುದು. ಆದರೆ ಆತ ನನ್ನ ಜಾತಿಯವ ಅಂತ ಅವ ಕೆಲಸ ಮಾಡಲಿ, ಬಿಡಲಿ ಅವನನ್ನೇ ಗೆಲ್ಲಿಸಬೇಕೆಂದರೆ - ಇಷ್ಟೆಲ್ಲ ಕಷ್ಟಪಟ್ಟು ಪ್ರಜಾಪ್ರಭುತ್ವವನ್ನು ತಂದಿರೋದು ಏಕೆ?

ರಾಜ್ಯದ ಮುಖ್ಯಮಂತ್ರಿಯ ವಿಚಾರದಲ್ಲೂ ಅಷ್ಟೇ. ರಾಜ್ಯದ ಬಗ್ಗೆ ತಿಳಿದುಕೊಂಡಿರುವ, ರಾಜ್ಯದ ಉದ್ದಗಲವನ್ನು ಸಂಚರಿಸಿ ಅದರ ನಾಡಿಮಿಡಿತವನ್ನು ಅರಿತಿರುವ, ರಾಜ್ಯದ ಬಗ್ಗೆ ಮುಂದಾಲೋಚನೆಯಿರುವ, ವ್ಯವಹಾರದಲ್ಲಿ, ಆಡಳಿತದಲ್ಲಿ ಚಾಣಾಕ್ಷನಾಗಿರುವವರು ರಾಜ್ಯದ ಮುಖ್ಯಮಂತ್ರಿಯಾಗಬೇಕೋ, ಅಥವಾ ಒಬ್ಬರು ಒಂದು ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕೋ? ಹಿಂದಿನ ಕಾಲದಲ್ಲಿ ಪುರೋಹಿತನ ಮಗ ಮಾತ್ರ ಪುರೋಹಿತನಾಗಬೇಕಿತ್ತು. ಬಡಗಿಯ ಮಗ ಬಡಗಿಯೇ ಆಗಬೇಕಿತ್ತು. ಕ್ಷತ್ರಿಯರು ಮಾತ್ರ ರಾಜನಾಗೋ ಕನಸು ಕಾಣಬಹುದಿತ್ತು. ಈಗಲೂ ಒಂದು ಸಮುದಾಯದವರು ಮಾತ್ರ ಮುಖ್ಯಮಂತ್ರಿಯಾಗಬೇಕು ಎಂದರೆ, ಆಗಿನದಕ್ಕೂ ಈಗಿನದಕ್ಕೂ ವ್ಯತ್ಯಾಸವೇನು? ನಾವು ಹಿಮ್ಮುಖವಾಗಿ ಚಲಿಸುತ್ತಿದ್ದೇವೆಯೇ, ಮುಮ್ಮುಖವಾಗೋ?

ಒಬ್ಬ ನಾಯಕನಿಗೆ, ಆತ ಕಾರ್ಪೋರೇಟರ್ ಇರಬಹುದು, ಎಮ್ಮೆಲ್ಲೆ ಇರಬಹುದು, ಮುಖ್ಯಮಂತ್ರಿಯಿರಬಹುದು, ಅಥವಾ ಒಂದು ಬಿಸಿನೆಸ್ ಲೀಡರ್ ಇರಬಹುದು, ಆತನಿಗೆ ಇರಬೇಕಾದ ಏಕೈಕ ಗುಣ ಎಂದರೆ ಒಳಗೂಡಿಸಿಕೊಳ್ಳುವಿಕೆ. ಇದಕ್ಕೆ ಇಂಗ್ಲೀಷಿನಲ್ಲಿ Inclusiveness ಎನ್ನುತ್ತಾರೆ. ಅಂದರೆ, ಬೇರೆಯವರನ್ನು ನಮ್ಮವರು ಎಂದು ಒಳಗೂಡಿಸಿಕೊಳ್ಳುವುದು. ಅವನು ಯಾರೇ ಆಗಿರಲಿ, ಎಡಪಂಥೀಯ, ಬಲಪಂಥೀಯ, ಆ ಪಕ್ಷ, ಈ ಪಕ್ಷ, ಮನುಷ್ಯ, ಪ್ರಾಣಿ, ಗಿಡ-ಮರ, ಕ್ರಿಮಿ-ಕೀಟ ಹೀಗೆ ಅದು ಏನೇ ಆಗಿರಲಿ, ಅವೆಲ್ಲವನ್ನೂ ತನ್ನ ಭಾಗವಾಗಿ ‘ಒಳಗೂಡಿಸಿಕೊಳ್ಳುವ’ ಗುಣ ಒಬ್ಬ ನಾಯಕನಿಗೆ ಇರಬೇಕು. ಆಗ ಮಾತ್ರ ಅವನು ಮನುಷ್ಯರಿಗೆ, ಪ್ರಾಣಿಗಳಿಗೆ, ಪರಿಸರಕ್ಕೆ, ಭೂಮಿಗೆ ಒಳಿತು ಮಾಡಲು ಸಾಧ್ಯ. ಒಬ್ಬರು ಎಷ್ಟು ಸಂಗತಿಗಳನ್ನು ಒಳಗೂಡಿಸಿಕೊಳ್ಳುತ್ತಾರೋ ಅಷ್ಟು ದೊಡ್ಡವರಾಗುತ್ತಾರೆ, ಎಷ್ಟನ್ನು ವಿಂಗಡಿಸಿ ಪ್ರತ್ಯೇಕಿಸುತ್ತಾರೋ ಅಷ್ಟು ತಮ್ಮೊಳಗೇ ಚಿಕ್ಕವರಾಗುತ್ತಾರೆ.

ಹಾಗೆಯೇ ಮತದಾರ ಪ್ರಭುಗಳು ವೋಟು ಹಾಕಿ ಐದು ವರ್ಷ ಸುಮ್ಮನೆ ಕುಳಿತರೆ actually ಮತ್ತೆ ಅದು ‘ಪ್ರಜಾಪ್ರಭುತ್ವ’ ಅಲ್ಲ(ಕೆಲವರು ವೋಟನ್ನೂ ಹಾಕುವುದಿಲ್ಲ, ಅಂಥವರ ವಿಷಯ ಬಿಡಿ).  ಪ್ರಜಾಪ್ರಭುತ್ವ ಎಂದರೆ ಸಕ್ರಿಯವಾಗಿ ಭಾಗವಹಿಸುವಿಕೆ. ನನ್ನ ವಾರ್ಡಿನಲ್ಲಿ, ನನ್ನ ಕ್ಷೇತ್ರದಲ್ಲಿ ಏನಾಗುತ್ತಿದೆ, ಏನಾಗಬೇಕು ಎಲ್ಲವೂ ಪ್ರಜೆಗೆ ತಿಳಿದಿರಬೇಕು. ಪ್ರಜೆಗಳು ಒಗ್ಗಟಿನಲ್ಲಿ ಪ್ರತಿನಿಧಿಗೆ ಆಗಾಗ ಮಾರ್ಗದರ್ಶಿಸುತ್ತಿರಬೇಕು. ನನಗೆ ಗೊತ್ತು - ಒಬ್ಬ ಯಾರೋ ಹೋಗಿ ಹೇಳಿದರೆ ಕೆಲಸವಾಗೋಲ್ಲ. ಪ್ರಜ್ಞಾವಂತ ಪ್ರಜೆಗಳು ಒಕ್ಕೂಟಗಳನ್ನು ರಚಿಸಿಕೊಂಡು ಪ್ರತಿನಿಧಿ ಕೆಲಸ ಮಾಡುವಂತೆ ಮಾಡಬೇಕು. “ಅಯ್ಯೋ ಚೆನ್ನಾಗ್ ಹೇಳಿದ್ರಿ ಸರ್… ಇವೆಲ್ಲ ನಮ್ಮ ದೇಶದಲ್ಲಿ ಕೆಲಸ ಮಾಡುತ್ವೆ?” ಅಂತ ನೀವು ಹೇಳಬಹುದು. ಆದರೆ ನಮ್ಮ ದೇಶದಲ್ಲಿ ರಾಜಕಾರಣಿಗಳು ಉಂಡಾಡಿ ಗುಂಡರಾಗಿರುವುದು, ಭ್ರಷ್ಟರಾಗಿರುವುದು, ಮೈಗಳ್ಳರಾಗಿರುವುದರಲ್ಲಿ ಪ್ರಜೆಗಳ ನಿರ್ಲಕ್ಷ, ಮೇಲೆ ಹೇಳಿದ ಭಾಗವಹಿಸುವಿಕೆಯ ಕೊರತೆ ಹಾಗೂ ಅಸಡ್ಡೆಯೂ ಕಾರಣ ಎಂಬುದನ್ನು ನೀವು ಅಲ್ಲಗೆಳೆಯಲಾಗದು. “ಅಯ್ಯೋ ಈ ರಾಜಕಾರಣಿಗಳೆಲ್ಲ ಮಹಾ ಭ್ರಷ್ಟರು… ಹಾಗೆ ಹೀಗೆ” ಅಂತೆಲ್ಲ ಮನೆಯಲ್ಲಿ ಕುಳಿತು ಹರಟೆ ಹೊಡೆಯುವುದು ಸರಳ. ಆದರೆ ಅವರೂ ನಮ್ಮ ನಿಮ್ಮಂತ ಸಾಮಾನ್ಯರಾಗಿದ್ದವರೇ ಅಲ್ಲಿಗೆ ಹೋದವರು ಎಂಬುದನ್ನು ಮರೆಯಬಾರದು. “ವ್ಯವಸ್ಥೆ ಸರಿಯಿಲ್ಲ” ಎಂದು ಎಲ್ಲರೂ ಆಲಸ್ಯದಿಂದ ಕುಳಿತುಬಿಟ್ಟರೆ ವ್ಯವಸ್ಥೆ ಎಂದೆಂದೂ ಸರಿಯಾಗುವುದಿಲ್ಲ. ಬಹುಶಃ 100% ಪರ್ಫೆಕ್ಟ್ ವ್ಯವಸ್ಥೆ ಎಂದಿಗೂ ಬರುವುದಿಲ್ಲ…ಅವೆಲ್ಲ ಬಾಲಿಶ ಕನಸುಗಳಷ್ಟೆ. ಆದರೆ ಈಗಿರುವುದಕ್ಕಿಂತ ನೂರು ಪಟ್ಟು ಒಳ್ಳೆಯ ವ್ಯವಸ್ಥೆಯನ್ನು ನಾವು ನಿರ್ಮಿಸಬಹುದಲ್ಲ? ನಮ್ಮ ಗುರಿ ಅದಾಗಿರಬೇಕು.

ಚುನಾವಣೆ ಮುಗಿದಿದೆ. ಮತದಾರ ಗುಪ್ತವಾಗಿ ತನ್ನ ತೀರ್ಮಾನವನ್ನು ಮಾಡಿದ್ದಾನೆ. ಮುಂದಿನ ಐದು ವರ್ಷ ಪ್ರಜಾಪ್ರಭುತ್ವ ಆಡಳಿತದಲ್ಲಿರುವಂತೆ ನಾವು ನೋಡಿಕೊಳ್ಳೋಣ. ಆ ಸರ್ಕಾರ, ಈ ಸರ್ಕಾರ, ಯಾವುದೋ ಒಂದು ಸರ್ಕಾರ ಬರುತ್ತೆ. ಬರಲಿ. ಆದರೆ, ಮುಂದಿನ ಐದು ವರ್ಷಗಳ ಕಾಲ ‘ಪ್ರಜಾಪ್ರಭುತ್ವ’ ಆಡಳಿತದಲ್ಲಿರುವಂತೆ ನೋಡಿಕೊಳ್ಳುವುದು ಸಾಮಾನ್ಯರಾದ ನಮ್ಮ ಜವಾಬ್ದಾರಿ.


ಮೊನ್ನೆ CEASEFIRE ಎಂದು ಟ್ರಂಪ್ ಟ್ವೀಟ್ ಮಾಡಿದಾಗ ನಂಬಲೇ ಆಗಿರಲಿಲ್ಲ… ಈ ಮನುಷ್ಯ ಸ್ವಲ್ಪ ಎಡವಟ್ಟು ಜಾಸ್ತಿ… ಏನೋ ಮಾಡಿದ್ದಾನೆ… ನಾವು ಒಪ್ಪಿರಲಿಕ್ಕಿಲ್ಲ ಅನ್ನಿಸಿತ್...