Friday, September 3, 2021

’ಸದ್ಗುರು’ - ಇಡೀ ವಿಶ್ವ ಭಾರತೀಯ ಸಂಸ್ಕೃತಿಯೆಡೆಗೆ ಬೆರಗುಗಣ್ಣಿನೊಂದಿಗೆ ನೋಡುವಂತೆ ಮಾಡುತ್ತಿರುವ ಚೈತನ್ಯ!

'ಸದ್ಗುರು'. ಇವತ್ತು ಆ ಒಂದು ಹೆಸರನ್ನು ಹೇಳಿದರೆ ಕಣ್ಣಲ್ಲಿ ನೀರು ತಂದುಕೊಂಡು ವಿನೀತರಾಗುವ ಲಕ್ಷಾಂತರ ಜನ ನಿಮಗೆ ಕಾಣಸಿಗುತ್ತಾರೆ. ಸದ್ಗುರುಗಳ ಮಾತುಗಳು, ಅವರ ಯೋಗ  ಕಾರ್ಯಕ್ರಮಗಳು, ಇನ್ನರ್ ಇಂಜಿನಿಯರಿಂಗ್ ಹೀಗೆ ಅವರ ಸಮರ್ಪಣೆಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರ ಸಂಪೂರ್ಣ ಪರಿವರ್ತನೆಗೆ ಕಾರಣವಾಗಿದೆ. ಇಂದು ಸದ್ಗುರುಗಳಿಗಾಗಿ ಪೂರ್ಣ ಪ್ರಮಾಣದಲ್ಲಿ ಕೆಲಸಮಾಡುತ್ತಿರುವ ಸಾವಿರಾರು ಜನರಿದ್ದಾರೆ. ತಮಗೆ ಸಮಯ ಸಿಕ್ಕಾಗ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು ಸ್ವಯಂಸೇವೆ ಮಾಡುವ ಲಕ್ಷಾಂತರ ಜನ ಸದ್ಗುರುಗಳ ಬೆನ್ನಹಿಂದಿದ್ದಾರೆ. 


ಈಗ ಸದ್ಗುರು ಎಂದು ಖ್ಯಾತರಾಗಿರುವ ಜಗದೀಶ್ ವಾಸುದೇವ್ ಹುಟ್ಟಿದ್ದು ಮೈಸೂರಿನ ಬಿ.ವಿ. ವಾಸುದೇವ್ ಹಾಗೂ ಸುಶೀಲಾ ದಂಪತಿಗಳಿಗೆ. ಅದು ಒಂದು ತೆಲುಗು ಮಾತನಾಡುವ ಕುಟುಂಬ. ಬಿ.ವಿ. ವಾಸುದೇವ್ ರೈಲ್ವೇ ಇಲಾಖೆಯಲ್ಲಿ ಹಾಗೂ ಮೈಸೂರಿನಲ್ಲಿ ಹೆಸರಾಂತ ಕಣ್ಣಿನ ತಜ್ಞರಾಗಿದ್ದರು. ಸದ್ಗುರುಗಳು ಹೇಳುವ ಪ್ರಕಾರ ಅವರ ತಾಯಿ ಕರುಣಾಮಯಿ. ತಮ್ಮ ಪತಿ ಹಾಗೂ ಮಕ್ಕಳು ಸ್ವಚ್ಛಂದವಾಗಿ ಜೀವಿಸಲು ಸಾಧ್ಯವಾದ ಎಲ್ಲವನ್ನೂ ಮಾಡುವ ಅಪೂರ್ವ ಗೃಹಿಣಿ. ತಂದೆ ಅತ್ಯಂತ ಶಿಸ್ತು ಮತ್ತು ನಿಯತ್ತಿನ ವ್ಯಕ್ತಿ. ಚಿಕ್ಕ ವಯಸ್ಸಿನಲ್ಲಿ ತಮ್ಮ ತಾಯಿ ಅನಾರೋಗ್ಯಕ್ಕೀಡಾದಾಗ ಸರಿಯಾದ ವೈದ್ಯಕೀಯ ಸೌಲಭ್ಯಗಳು ಸಿಗದೆ ಆಕೆಯನ್ನು ಕಳೆದುಕೊಂಡು, ತಾನು ಶತಾಯುಗತಾಯು ಡಾಕ್ಟರ್ ಆಗಲೇಬೇಕೆಂಬ ಛಲದಿಂದ ಡಾಕ್ಟರ್ ಆದವರು. ವೈದ್ಯರಾದ ಬಳಿಕ ಯಾವ ಹೊತ್ತಿನಲ್ಲಿ ಎಲ್ಲೇ ಕರೆಬಂದರೂ, ಕ್ಷಣವೂ ಯೊಚಿಸದೇ ಅಲ್ಲಿ ಧಾವಿಸುವಷ್ಟು ಕರ್ತವ್ಯನಿಷ್ಠೆ. ತಾಯಿ ಮಮತಾಮಯಿ. ಮಕ್ಕಳು ಹಾಗೂ ಪತಿಗೆ ಚೂರೂ ಕುಂದಾಗದಂತೆ ಸಕಲ ವ್ಯವಸ್ಥೆಗಳನ್ನೂ ಅಚ್ಚುಕಟ್ಟಾಗಿ ಮಾಡುವವರು. ತಾಯಿಯ ಕಾಳಜಿ, ನಡವಳಿಕೆ ತಮ್ಮ ವ್ಯಕ್ತಿತ್ವದ ಮೇಲೆ ಹೇಗೆ ಅಪಾರ ಪ್ರಭಾವ ಬೀರಿದೆ ಎಂದು ಸದ್ಗುರು ಆಗಾಗ ನೆನಪಿಸಿಕೊಳ್ಳುತ್ತಿರುತ್ತಾರೆ.

ಜಗ್ಗಿ ಅತ್ಯಂತ ತುಂಟ ಹುಡುಗ. ಶಾಲೆಗೆ ಹೋಗುತ್ತೇನೆ ಎಂದು ಹೇಳಿ ಹೋಗುತ್ತಿದ್ದುದು ಕಾಡು-ಮೇಡು ಅಲೆಯಲು. ಒಮ್ಮೊಮ್ಮೆ ಮನೆಯಲ್ಲಿ ಪತ್ರ ಬರೆದಿಟ್ಟೇ, ಕಾಡಿನ ಚಾರಣಕ್ಕೆಂದು ವಾರಾನುಗಟ್ಟಲೇ ತೆರಳುತ್ತಿದ್ದುದೂ ಉಂಟು. ಶಾಲೆಯಲ್ಲಿ ಶಿಕ್ಷಕರಿಗೆ  ಅತಿ ಹೆಚ್ಚು ಸವಾಲುಗಳನ್ನು ತಂದಿಡುವ ಪೋರ. ತನ್ನ ಸೈಕಲ್ ನಲ್ಲೇ ದಿನವೂ ಹತ್ತಾರು ಮೈಲುಗಳನ್ನು ತುಳಿಯುವ ಮಹಾ ಉತ್ಸಾಹಿ.
ಕಾಲೇಜಿನಲ್ಲಂತೂ ಈ ಯುವಕನ ಆಟಾಟೋಪ ಹೇಳತೀರದು. ಈತ ಕ್ಲಾಸಿನಲ್ಲಿದ್ದರೆ ಉತ್ತರಿಸಲಾಗದ ಹಲವಾರು ಪ್ರಶ್ನೆಗಳನ್ನು ಕೇಳುತ್ತಾನೆ. ನಮಗೂ ತೊಂದರೆ. ಅವನಿಗಂತೂ ನಮ್ಮ ತರಗತಿಗಳಲ್ಲಿರಲು ಕಿಂಚಿತ್ತೂ ಇಷ್ಟವಿಲ್ಲ. ಹಾಗಿದ್ದರೆ ನಿನಗೆ ಅಟೆಂಡೆನ್ಸ್ ಕೊಡುತ್ತೇವೆ, ಏನು ಬೇಕಾದರೂ ಮಾಡಿಕೊಂಡಿರು, ಉಪದ್ರವ ಕೊಡಬೇಡ ಎಂಬ ನಿರ್ಧಾರಕ್ಕೆ ಶಿಕ್ಷಕರು ಬಂದರು. ಜಗ್ಗಿ ಗೆ ಬೇಕಾದದ್ದೂ ಬೇರೇನೂ ಅಲ್ಲವಲ್ಲ?! ಇವೆಲ್ಲದರ ನಡುವೆಯೂ ಫೈನಲ್ ಇಯರ್ ಡಿಗ್ರಿಯನ್ನು ಮೈಸೂರು ಯೂನಿವರ್ಸಿಟಿಯಲ್ಲಿ ರ‍್ಯಾಂಕ್ ನೊಂದಿಗೆ ಸಮಾಪಣೆಗೊಳಿಸಿದ್ದು, ಇವರಿಗಿದ್ದ ತೀಕ್ಷ್ಣ ಬುದ್ಧಿಗೆ ಹಿಡಿದ ಕನ್ನಡಿ.



ಕಾಲೇಜಿನ ಸಮಯದಲ್ಲಿ, ಹಾಗೂ ನಂತರ ಜಗ್ಗಿಗೆ ಬೈಕಿನಲ್ಲಿ ದೇಶವನ್ನೆಲ್ಲ ತಿರುಗುವ ಹೆಬ್ಬಯಕೆ. ಆ ಸಮಯದಲ್ಲಿ ಅವರು ಭಾರತವನ್ನು ಹಲವು ಬಾರಿ ಉತ್ತರದಿಂದ ದಕ್ಷಿಣಕ್ಕೆ, ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ಬೈಕ್ನಲ್ಲೇ ಕ್ರಮಿಸಿದ್ದಾರೆ. ಒಮ್ಮೆ ನೇಪಾಳದ ಗಡಿಗೆ ಹೋಗಿ ಪಾಸ್ ಪೋರ್ಟ್ ಇಲ್ಲ ಎಂಬ ಕಾರಣಕ್ಕೆ ಹಿಂದಿರುಗಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಕಾಲೇಜ್ ನಂತರ, ಜಗ್ಗಿಗೆ construction ಬಿಸಿನೆಸ್ ಅಭೂತಪೂರ್ವವಾಗಿಯೇ ಕೈಹಿಡಿದಿತ್ತು. ಸಾಕಷ್ಟು ಹಣ ಸಂಪಾದನೆಯಾಗುತ್ತಿತ್ತು. ಹೀಗೆ ಎಲ್ಲವೂ ಸರಿಯಿತ್ತು ಎನ್ನುವಾಗ ‘ಆ’ ಘಟನೆ ನಡೆಯಿತು.

ಜಗ್ಗಿ ವಾಸುದೇವ್ ಗೆ ಆಗ 25ರ ವಯಸ್ಸು. ಅವರು ಯೋಗಾಭ್ಯಾಸಗಳನ್ನು ಮಾಡಲು ಶುರುಮಾಡಿ ಆಗಲೇ ಹನ್ನೆರಡು ವರ್ಷವಾಗಿತ್ತು. ಅಂದೂ ಅವರು ಎಂದಿನಂತೆ ಮೈಸೂರಿನ ತಮ್ಮ ಕಚೇರಿಯಲ್ಲಿ ಒಂದಿಷ್ಟು ಕೆಲಸ ಮುಗಿಸಿದ್ದರು. ಮಧ್ಯಾಹ್ನದ ಹೊತ್ತಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಬರುವ ಮನಸ್ಸಾಯಿತು. ಚಾಮುಂಡಿ ಬೆಟ್ಟ ಅವರು ಅಪರೂಪಕ್ಕೆ ಹೋಗುವ ತಾಣ ಅಲ್ಲ. ಅವರು, ಅವರ ಗೆಳೆಯರು ಮನೆಯ ಹಿತ್ತಲಿಗೆ ಹೋಗುವಷ್ಟು ಬಾರಿ ಚಾಮುಂಡಿ ಬೆಟ್ಟಕ್ಕೂ ಹೋಗುತ್ತಿದ್ದರು. ಅವರಿಗೆ ಅದು ಅಂಗೈನ ಗೆರೆಗಳಷ್ಟು ಚಿರಪರಚಿತವಾದ ತಾಣ. ಅಂದೂ ಹಾಗೆಯೇ ಅಲ್ಲಿಗೆ ಹೋದರು. ಬೆಟ್ಟದ ಬಂಡೆಯೊಂದರ ಮೇಲೆ ಕುಳಿತರು. ಕುಳಿತಿದ್ದಷ್ಟೇ, ಒಂದು ಅಭೂತಪೂರ್ವ ಅನುಭಾವ ಅವರದ್ದಾಯಿತು. ಸುತ್ತಲಿನ ಮರ, ಗಿಡ, ಬಂಡೆ, ಬೆಟ್ಟ, ಗಾಳಿ, ನೀರು ಸರ್ವಸ್ವವೂ ತಮ್ಮದೇ ಭಾಗ ಎಂಬ ಜೀವಂತ ಅನುಭವ. ಕಣ್ಣಿನಲ್ಲಿ ಧಾರಾಕಾರ ನೀರು. ಅವರು ಈ ಭಾವದಿಂದ ಹೊರಬಂದಾಗ ಸುಮಾರು 5-6 ಘಂಟೆಗಳು ಕಳೆದಿದ್ದವು! ಆದರೆ ಅವರಿಗೆ ಕೇವಲ ಐದು ನಿಮಿಷವಷ್ಟೇ ಕುಳಿತ ಅನುಭವ. ಈ ಅನುಭವ ಮುಂದಿನ ದಿನಗಳಲ್ಲಿ ಹಲವು ಬಾರಿ ಮರುಕಳಿಸಿತು.



ತಮಗೆ ಆದ ಈ ಅಭೂತಪೂರ್ವ ಅನುಭವವನ್ನು, ತಾವು ಅನುಭವಿಸಿದ ಈ ಎಲ್ಲೆ ಮೀರಿದ ಮಹದಾನಂದವನ್ನು ಜಗತ್ತಿಗೆಲ್ಲ ಹಂಚಬೇಕು ಎಂಬ ಹಿರಿದಾಸೆ ಇವರದಾಯಿತು. ಈ ಶಪಥ ತೊಟ್ಟು, ತಮ್ಮ ಇಡೀ ಜೀವನವನ್ನೇ ಅದಕ್ಕಾಗಿ ಮುಡಿಪಾಗಿಟ್ಟರು.

ಆರಂಭದ ದಿನಗಳು ಸುಲಭವಿರಲಿಲ್ಲ. ತಾವೇ ಎಲ್ಲಾಕಡೆ ಬೈಕ್ ನಲ್ಲಿ ಕ್ರಮಿಸಿ, ತಾವೇ ಸ್ಥಳಗಳನ್ನು ಹುಡುಕಿ, ಜನರ ಮನವೊಲಿಸಿ, ಅವರಿಗೆ ಯೋಗ ಕಾರ್ಯಕ್ರಮಗಳನ್ನು ಮಾಡುವಷ್ಟರಲ್ಲಿ ಹರಸಾಹಸವೇ ಆಗುತ್ತಿತ್ತು. ಬಹುಶಃ ಇವರು ಆ ದಿನಗಳಲ್ಲಿ ಲಕ್ಷ್ಮಣನಂತೆ ನಿದ್ರಿಸಿದ್ದೇ ಇಲ್ಲ. ಒಂದು ದಿನ ಮೈಸೂರಾದರೆ, ಮತ್ತೊಂದು ದಿನ ಮಂಗಳೂರು ಅಥವಾ ಶಿವಮೊಗ್ಗ. ಮುಂದಿನವಾರ ಹೈದರಾಬಾದ್! ಹೀಗೆ. 

ನಿಧಾನವಾಗಿ ಶಿಷ್ಯರನ್ನು, ಸ್ವಯಂಸೇವಕರನ್ನು ಸಂಪಾದಿಸುತ್ತಾ, 1992ರಲ್ಲಿ ಇವರು ಸ್ಥಾಪಿಸಿದ್ದು ‘ಈಶಾ ಫೌಂಡೇಶನ್’. ಸದ್ಗುರು ಪ್ರಾಣಪ್ರತಿಷ್ಠೆಯ ವಿಜ್ಞಾನದಲ್ಲಿ ನಿಸ್ಸೀಮರು. 1999ರಲ್ಲಿ ‘ಧ್ಯಾನಲಿಂಗ’ ಎಂಬ ಅದ್ಭುತ ಲಿಂಗವನ್ನು ಪ್ರಾಣಪತಿಷ್ಠೆಗೊಳಿಸಿದರು. ಈ ಲಿಂಗದ ವೈಶಿಷ್ಟ್ಯವೆಂದರೆ, ಇದರಲ್ಲಿ ಎಲ್ಲಾ ಏಳೂ ಚಕ್ರಗಳೂ ಅತ್ಯುನ್ನತ ಶಿಖರದಲ್ಲಿವೆ. ಇಂಥಹ ಲಿಂಗ ಮತ್ತೊಂದು ಸಿಗಲಾರದು. ಇದರ ಮಂಟಪದಲ್ಲಿ ಕುಳಿತರೆ, ಇನ್ಯಾವ ಸಹಾಯವೂ ಇಲ್ಲದೇ ನೀವು ಧ್ಯಾನಸ್ಥರಾಗಬಲ್ಲಿರಿ. ಕೊಯಮತ್ತೂರಿಗೆ ಹೋದಾಗ, ನೀವು ಇಲ್ಲೊಮ್ಮೆ ಭೇಟಿ ನೀಡಬೇಕು.


                                                    (ಚಿತ್ರ: ಧ್ಯಾನಲಿಂಗ, ಕೊಯಮತ್ತೂರು)
ಸದ್ಗುರು ತಮ್ಮ ಜ್ಞಾನಸುಧೆಯನ್ನು ಕಳೆದೆರಡು ದಶಕಗಳಿಂದ ವಿಶ್ವದ ಮುಂದೆ ಹರವಿಟ್ಟ ಬಗೆಯೇ ಬೆರಗುಹುಟ್ಟಿಸುವಂಥದ್ದು! ಸದ್ಗುರು ಬಹುಶಃ ಮಾತನಾಡದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವೇದಿಕೆಗಳೇ ಇಲ್ಲ. ಅದು ವಿಶ್ವಸಂಸ್ಥೆಯಾಗಿರಬಹುದು, ಯುನೆಸ್ಕೊ ಆಗಿರಬಹುದು, ವರ್ಲ್ಡ್ ಇಕೊನಾಮಿಕ್ ಫಾರ್ಮ್ ಆಗಿರಬಹುದು, ವಿಶ್ವಪ್ರಸಿದ್ಧ ಆಕ್ಸ್ ಫರ್ಡ್, ಕೇಂಬ್ರಿಡ್ಜ್, ಟೆಡ್ ಆಗಿರಬಹುದು, ಭಾರತದ ಐಐಟಿ, ಐಐಎಮ್ ಗಳಿರಬಹುದು ಸದ್ಗುರುವಾಣಿ ಇಲ್ಲೆಲ್ಲ ಪ್ರತಿಧ್ವನಿಸಿದೆ. ವಿಶ್ವಪ್ರಸಿದ್ಧ ವಿಜ್ಞಾನಿಗಳು, ವಿದ್ವಾಂಸರು ಎಲ್ಲರೂ ಸದ್ಗುರುಗಳೊಂದಿಗೆ ಸಂವಾದ ನಡೆಸಿದ್ದಾರೆ ಹಾಗೂ ಇವರ ಅಪಾರ ಜ್ಞಾನಕ್ಕೆ ತಲೆದೂಗಿದ್ದಾರೆ.




ಅವರ ಯೋಗ ಕಾರ್ಯಕ್ರಮಗಳೂ ವಿಶ್ವಮಟ್ಟದಲ್ಲಿ, ಬಹಳ ದೊಡ್ದ ಸ್ಕೇಲ್ ನಲ್ಲಿ ಅರ್ಪಿತವಾಗುತ್ತಾ ಬಂದಿವೆ. ಇಂದು ಬಹುಶಃ 500-700 ಮಿಲಿಯನ್ ಜನ ವಿಶ್ವದಾದ್ಯಂತ ಇನ್ನರ್ ಇಂಜಿನಿಯರಿಂಗ್ ಮಾಡಿದ್ದಾರೆ. ಈಶಾ ಸಂಪೂರ್ಣ ಸ್ವಯಂಸೇವಕರಿಂದಲೇ ನಡೆಯುತ್ತಿರುವ ಸಂಸ್ಥೆ. ಸುಮಾರು 10 ಮಿಲಿಯನ್ ಗೂ ಅಧಿಕ ಸ್ವಯಂಸೇವಕರು ಈ ಸಂಸ್ಥೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  
ಸದ್ಗುರು ಸೃಷ್ಟಿಸಿದ ‘ರ‍್ಯಾಲಿ ಫಾರ್ ರಿವರ್ಸ್’ ಜಗತ್ತಿನ ಅತ್ಯಂತ ದೊಡ್ಡ ಪರಿಸರ ಸಂರಕ್ಷಣಾ ಆಂದೋಲನವಾಯಿತು. ದೇಶದಾದ್ಯಂತ 16 ಕೋಟಿ ಜನ ಇದನ್ನು ಬೆಂಬಲಿಸಿದರು. ಪಕ್ಷಭೇದ ಮರೆತು 15 ರಾಜ್ಯಸರ್ಕಾರಗಳು ಬೆಂಬಲಕ್ಕೆ ನಿಂತವು. ಇವೆಲ್ಲದರ ಪರಿಣಾಮ ರ‍್ಯಾಲಿ ಫಾರ್ ರಿವರ್ಸ್ ನ ನೀತಿಯನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ರಾಜ್ಯಗಳಿಗೆ ಶಿಫಾರಸ್ಸು ಮಾಡಿತು. ಒಂದು ಅನುಕರಣೀಯ ಮಾಡೆಲ್ ಆಗಿ ಕಾವೇರಿಯನ್ನು ಆಯ್ದುಕೊಂಡು, ಈಶಾ ಫೌಂಡೇಶನ್ ಕಳೆದೆರಡು ವರ್ಷಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಅಪಾರ ಕೆಲಸಗಳನ್ನು ಮಾಡುತ್ತಿದೆ. ಇದು ರೈತರಿಗೆ ಅಪಾರ ಲಾಭ ತರಬಲ್ಲ ಹಾಗೂ ಕಾವೇರಿಯ ಪುನರುಜ್ಜೀವನಕ್ಕೂ ಕಾರಣವಾಗಬಲ್ಲ ’ಅರಣ್ಯ ಕೃಷಿ’ಯ ಕೆಲಸ. 2020ರ ಸಾಲಿನಲ್ಲಿ ಅಮೋಘ 1.1 ಕೋಟಿ ಸಸಿಗಳನ್ನು ಜಲಾನಯನ ಪ್ರದೇಶದಲ್ಲಿ ನೆಡಲಾಗಿದೆ. 12 ವರ್ಷಗಳಲ್ಲಿ 242 ಕೋಟಿ ಸಸಿಗಳನ್ನು ನೆಡಬೇಕೆಂಬುದು ಗುರಿ. ಇವೆಲ್ಲ ಸಾಧ್ಯವಾದದ್ದು ಸದ್ಗುರುಗಳ ವರ್ಚಸ್ಸು ಹಾಗೂ ಅಪಾರ ಶ್ರಮದಿಂದ. 


ಇಂದು ವಿಶ್ವಸಂಸ್ಥೆಗೆ ನೀರಿನ ಬಗ್ಗೆ, ಪರಿಸರದ ಬಗ್ಗೆ, ಮಣ್ಣಿನ ಬಗ್ಗೆ ಮಾತನಾಡಲೂ ಸದ್ಗುರು ಬೇಕು, ಅಂತರಾಷ್ಟ್ರೀಯ ಯೋಗ ದಿನಕ್ಕೂ ಸದ್ಗುರು ಬೇಕು. ಇವರ ಜ್ಞಾನಸುಧೆಯನ್ನು, ಪರಿಸರ ಕಾರ್ಯಕ್ರಮಗಳನ್ನು ವಿಶ್ವವೇ ಬೆರಗುಗಣ್ಣುಗಳಿಂದ ನೋಡುತ್ತಿದೆ. ಇವರ ಕೆಲಸಗಳನ್ನು ಮನ್ನಿಸಿ, ಸರ್ಕಾರ ಪರಿಸರದ ಕೆಲಸಗಳಿಗಾಗಿ ಭಾರತದ ಅತ್ಯುನ್ನತ ಪುರಸ್ಕಾರವಾದ ’ಇಂದಿರಾಗಾಂಧಿ ಪರ್ಯಾವರಣ್ ಪುರಸ್ಕಾರ್’ಅನ್ನು ಹಾಗೂ ಅತ್ಯುನ್ನತ ವಾರ್ಷಿಕ ನಾಗರೀಕ ಪ್ರಶಸ್ತಿ ’ಪದ್ಮವಿಭೂಷಣ’ಗಳು ಇವರನ್ನು ಹುಡುಕಿಕೊಂಡು ಬಂದಿವೆ. ಇವರ ಯೋಗ ಕಾರ್ಯಕ್ರಮಗಳಲ್ಲಿ ವಿಶ್ವದ ಕೋಟ್ಯಂತರ ಜನರು ಮಿಂದೇಳುತ್ತಿದ್ದಾರೆ. ಅವರ ಬದುಕನ್ನು ಅದು ಸಂಪೂರ್ಣವಾಗಿ ಬದಲಿಸಿದ್ದನ್ನು ಅವರೇ ಹೇಳಿಕೊಳ್ಳುತ್ತಾರೆ. ಬೆಂಗಳೂರಲ್ಲೇ ಅವರ ಕಾರ್ಯಕ್ರಮಗಳನ್ನು ಮಾಡಿದ ಡಾಕ್ಟರುಗಳು, ಇಂಜಿನಿಯರುಗಳು, ವಿಜ್ಞಾನಿಗಳು, ವಿದ್ಯಾರ್ಥಿಗಳು ಹೀಗೆ ಲಕ್ಷಾಂತರ ಜನ ನಿಮಗೆ ಸಿಗುತ್ತಾರೆ. ಅಪಾರ ಕೃತಜ್ಞತೆಯಿಂದ ಸದ್ಗುರುಗಳನ್ನು ಪೂಜಿಸುತ್ತಾರೆ. 
ಇಂಥವರು ಭಾರತದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಹಾಗೂ ಹೆಮ್ಮೆ. ಇಂಥಹ ಸಂತರು ಮತ್ತು ಋಷಿಗಳಿಂದಲೇ ಭಾರತ ಮಾತೆ ವಿಶ್ವದಾದ್ಯಂತ ತನ್ನ ಅಪಾರ ಅಧ್ಯಾತ್ಮ ಹಾಗೂ ಜ್ಞಾನ ಸಂಪತ್ತನ್ನು ಬೀರಲು ಸಾಧ್ಯವಾಗಿರುವುದು. ಇವರು ಮತ್ತಷ್ಟು ಜನರ ಬದುಕಿನ ದಾರಿದೀಪವಾಗಲಿ. ಭಾರತದ ಅಧ್ಯಾತ್ಮ ಸಂಪತ್ತು ‘ಜಗ’ಮಗಿಸಲಿ.

Wednesday, August 18, 2021

ಮೈಮರೆಯದಿರಿ, ಸ್ವಾತಂತ್ರ್ಯ ಅಷ್ಟು ಹಗುರವಾದ ವಸ್ತುವಲ್ಲ!


ನಿನ್ನೆ ನಮ್ಮ ಸ್ವಾತಂತ್ರ್ಯೋತ್ಸವದ ದಿನವೇ ಈ ಘಟನೆ ನಡೆದಿದ್ದು ಕಾಕತಾಳೀಯ. ಅಫ್ಘಾನಿಸ್ತಾನ ತಾಲಿಬಾನ್ ನ ತೆಕ್ಕೆಗೆ ಬಿದ್ದಿದೆ. ಅಲ್ಲಿನ ಸರ್ಕಾರ ಉಗ್ರ ಪಡೆಗಳ ಮುಂದೆ ಮಂಡಿಯೂರಿ ಕುಳಿತಿದೆ.

ಯಾಕೆ ನಮ್ಮ ಸ್ವಾತಂತ್ರ್ಯೋತ್ಸವನ್ನು ಇದಕ್ಕೆ ಲಿಂಕ್ ಮಾಡಿದೆ ಎಂದರೆ ಈ ಘಟನೆ ನಮಗೆ ಒಂದು Reminder ಆಗಬೇಕು. ಸ್ವಾತಂತ್ರ್ಯ ಅಂದರೆ ಏನು? ಅದರ ಬೆಲೆ ಎಂಥದ್ದು? ನಾವು ಎಂಥಹ ಮಹತ್ವದ ಸಾಧ್ಯತೆಯಲ್ಲಿ ಬದುಕುತ್ತಿದ್ದೇವೆ ಎಂಬುದು ನಮಗೆ ಅರಿವಾಗಬೇಕು.

ಯಾವುದೇ ದೇಶವಿರಲಿ, ಯಾವುದೇ ಸಮಾಜವಿರಲಿ, ಅದನ್ನು ಪೋಷಿಸಲು, ಸುಸ್ಥಿತಿಯಲ್ಲಿ ಇಡಲು, ಹಲವಾರು ವ್ಯವಸ್ಥೆಗಳು ಸಾಮರಸ್ಯದಲ್ಲಿ ಕೆಲಸಮಾಡಬೇಕಾಗುತ್ತದೆ. ಆ ದೇಶದ ಆಡಳಿತ ವ್ಯವಸ್ಥೆ, ರಕ್ಷಣಾ ವ್ಯವಸ್ಥೆ, ಆಹಾರ ಉತ್ಪಾದನೆ/ಕೃಷಿ, ಸಂಚಾರ, ವಿವಿಧ ಸರಕು-ಸಾಮಗ್ರಿಗಳ ಸಾಗಣೆ,  ಶಿಕ್ಷಣ ಹೀಗೆ ಹಲವು ವ್ಯವಸ್ಥೆಗಳು ಒಂದು ಮಟ್ಟಿಗಿನ ಶಿಸ್ತಿನಲ್ಲಿ, ಬದ್ಧತೆಯಲ್ಲಿ ಕೆಲಸಮಾಡಬೇಕಾಗುತ್ತದೆ. ಇಲ್ಲ ಅಂದರೆ ಆ ದೇಶವಿಲ್ಲ. ಸಮಾಜವಿಲ್ಲ.


ನಮ್ಮ ದೇಶ 1947ರಲ್ಲಿ ಸ್ವತಂತ್ರವಾದಾಗ ಶ್ರೀಮಂತ ದೇಶವಾಗಿರಲಿಲ್ಲ. ಕೋಟ್ಯಂತರ ಜನರಿಗೆ ಹೊಟ್ಟೆಗೆ ಹಿಟ್ಟಿರಲಿಲ್ಲ. ನಮಗೆ ಸ್ವಾತಂತ್ರ್ಯ ಬಂದಾಗ ಈ ದೇಶದಲ್ಲಿ Life Expectancy ಅಂದರೆ ಸರಾಸರಿ ಪ್ರಜೆಯೊಬ್ಬ ಬದುಕುವ ಕಾಲ ಕೇವಲ 33 ವರ್ಷ ಆಗಿತ್ತು ಎಂದರೆ ನಂಬುವಿರೇ? ಅಂಥಹ ದೇಶವನ್ನು ಸಂಭಾಳಿಸುವುದು, ಮುನ್ನಡೆಸುವುದು, ಜನರಿಗೆ ಗೌರವಾನ್ವಿತ ಬದುಕನ್ನು ಒದಗಿಸುವುದು ಖಂಡಿತ ಸುಲಭದ ಕೆಲಸವಾಗಿರಲಿಲ್ಲ.

ಅಂದಿನಿಂದ ಇಂದಿನವರೆಗೆ ಬಹಳ ಸುಧಾರಣೆಗಳಾಗಿವೆ. ಭಾರತ ಆಹಾರದಲ್ಲಿ ತನ್ನ ಕಾಲ ಮೇಲೆ ತಾನು ನಿಂತಿದೆ. ನಡೆದ 5 ಯುದ್ಧಗಳಲ್ಲಿ ನಾಲ್ಕನ್ನು ಗೆದ್ದಿದೆ. ಸದೃಢ ಸೈನ್ಯವನ್ನು ನಿರ್ಮಿಸಿಕೊಂಡಿದೆ. ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಉಪಗ್ರಹಗಳ ಮೂಲಕ ಸಂಪರ್ಕ ವ್ಯವಸ್ಥೆಗೆ ಸ್ವಾವಲಂಬಿಯಾಗಿದೆ. ಆಣೆಕಟ್ಟುಗಳು, ವಿದ್ಯುತ ಉತ್ಪಾದನಾ ಘಟಕಗಳು, ಒಳ್ಳೆಯ ರೋಡುಗಳು ನಿರ್ಮಾಣವಾಗಿವೆ. ವಿಶ್ವದ ಅನೇಕ ದೇಶಗಳ ಮುಂದೂ ಭಾರತ ಮಿಂಚುತ್ತಿದೆ. ನಮ್ಮಲ್ಲಿ ಬಹಳ ಸಮಸ್ಯೆಗಳು ಇಂದಿಗೂ ಇವೆ. ಅದು ಎಲ್ಲರೂ ಒಪ್ಪಿಕೊಳ್ಳಬೇಕಾದ ಸತ್ಯ. ಆದರೆ, ಒಂದು ಮಟ್ಟಿಗಿನ ಗೌರವಯುತ ಜೀವನವನ್ನು ನಾವೆಲ್ಲರೂ ನಿರ್ವಹಿಸುತ್ತಿದ್ದೇವೆ.


ಆದರೆ ಈ ಸ್ವಾತಂತ್ರ್ಯ, ಈ ಗೌರವ, ಈ ಆರೋಗ್ಯ, ಈ ಹಣ, ಈ ಉಪಗ್ರಹಗಳು, ಸೈನ್ಯ, ರಸ್ತೆಗಳು, ಶಾಲೆಗಳು ಇವೆಲ್ಲವೂ ಸುಮ್ಮನೆ ಬಂದಿದ್ದಲ್ಲ. ಈ ದೇಶವನ್ನು ಇಲ್ಲಿಗೆ ತರಲು ಕೋಟ್ಯಂತರ ಜನ ಜೀವವನ್ನೇ ಕೊಟ್ಟಿದ್ದಾರೆ. ಇಂದಿಗೂ ಕೊಡುತ್ತಿದ್ದಾರೆ. ನಾವಿಂದು ರಾತ್ರಿ ನೆಮ್ಮದಿಯಿಂದ ಮಲಗುತ್ತೇವೆ ಎಂದರೆ ಕಾರಣ, ಅದಕ್ಕೆ ಗಡಿಯಲ್ಲಿ ನಮ್ಮನ್ನು ಕಾಯುತ್ತಿರುವ ಸೈನಿಕ. ಆತನಿಗೂ ಹೆಂಡತಿ, ಮಕ್ಕಳಿದ್ದಾರೆ. ಕುಟುಂಬ ಇದೆ. ಆದರೂ ಆತ ಶತ್ರುವಿಗೆ ಎದೆಕೊಟ್ಟು ನಮ್ಮನ್ನು ಕಾಯಲು ಸಿದ್ಧನಿದ್ದಾನೆ. ರೈತರು ಒಳ್ಳೆಯ ಆರ್ಥಿಕ ಸ್ಥಿತಿಯಲ್ಲಿ ಇಲ್ಲ. ಆದರೂ ಅವರು ಧೃತಿಗೆಡದೆ ಕೃಷಿ ಮಾಡುತ್ತಿದ್ದಾರೆ. ಆ ಕಾರಣಕ್ಕಾಗಿ ಇವತ್ತು ನಮ್ಮ ಪ್ಲೇಟಿನಲ್ಲಿ ಅನ್ನವಿದೆ. ಹೀಗೆ ವಿವಿಧ ರೀತಿಯ ಕಾರ್ಮಿಕರು, ತಂತ್ರಜ್ಞರು, ರಕ್ಷಕರು, ಶಿಕ್ಷಕರು, ಆಡಳಿತಗಾರರು ಎಲ್ಲರೂ ತಮ್ಮದೇ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯಾಕೆ ಇವನ್ನೆಲ್ಲ ಹೇಳುತ್ತಿದ್ದೇನೆ ಎಂದರೆ - ಇದು ಒಂದು ಸೂಕ್ಷ್ಮ ವ್ಯವಸ್ಥೆ. ಇದರ ಬೆಲೆ ಅರಿಯದೆ ನಾವು ಒಂದು ಸ್ವಲ್ಪ ಮೈಮರೆತರೂ ಶತ್ರು ಕಾಯುತ್ತ ಕುಳಿತಿದ್ದಾನೆ. ಶತ್ರು ಎಂದಾಕ್ಷಣ ಅವ ಗಡಿಯ ಹೊರಗೆ ಇರುವವ ಮಾತ್ರ ಅಂತಲ್ಲ. Ofcourse, ಗಡಿಯ ಸುತ್ತಲೂ ಇದ್ದಾನೆ. ಆದರೆ ಒಳಗೂ ಈಗಾಗಲೇ ಹಲವರು ಇದ್ದಾರೆ. ಅಥವಾ ಒಮ್ಮೆ ಈ ವ್ಯವಸ್ಥೆ ತಲೆಕೆಳಗಾದರೆ, ನಮ್ಮಲ್ಲೇ ಅನೇಕರು ಹುಟ್ಟಿಕೊಳ್ಳಲೂಬಹುದು! ಸಾಧ್ಯವಿದೆ ಅಲ್ಲವೇ? ಸಾಮಾಜಿಕ ವ್ಯವಸ್ಥೆ ತಲೆಕೆಳಗಾದಾಗ ಸಾರ್ವಜನಿಕರೇ ಆಂತರಿಕ ಶತ್ರುಗಳಾಗಿ ಬದಲಾಗುತ್ತಾರೆ ಅಲ್ಲವೇ?

ಆದ್ದರಿಂದ ದೇಶದಲ್ಲಿ ಸುವ್ಯವಸ್ಥೆಯನ್ನು, ಸದೃಢ ಸಮಾಜವನ್ನು ಕಾಪಿಟ್ಟುಕೊಳ್ಳುವುದು ಬಹಳ ಮುಖ್ಯ. ನಮ್ಮ ದೇಶ ಎಂಬ ಹಿರಿಮೆಯನ್ನು, ಭಾವನೆಯನ್ನು, ಸಾಮಾಜಿಕ ಪ್ರಜ್ಞೆಯನ್ನು ಕಾಪಿಟ್ಟುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಆಗ ಮಾತ್ರ ಈ ದೇಶದಲ್ಲಿ ಸದೃಢ ಸಮಾಜ ಹಾಗೂ ವ್ಯವಸ್ಥೆ ಇರಲು ಸಾಧ್ಯ. ಸ್ವಾತಂತ್ರ್ಯ ನಂತರ ಕಟ್ಟಿಕೊಂಡಿರುವ ಅನೇಕ ಸಂಗತಿಗಳು ಉಳಿಯಲು ಸಾಧ್ಯ. ನಾವು ನೆನಪಿಟ್ಟುಕೊಳ್ಳಬೇಕಾದ ವಿಷಯ ಎಂದರೆ, “ಸಮಾಜದಲ್ಲಿ ಅನ್ಯಾಯವಾಗುತ್ತಿದೆ” ಎಂಬ ವಿಚಾರ ಬಂದಾಗ ಆ ಸಮಾಜ ಎಂಬುದು ನಾನೇ/ವೇ ಎಂಬುದನ್ನು ನೆನಪಿಸಿಕೊಳ್ಳಬೇಕು. ಆ ಸಮಸ್ಯೆಯ ಜವಾಬ್ದಾರಿಯನ್ನು ನಾವು ಹೊತ್ತುಕೊಳ್ಳಬೇಕು. ನಮ್ಮ ಕೈಯಲ್ಲಿ ಏನು ಸಾಧ್ಯವೋ ಅದನ್ನು ಕುಂದಿಲ್ಲದಂತೆ ಮಾಡಬೇಕು. ಎಲ್ಲಾ ಸಮಸ್ಯೆಗಳು ಪರಿಹಾರವಾಗುವುದೇ? ಇಲ್ಲ. ಸಮಸ್ಯೆಗಳಿಲ್ಲದ ಸಮಾಜ ಇಲ್ಲ. ಆದರೆ ಇನ್ನಷ್ಟು ಸಾಮರಸ್ಯದ ಹಾಗೂ ಆರೋಗ್ಯವಾದ ಸಮಾಜವನ್ನು ಖಂಡಿತವಾಗಿ ನಿರ್ಮಿಸಬಹುದು.

ನಾವು, ನಾವೇ ನಿರ್ಮಿಸಿಕೊಂಡ ವ್ಯವಸ್ಥೆಗಳ, ಪಡೆದುಕೊಂಡ ಸ್ವಾತಂತ್ರ್ಯದ, ಪ್ರಜಾಪ್ರಭುತ್ವದ ಮಹತ್ವವನ್ನು ಯಾವ ಕ್ಷಣವೂ ಮರೆಯಬಾರದು. ಹಾಗೂ ನಾವು ಇಂದು ಸುರಕ್ಷಿತವಾಗಿ ಬದುಕಲು ಸಮಾಜದ ಅನೇಕರು ಕೊಡುಗೆ ನೀಡುತ್ತಿದ್ದಾರೆ ಎಂಬುದನ್ನು ಮರೆಯಬಾರದು. ಸಮಸ್ಯೆಗಳು ಬಂದಾಗ ಅದರ ಜವಾಬ್ದಾರಿಯನ್ನು ತೆಗೆದುಕೊಂಡು ನಿರ್ವಹಿಸಬೇಕು. ಕೋಮು, ಜಾತಿ, ರಾಜ್ಯ, ಧರ್ಮ, ಭಾಷೆ ಇವುಗಳ ಹೆಸರಿನಲ್ಲಿ ವೈಮನಸ್ಯಗಳನ್ನು, ವಿಭಜನೆಗಳನ್ನು ಸೃಷ್ಟಿಸಿಕೊಳ್ಳಬಾರದು. ನಮ್ಮ ನಡುವೆ ವಿಷ ಬಿತ್ತಲು ಯಾರದರೂ ಪ್ರಯತ್ನಿಸಿದರೆ, ಅಂತಹ ಶಕ್ತಿಗಳನ್ನು ಹೆಡೆಮುರಿಕಟ್ಟುವ ಬದ್ಧತೆ ನಮ್ಮಲ್ಲಿರಬೇಕು. ಅಂಥದ್ದಕ್ಕೆ ಸೊಪ್ಪು ಹಾಕುವಷ್ಟು ಮೂರ್ಖರಾಗಬಾರದು.

ಇಂಥಹ ಪ್ರಜ್ಞೆಯಿಂದ, ಪರಸ್ಪರ ಗೌರವ ಹಾಗೂ ಕೃತಜ್ಞತೆಯಿಂದ ಬದುಕಿದರೆ ಬಲಿಷ್ಠ ರಾಷ್ಟ್ರವಾಗಿ, ನಾವು ವಿಶ್ವಕ್ಕೇ ಮಾದರಿಯಾಗುವುದರಲ್ಲಿ ಸಂಶಯವಿಲ್ಲ. ಸಾಮರಸ್ಯದಿಂದ, ಪ್ರಜ್ಞಾಪೂರ್ವಕವಾಗಿ ಬದುಕುವ ಬದ್ಧತೆಯನ್ನು ತೆಗೆದುಕೊಳ್ಳೋಣ. ನಮ್ಮ ಮುಂದೆಯೇ ಅಫ್ಘಾನ್ ನ ಉದಾಹರಣೆಯಿರುವುದರಿಂದ, ಈ ಬದ್ಧತೆಯನ್ನು ಮರುಸ್ಥಾಪಿಸಿಕೊಳ್ಳಲು, ಮತ್ತಷ್ಟು ಬಲಪಡಿಸಿಕೊಳ್ಳಲು ಇದಕ್ಕಿಂತ ಸುಸಮಯ ಇಲ್ಲ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭಾಶಯಗಳು.


~ ಸಂಕೇತ್ ಡಿ ಹೆಗಡೆ

Wednesday, July 7, 2021

ಧೋನಿ!



ಧೋನಿ. ಈತ ಅನೇಕ ಕ್ರಿಕೆಟಿಗರಲ್ಲಿ ವಿಶಿಷ್ಟವಾಗಿ ನಿಲ್ಲುವವ. ಬಹುಶಃ, ವಿಶ್ವ ಕ್ರಿಕೆಟ್ ಕಂಡ ಅತ್ಯಂತ ವಿಶಿಷ್ಟ ಕ್ಯಾಪ್ಟನ್ ಗಳಲ್ಲಿ ಒಬ್ಬ.


ಈತನಿಗೆ ಮೆರಗು ನೀಡುವುದು ಈತನ ‘ಕೂಲ್ ಹೆಡ್’. ಎಂಥಹದ್ದೇ ಸಂದರ್ಭವಿರಲಿ, ಈತ ಮಂಡೆಬಿಸಿಮಾಡಿಕೊಂಡಿದ್ದು ಕಡಿಮೆ. ಸಂಭ್ರಮದ ಸಮಯಗಳಲ್ಲೂ ಆವೇಶ ತೋರಿಸಿದ್ದು ಕಡಿಮೆ.

ಬಹುಶಃ ಈ ನಿಶ್ಚಲ ಮನಸ್ಸೇ, ಆತನ ಅಗಾಧ ಬುದ್ಧಿವಂತಿಕೆ, ಸಮಯಪ್ರಜ್ಞೆ ಮುಂತಾದವುಗಳಿಗೆ ಕಾರಣವೂ ಇರಬಹುದು.


ಧೋನಿ ಫೀಲ್ಡಿನಲ್ಲಿದ್ದರೆ, ಅದೇನೋ ಒಬ್ಬ ಮೆಚ್ಯೂರ್ಡ್ ಮನುಷ್ಯ ಫೀಲ್ಡಿನಲ್ಲಿದ್ದಾನೆ ಎಂಬ ಅಭಯ. ಈತನಿಗೆ ಎಲ್ಲಿ ಹೇಗೆ ಆಡಬೇಕು ಎಂದು ಗೊತ್ತು ಎಂಬ ಧೈರ್ಯ. ಕೆಲವೊಂದು ಪಂದ್ಯಗಳಲ್ಲಿ, ಫಿನಿಷರ್ ಆಗಿ ಬಂದು ಸೋಲುವ ಪಂದ್ಯಗಳನ್ನು ಗೆಲ್ಲಿಸಿದ್ದರ ಹಿಂದೂ ಈತನ ಸಮಚಿತ್ತತೆಯ ಪಾತ್ರ ಬಹುದೊಡ್ಡದಿದೆ ಎಂಬುದು ನನ್ನ ಭಾವನೆ.


ಭಾರತದ ತುಂಬೆಲ್ಲ ಕ್ರಿಕೆಟ್ಟೆ ಕುಣಿದಾಡುತ್ತಿದ್ದರೂ, ಇಲ್ಲಿ ಅದೊಂದು ಧರ್ಮವೇ ಆಗಿಹೋಗಿದ್ದರೂ, ಭಾರತೀಯ ಕ್ರಿಕೆಟ್ ನ ಅಂತರಾಷ್ಟ್ರೀಯ ಪರ್ಫಾರ್ಮೆನ್ಸ್ ತೀರಾ ಟಾಪ್ ಕ್ಲಾಸ್ ಇರಲಿಲ್ಲ. ವಿಶ್ವಕಪ್ ಅಂತೂ ಬಹುದೊಡ್ದ ಮರೀಚಿಕೆಯೇ ಆಗಿತ್ತು.


ಆ ಸಮಯದಲ್ಲಿ ಬಂದ ಧೋನಿ ಮಾಡಿದ್ದು ಮ್ಯಾಜಿಕ್ ಅಂತಲೇ ಹೇಳಬೇಕು. 2007ರ ಟಿ-20 ವಿಶ್ವಕಪ್ ಕ್ಯಾಪ್ಟನ್ ಆಗಿ ಆತನ ಮೊದಲ ಟೂರ್ನಿ. ಆ ಟೂರ್ನಿಯ ಮೊದಲ ಮ್ಯಾಚ್, ಕ್ಯಾಪ್ಟನ್ ಆಗಿ ಆತನ ಮೊದಲ ಮ್ಯಾಚ್! ಬಂದ ಮೆಟ್ಟಿನಲ್ಲೇ ವಿಶ್ವಕಪ್ ಗೆದ್ದು ವಿಶ್ವವನ್ನೆಲ್ಲ ನಿಬ್ಬೆರಗಾಗಿಸಿದ್ದ ಪೋರ ಈತ! 


ನಂತರ 2011ರ ಏಕದಿನ ಪಂದ್ಯಗಳ ವಿಶ್ವಕಪ್ ಅಂತೂ, ಎಲ್ಲರಿಗೂ ಗೊತ್ತಿರುವ ವಿಷಯವೇ ಬಿಡಿ.

ನನ್ನ ಪ್ರಕಾರ ನಾವು ಆತನಿಂದ ಕಲಿಯಬೇಕಾಗಿರುವುದು ಆತನ ಸಮಚಿತ್ತತೆ, ನಿರುಮ್ಮಳತೆ. ನಾವು ಧೋನಿ ಆಗುತ್ತೇವೋ ಇಲ್ಲವೋ, ನಾಯಕನಾಗುತ್ತೇವೋ ಇಲ್ಲವೋ, ಆದರೆ ನಾವು ಏನು ಮಾಡುತ್ತಿದ್ದೇವೋ ಅದನ್ನು ಮತ್ತಷ್ಟು ದಕ್ಷವಾಗಿ ಮಾಡಲಂತೂ ಖಂಡಿತ ಸಾಧ್ಯವಾಗುತ್ತೆ. ನಮ್ಮೊಳಗಿನ ನಮ್ಮ ಪ್ರತಿಭೆಗಳು ಸ್ವಚ್ಛಂದವಾಗಿ ಹೊರಹೊಮ್ಮಲು ಖಂಡಿತ ಸಾಧ್ಯವಾಗುತ್ತೆ.


ಧೋನಿಗೆ ಹುಟ್ಟುಹಬ್ಬದ ಶುಭಾಶಯ. ಅವನಿಂದ ಇವುಗಳನ್ನು ಕಲಿತರೆ, ನಮಗೂ ಶುಭಾಶಯ 🙂


Tuesday, June 29, 2021

How 'Angulimala' was turned into a Sage!

 


This is a story in the Yogic tradition. During Buddha’s era, there was a man who was popularly known as ‘Angulimala’ in a village. He was a youth who thought the society in the town he lived in did injustice to him. He was fiercely angry and wanted to kill 101 people from his town.

He started staying in the surrounding jungle and started killing people who came that way. He used to cut off the thumbs of those victims and wear them around his neck as a garland. ‘Anguli-mala’ means a garland of fingers! That’s how the name became famous. The path through the forest he lived in was a much-used path by villagers as it connected them with many places around. It was a necessity for them. But by now, everyone was terrified by this man who used to kill people to complete his vow of taking 101 lives. There came a time when he had already taken 100 lives. He was waiting for one more. Just one more and his vow is done.

It so happened that Gautama the Buddha came to this village on his journey. He heard about Angulimala. He said, let me go to him and see. People were terrified hearing this and told, “Don’t go this way. He is not a human being. He is waiting for one more life and we don’t want it to be you”. Buddha said, “If I don’t go, who will go?” and just walked in that direction.

Buddha walked calmly into the forest where Angulimala was dwelling. Angulimala was sitting on a rock and saw Buddha walking. He made a roaring sound to scare Buddha. Buddha just smiled and continued walking. Angulimala was astonished. People ran helter-skelter just at the sight of Angulimala. But this man is simply walking as if he didn’t notice him. He didn’t like it. He jumped and encountered Buddha from the front and stopped him. He roared, “Why are you walking as if I’m not here? Are you not terrified of me?”. Buddha smiled and said, “I’m not going anywhere, it’s you who’s trying to go somewhere” and just kept walking.

This made Angulimala even more agitated. He said, “What are you saying? I’m standing like a rock here and you’re walking. Why are you saying the reverse?”. Buddha smiled once again and said, “I’m already fulfilled. I’m not going anywhere or trying to get something to fulfill myself. I’ve arrived a long time ago. I’m not moving anywhere. It’s you who’s moving. If you’ll be fulfilled by taking my life and chopping off my thumb, please go ahead and do it. I’m fulfilled. If that fulfills you, why not? I’m ready”.

There’s no pleasure in killing a man who’s ready to die. And here’s a man who doesn’t care even if you kill him.

This left Angulimala in total astonishment. All the structures he had formed within him broke down. He bowed down to Buddha and surrendered to him. Buddha made him a monk and asked him to go back to the village from which he had killed one hundred people. He went back to the village and started begging. Begging is a crucial part of Buddhist monkhood. People were petrified looking at him as he had killed at least one person in almost every home. Later seeing that he wasn't reacting, they started throwing stones at him. After some time, Buddha came and stopped people from this pelting. Buddha said, “Why are you throwing stones at this man? The old man is gone. Now he’s like my extension. You’re throwing stones at myself. Please stop”.

Angulimala went to become a star disciple of Buddha and traveled extensively to spread Buddha’s wisdom and Buddhist way of life. This is the transformation that was brought about in a violent man like Angulimala.

Saturday, June 26, 2021

ಯೋಗದ ಕುರಿತು ಹೆಮ್ಮೆಪಡಿ; ಆದರಲ್ಲಿಗೆ ನಿಲ್ಲಿಸದಿರಿ!


ಈ ಲೇಖನವನ್ನು ಯೋಗದಿನಕ್ಕಾಗಿ ಬರೆದಿದ್ದು. ಅಂದು ಫೇಸ್ಬುಕ್ಕಿನಲ್ಲಿ ಡೈರೆಕ್ಟ್ ಬರೆಯಲು ಹೋಗಿ, ಇಮೇಜ್ ಅಪ್ಲೋಡ್ ಮಾಡುವಾಗ ಅದೇನೋ ಸಮಸ್ಯೆಯಾಗಿ ಅಳಿಸಿಹೋಯಿತು. ಇರಲಿ, ಮತ್ತೆ ಶಕ್ತಿ-ಸಮಯ ಹೊಂದಿಸಿ ಬರೆಯಲು ನಾಲ್ಕು ದಿನ ಬೇಕಾಯಿತು.


ಈ ವರ್ಷದ ‘ಯೋಗ ದಿನ’ ಮುಗಿದಿದೆ. ಅನೇಕರು ಸೋಷಿಯಲ್ ಮೀಡಿಯಾದಲ್ಲಿ ತರೇಹಾವಾರಿ ಫೋಟೋಗಳನ್ನು, ಬರಹಗಳನ್ನು, ಜೋಕ್ ಗಳನ್ನು ಹಂಚಿಕೊಂಡಿದ್ದಾರೆ. ’ನಾನೂ ಯೋಗ ಮಾಡುತ್ತೇನೆ - ಶವಾಸನ ಮಾಡುತ್ತೇನೆ” ಎಂದು ಹೇಳಿ ನಕ್ಕಿದ್ದಾರೆ. ಕ್ಲಬ್ ಹೌಸ್ ನಲ್ಲಿ ಅನೇಕ ಚರ್ಚೆಗಳು ನಡೆದಿವೆ. ಯೋಗ ಹೇಗೆ ಭಾರತದ ಪರಂಪರೆ ಕೊಟ್ಟ ಕೊಡುಗೆ, ಅದಕ್ಕಾಗಿ ನಾವು ಹೇಗೆ ಹೆಮ್ಮೆ ಪಡಬೇಕು ಎಂದು ಅನೇಕರು ಮಾತನಾಡಿದ್ದಾರೆ. ಬಹಳ ಸಂತಸದ ವಿಷಯ. ಅಷ್ಟಕ್ಕೂ, ‘ಅಂತರಾಷ್ಟ್ರೀಯ ಯೋಗ ದಿನ’ವನ್ನು ಪ್ರಾರಂಭಿಸಿದ್ದೇ ಈ ಕಾರಣಕ್ಕಾಗಿ. ಯೋಗದ ಕುರಿತು ಜನ ಮಾತಾಡಲಿ, ಅದರ ಕುರಿತು ಜಾಗೃತಿ ಮೂಡಲಿ ಎಂದು.


ಆದರೆ, ಯೋಗದಲ್ಲಿ ನೀವು ಇದು ಭಾರತೀಯ ಸಂಸ್ಕೃತಿಯ ಕೊಡುಗೆ ಎಂದು ಹೆಮ್ಮೆ ಪಡುವುದಕ್ಕಿಂತ ದೊಡ್ಡ ಪ್ರಯೋಜನಗಳಿವೆ. ಕೊಡುಗೆ ನಮ್ಮ ಸಂಸ್ಕೃತಿಯದ್ದೇ ಆದರೂ, ಅದನ್ನು ಅರಿತುಕೊಳ್ಳದಿದ್ದರೆ, ಶಾಸ್ತ್ರೀಯವಾಗಿ ಕಲಿಯದಿದ್ದರೆ ಹಾಗೂ ಅಭ್ಯಸಿಸದಿದ್ದರೆ - ಅದು ನಮ್ಮ ಪೂರ್ವಜರ ಕೊಡುಗೆ ಎಂಬ ಹೆಮ್ಮೆಗಷ್ಟೇ ತೃಪ್ತಿಕೊಳ್ಳಬೇಕಾಗುತ್ತೆ. ಶವವಾಗಲು ಅಭ್ಯಾಸ ಬೇಡ - ಎಲ್ಲರೂ ಒಂದಲ್ಲ ಒಂದು ದಿನ ಆಗಲೇಬೇಕು. ಆದ್ದರಿಂದ, ನಾನು ಶವಾಸನ ಮಾಡಿದೆ ಎಂದು ಹೆಮ್ಮೆಪಟ್ಟುಕೊಂಡರೆ, ಯೋಗದ ಬಹುದೊಡ್ಡ ಸಾಧ್ಯತೆಗಳಿಂದ  ವಂಚಿತರಾಗಬೇಕಾಗುತ್ತದೆ. 


ಯೋಗದ ಮೂಲ ಆದಿಯೋಗಿ ಶಿವ. ಕೈಲಾಸವಾಸಿಯಾಗಿದ್ದ ಶಿವ, 15,000ಕ್ಕೂ ಅಧಿಕ ವರ್ಷಗಳ ಹಿಂದೆ ಮಾನಸಸರೋವರದ ತಟದಲ್ಲಿ ದಕ್ಷಿಣಾಮೂರ್ತಿಯಾಗಿ ಕುಳಿತು, ಸಪ್ತಋಷಿಗಳಿಗೆ ‘ಯೋಗ ವಿಜ್ಞಾನ’ ಎಂಬ ಆತಂರಿಕ ವಿಜ್ಞಾನವನ್ನು ಬೋಧಿಸಿದ. ಆ ಸಪ್ತಋಷಿಗಳು ವಿಶ್ವದೆಲ್ಲೆಡೆ ಸಂಚರಿಸಿ, ಅನೇಕ ಸ್ಥಳಗಳಲ್ಲಿ, ಅನೇಕ ಸಮಾಜಗಳಲ್ಲಿ ಯೋಗ ವಿಜ್ಞಾನವನ್ನು ಪಸರಿಸಿದರು. ಈ ಕಾರಣಕ್ಕಾಗಿಯೇ ವಿಶ್ವದ ಎಲ್ಲೆಡೆಯೂ ಒಂದಲ್ಲ ಒಂದು ಪ್ರಕಾರದ ಯೋಗಶಾಲೆಗಳು ಕಂಡುಬರುವುದು. ಯುರೋಪ್ ನ ಹಲವು ಸ್ಥಳಗಳಲ್ಲಿ ಕೂಡ ಯೋಗವಿಜ್ಞಾನದ ಆಧಾರದಲ್ಲಿ ನಿರ್ಮಿಸಿದ ದೇವಸ್ಥಾನಗಳು ನಿಮಗೆ ಇಂದಿಗೂ ಕಾಣಸಿಗುತ್ತವೆ. 


ಪತಂಜಲಿ ‘ಯೋಗಸೂತ್ರ’ವನ್ನು ಬರೆದ ಮಹರ್ಷಿ. ಅವರ ಕಾಲ ಬರುವಷ್ಟರಲ್ಲಿ ಯೋಗ ಅನೇಕ ವಿಧಗಳಲ್ಲಿ, ಅನೇಕ ರೂಪಗಳಲ್ಲಿ, ಹರಡಿಹೋಗಿತ್ತು. ಸ್ವಲ್ಪ ಅವ್ಯವಸ್ಥೆಯೂ ತಲೆದೂಗಿರಬೇಕು. ಆದ್ದರಿಂದ ಪತಂಜಲಿ ಮಹರ್ಷಿ ಅವೆಲ್ಲವನ್ನೂ ಕ್ರೋಢೀಕರಿಸಿ, ಯೋಗಸೂತ್ರದ ಮೂಲಕ stream line ಮಾಡಿದರು. ವ್ಯವಸ್ಥಿತಗೊಳಿಸಿದರು.


ಯೋಗದಲ್ಲಿ ಮುಖ್ಯವಾಗಿ 4 ಮಾರ್ಗಗಳು - ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ಕ್ರಿಯಾಯೋಗ. ನಾಲ್ಕರಲ್ಲೂ - ಯಾವುದೂ ಮೇಲೂ ಅಲ್ಲ, ಕೀಳೂ ಅಲ್ಲ. ಕೊನೆಯ ಸಾಧ್ಯತೆ ನಾಲ್ಕು ಮಾರ್ಗಗಳಿಗೂ ಒಂದೇ. ಆದರೆ ಅದೇ ಗಮ್ಯವನ್ನು ತಲುಪಲು ನಾಲ್ಕು ಬೇರೆ ಬೇರೆ ಮಾರ್ಗಗಳು.


ಜ್ಞಾನಯೋಗ - ಇದು ಬುದ್ಧಿ ಅಥವಾ intellect ಅನ್ನು ತೀಕ್ಷ್ಣವಾಗಿ ಬಳಸಿ ನಮ್ಮನ್ನು ನಾವೇ ಪರಿಶೋಧಿಸಿಕೊಳ್ಳುವ ಮಾರ್ಗ. Intellect ಒಂದು ಚೂರಿ ಇದ್ದ ಹಾಗೆ. ಅದು ಎಲ್ಲವನ್ನೂ ಬಗೆದು, ತುಂಡರಿಸಿ ಮಾತ್ರ ನೋಡುತ್ತದೆ. ಅದಕ್ಕೆ ಬೇರೆ ಮಾರ್ಗ ಗೊತ್ತಿಲ್ಲ. ಒಂದು ಜಿರಲೆಯನ್ನು ಕೊಟ್ಟರೆ, ಅದು ಅದನ್ನು disect ಮಾಡಿ ಮಾತ್ರ ನೋಡಲು ಸಾಧ್ಯ. Intellect ಕೆಲಸ ಮಾಡುವುದೇ ಹಾಗೆ. ಜಿಡ್ಡು ಕೃಷ್ಣಮೂರ್ತಿ ಪ್ರಸ್ತುತಪಡಿಸುತ್ತಿದ್ದರಲ್ಲ? ಅದು ಜ್ಞಾನಯೋಗ. ಆದರೆ ಈ ಮಾರ್ಗವನ್ನು ಅನುಸರಿಸಲು ಬಹಳ ಹರಿತವಾದ ಬುದ್ಧಿಶಕ್ತಿಯ ಅವಶ್ಯಕತೆಯಿದೆ. ಅಷ್ಟು ಹರಿತವಾಗಿರುವ ಬುದ್ಧಿ ಇರುವ ಜನ ಸಿಗುವುದು ಬಹಳ ಅಪರೂಪ ಎಂಬುದು ಜ್ಞಾನಿಗಳ ಮಾತು.


ಭಕ್ತಿ ಯೋಗ - ಇದು ಬುದ್ಧಿವಂತರಿಗಲ್ಲ. ಹೌದು, ನೀವು ಅತಿಯಾಗಿ ಬುದ್ಧಿ ಉಪಯೋಗಿಸುವವರಾಗಿದ್ದರೆ, ನಿಮಗೆ ಈ ಮಾರ್ಗ ಹೊಂದುವುದಿಲ್ಲ. ಏಕೆಂದರೆ ’ಭಕ್ತರು’ ನಿಮಗೆ ಅರ್ಥವಾಗುವುದೇ ಇಲ್ಲ. ಶಿವನಿಗಾಗಿ ಬೇಡರ ಕಣ್ಣಪ್ಪ ತನ್ನ ಕಣ್ಣನ್ನೇ ಕಿತ್ತು ಕೊಟ್ಟ - ಆತ ಭಕ್ತ. ನೀವು ಬುದ್ಧಿವಂತರಾಗಿದ್ದರೆ, ನಿಮಗೆ ಇದು ಹುಚ್ಚಾಟವಾಗಿ ಕಾಣಬಹುದು. ಇದರ ಅರ್ಥವೇನು ಅನ್ನಿಸಬಹುದು. ಹೌದು, ಭಕ್ತಿ ಮಾರ್ಗದಲ್ಲಿ ಅರ್ಥಕ್ಕೆ ಅವಕಾಶವಿಲ್ಲ. ಭಕ್ತಿ ಎಂದರೆ, ನೀವು ನಿಮ್ಮನ್ನು ಸಂಪೂರ್ಣವಾಗಿ ಪಕ್ಕಕ್ಕಿಟ್ಟಿದ್ದೀರಿ ಎಂದರ್ಥ. ನಿಮ್ಮ ಭಕ್ತಿಯ ವಸ್ತುವಿನಲ್ಲಿ ಸಂಪೂರ್ಣವಾಗಿ ತಲ್ಲೀನರಾಗಿ, ನೀವೇ ಇಲ್ಲವಾಗಿದ್ದೀರಿ ಎಂದರ್ಥ. ಹಾಗಂತ ನೀವೂ ಕಣ್ಣನ್ನು ಕಿತ್ತು ಕೊಡಬೇಕು ಅಂದಲ್ಲ. ಆದರೆ ನೀವು ಸಂಪೂರ್ಣವಾಗಿ ನಿಮ್ಮನ್ನು ನೀವೇ ಅರ್ಪಿಸಿಕೊಂಡಿದ್ದೀರಿ ಎಂದರ್ಥ. ನಿಮ್ಮ ಭಕ್ತಿಯ ವಸ್ತುವಿಗಾಗಿ ಏನನ್ನು ಬೇಕಿದ್ದರೂ ಮಾಡಲು ಸಿದ್ಧರಿದ್ದೀರಿ ಎಂದರ್ಥ.


ಕರ್ಮ ಮಾರ್ಗ - ‘ಕಾಯಕವೇ ಕೈಲಾಸ’ ಎಂಬುದನ್ನು ಕೇಳಿರುತ್ತೀರಿ. ಹಾಗಂತ, ನೀವು ಹೇಗೆ ಬೇಕೋ ಹಾಗೆ ಕೆಲಸಮಾಡಿದರೆ ಅದು ಕರ್ಮಯೋಗ ಅಲ್ಲ. ‘ನನಗೇನು ಸಿಗುತ್ತೆ?’ ಎಂಬ ಒಂದು ಪ್ರಶ್ನೆಯನ್ನು ತೆಗೆದುಹಾಕಿ ಕೆಲಸ ಮಾಡಿದರೆ ಅದು ಕರ್ಮಯೋಗ. ಮಾಡುವ ಕೆಲಸದಲ್ಲಿ ಸಂಪೂರ್ಣವಾಗಿ ನಿಮ್ಮನ್ನು ನೀವೇ ಅರ್ಪಿಸಿಕೊಂಡು, ನೀವೇ ಇಲ್ಲವಾಗುವುದು ಕರ್ಮಯೋಗ. ನಿಮ್ಮ ಚಟುವಟಿಕೆಯಲ್ಲಿ ‘ನೀವು’ ಎಂಬುವುದು ಕರಗಿಹೋಗುವುದು ಕರ್ಮಯೋಗ. 


ಇನ್ನು ‘ಕ್ರಿಯಾ ಯೋಗ’ - ಇದು ಪಕ್ಕಾ ವೈಜ್ಞಾನಿಕ ಮಾರ್ಗ. ಎರಡು ಹೈಡ್ರೋಜನ್ ಅಣು ಮತ್ತು ಒಂದು ಆಕ್ಸಿಜನ್ ಅಣುವನ್ನು ಒಬ್ಬ ದೊಡ್ಡ ವಿಜ್ಞಾನಿ ಸಂಜೋಡಿಸಿದರೂ ಅದು ನೀರಾಗುತ್ತೆ. ಒಬ್ಬ ಶತಮೂರ್ಖ ಸಂಜೋಡಿಸಿದರೂ ನೀರೇ ಆಗುತ್ತೆ. ವಿಜ್ಞಾನ ಕೆಲಸ ಮಾಡುವುದು ಹಾಗೆ. ಕ್ರಿಯಾಯೋಗ ಕೂಡ ಹಾಗೆ. ಗುರುವಿನಿಂದ ಉಪದೇಶಿಸಲ್ಪಟ್ಟ ಯೌಗಿಕ ಕ್ರಿಯೆಗಳನ್ನು ಶಿಷ್ಯ ಚಾಚೂ ತಪ್ಪದೇ ಮಾಡಿದರೆ, ಅದು ಅವನಲ್ಲಿ ಮಾಡಬೇಕಾದುದನ್ನು ಮಾಡುತ್ತದೆ. ಶಿಷ್ಯನಿಗೆ ಅದು ಹೇಗೆ ಕೆಲಸ ಮಾಡುತ್ತೆ ಎಂಬ ವಿಜ್ಞಾನದ ಅರಿವು ಇರಬೇಕಿಲ್ಲ. ಆತ ಸುಮ್ಮನೆ ಹೇಳಿದ್ದನ್ನು ಚಾಚೂ ತಪ್ಪದೇ ಮಾಡಬೇಕಷ್ಟೇ. ಅದು ಕೆಲಸಮಾಡುತ್ತೆ. ಇದು ಯಾವುದೇ ಆಧುನಿಕ ಉಪಕರಣವಿದ್ದಹಾಗೆ. ನಿಮ್ಮ ಮನೆಯ ವಾಷಿಂಗ್ ಮಶಿನ್ ನ ಹಿಂದಿನ ವಿಜ್ಞಾನ ನಿಮಗೆ ಗೊತ್ತಾ? ಇಲ್ಲ. ಆದರೆ ಅದನ್ನು ಬಳಸುವುದು ನಿಮಗೆ ಗೊತ್ತು ಹಾಗೂ ಅದು ಕೆಲಸ ಮಾಡುತ್ತೆ! ಕ್ರಿಯಾಗಳು ಕೂಡ ಹಾಗೇ, ನಿಮಗೆ ಅದರ ಹಿಂದಿನ ವಿಜ್ಞಾನ ಗೊತ್ತಿರಬೇಕಿಂದಿಲ್ಲ, ಅವುಗಳನ್ನು ಬಳಸಲು ಗೊತ್ತಿರಬೇಕು ಅಷ್ಟೇ. ಅವು ಕೆಲಸ ಮಾಡುತ್ತೆ. ಮುಖ್ಯವಾಗಿ ಕ್ರಿಯಾಗಳು ಕೆಲಸ ಇರುವುದು ನಮ್ಮ ಪ್ರಾಣಶಕ್ತಿಯ ಮಟ್ಟದಲ್ಲಿ. ನಮ್ಮ ಪ್ರಾಣಶಕ್ತಿಯನ್ನು ಪ್ರಬಲಗೊಳಿಸುವುದು, ಅದನ್ನು ತಿದ್ದಿ, ತೀಡಿ, ಹದಗೊಳಿಸುವುದು ಕ್ರಿಯಾಗಳ ಹಿಂದಿನ ವಿಜ್ಞಾನ. 


ಹಾಗಿದ್ದರೆ ಈ ನಾಲ್ಕು ಮಾರ್ಗಗಳಲ್ಲಿ ಯಾವುದನ್ನು ಅನುಸರಿಸಬೇಕು? ನನಗೆ ಯಾವುದು ಒಳ್ಳೆಯದು? ಹಾಗಂತ ಏನೂ ಇಲ್ಲ. ಪ್ರತಿಯೊಬ್ಬರೂ ಈ ನಾಲ್ಕೂ ವಿಧಗಳನ್ನು ತಮಗೆ ಸರಿಹೊಂದುವ ಪ್ರಮಾಣದಲ್ಲಿ ಹೊಂದಿಸಿ ಮಿಶ್ರಣವನ್ನು ಮಾಡಿಕೊಳ್ಳಬೇಕು. ಒಂದೇ ಮಾರ್ಗವನ್ನು ಅನುಸರಿಸುತ್ತೇನೆ ಎಂದರೆ ಕಷ್ಟವಾಗಬಹುದು. ಆದರೆ ಈ ನಾಲ್ಕೂ ಮಾರ್ಗಗಳನ್ನು ತಮಗೆ ಬೇಕಾದಷ್ಟು ಹದದಲ್ಲಿ ಮಿಶ್ರಣ ಮಾಡಿ ಅನುಸರಿಸಿದರೆ ಗಮ್ಯ ತಲುಪುವುದು ಸುಲಭ. ಜೀವಂತ ಗುರುವಿನ ಮಹತ್ವ ಕೂಡ ಅದೇ. ಆತ ತನ್ನ ಪ್ರತಿ ಶಿಷ್ಯನಿಗೂ ಸರಿಯಾದ ಪ್ರಮಾಣದಲ್ಲಿ ಮಿಶ್ರಣವನ್ನು ತಯಾರಿಸಿ ಕೊಡುತ್ತಾನೆ. ಈ ನಾಲ್ಕೂ ಮಾರ್ಗಗಳನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಿಸಿ ಕೊಡುತ್ತಾನೆ. ಈ ಕುರಿತಾದ ಒಂದು ಅದ್ಭುತ ಕಥೆಯಿದೆ. ನಾಳೆ ಬರೆಯುತ್ತೇನೆ. ಆಸಕ್ತರು ಕಮೆಂಟ್ ನಲ್ಲಿ ತಿಳಿಸಿ. 


~ ಸಂಕೇತ್


Friday, May 14, 2021

ಬಸವಣ್ಣ ವಚನಕಾರ ಅಷ್ಟೇ ಅಲ್ಲ

ಬಸವಣ್ಣ ಒಬ್ಬ ವಚನಕಾರ ಅಲ್ಲ. ತಮ್ಮೊಳಗೆ ಅನುಭವಿಸಿದ ದಿವ್ಯ ಅನುಭೂತಿಯನ್ನು ವ್ಯಕ್ತಪಡಿಸಲು, ವಚನ ಅವರು ಆಯ್ದುಕೊಂಡ ಸಾಧನ ಅಷ್ಟೇ.

ಬಸವಣ್ಣ ಒಬ್ಬ ರಾಜನಾಗಿದ್ದರೂ, ಅಧ್ಯಾತ್ಮದ ಮಹತ್ವವನ್ನು ಅರಿತು ಅದನ್ನು ಜೀವಿಸಿ, ಪ್ರಜೆಗಳ ಯೋಗಕ್ಷೇಮವನ್ನೂ ನೋಡಿಕೊಂಡಿದ್ದು ಒಂದು ಶ್ರೇಷ್ಠ ಉದಾಹರಣೆ. 

ಬಸವಣ್ಣನಾಗಲೀ, ಕೃಷ್ಣನಾಗಲೀ, ಜೀಸಸ್ ಆಗಲೀ, ರಮಣರಾಗಲೀ, ರಾಮಕೃಷ್ಣರಾಗಲಿ - ಇವರನ್ನು ನಾವು ದೇವರೆಂದು ಹಣೆಪಟ್ಟಿ ಹಾಕಿ ಪಕ್ಕಕ್ಕೆ ಸರಿಸಿಬಿಟ್ಟರೆ, ಅವರೆಲ್ಲ ಸಾರಿದ ಸಂದೇಶಕ್ಕೆ ಅಪಮಾನ ಮಾಡಿದಂತೆ. ಜೀವನದುದ್ದಕ್ಕೂ ಇವರೆಲ್ಲ ಸಾರಿದ್ದು, ಪ್ರಯತ್ನಿಸಿದರೆ ನಾವೂ ಅವರಂತೆ ಆಗಬಹುದು ಎಂಬುದನ್ನು. ನಮ್ಮ ಚಿಕ್ಕ ಪುಟ್ಟ ಮಿತಿಗಳನ್ನು ಮೀರಿ ಬದುಕಬಹುದೆಂದು. ಪ್ರೇಮಮಯಿಗಳಾಗಿ, ಪ್ರಜ್ಞಾಪೂರ್ವಕ ಜೀವಿಗಳಾಗಿ, ಜಗತ್ತಿನಲ್ಲೊಂದು ಬೆಳಕಾಗಿ ಬದುಕಲು ಪ್ರತಿಯೊಬ್ಬರಿಗೂ ಸಾಧ್ಯವಿದೆ ಎಂದು. ‘ಜಂಜಾಟಗಳೇ ಬದುಕು’ ಎಂದುಕೊಂಡಿದ್ದ ಜನರಿಗೆ ಅವರು ತಿಳಿಸಿಕೊಟ್ಟಿದ್ದು ಜಂಜಾಟಗಳನ್ನು ಮೀರಿ ಬದುಕಬಹುದು ಎಂದು.

ಬಸವಣ್ಣನವರ ವಚನಗಳು ಕೇವಲ ಓದಿಗಷ್ಟೇ ಸೀಮಿತವಾಗದೆ, ಅವರು ತಮ್ಮೊಳಗೆ ಅನುಭವಿಸಿ ಅನೂಭೂತಿಯೆಡೆಗೆ ಹೆಜ್ಜೆಯಿಡಲು ನಮಗೆಲ್ಲ ಸ್ಫೂರ್ತಿಯಾಗಲಿ  🙏

#ಬಸವ_ಜಯಂತಿ



 

Sunday, April 25, 2021

‘ನೀವು’ ಇಲ್ಲದಿದ್ದರೆ, ಪ್ರೀತಿ ಇರಲು ಸಾಧ್ಯ

 ಡಿಯರ್ ವಂಡರ್ಫುಲ್ ಸೆಲ್ಫ್,

ಎಲ್ಲಾ ಗುರುಗಳು ಹಾಗೂ ಧರ್ಮಗಳು, ಎಲ್ಲರೆಡೆಗೆ ಪೀತಿಯಿಟ್ಟುಕೊಳ್ಳುವುದನ್ನು ಮೋಕ್ಷ ಅಥವಾ ಮುಕ್ತಿಗೆ ಅಗತ್ಯವಾದ ಹೆಜ್ಜೆ ಎಂದು ಒತ್ತಿ ಹೇಳಿದ್ದಾರೆ.

ಮೂಲಭೂತವಾಗಿ ಪ್ರೀತಿ ಎಂದರೆ, ಇಷ್ಟ ಮತ್ತು ಇಷ್ಟವಿಲ್ಲದಿರುವಿಕೆಯನ್ನು ದಾಟಿ ಹೋಗುವುದು ಎಂದರ್ಥ. ನಾನು ಒಂದನ್ನು ಇಷ್ಟಪಡುತ್ತೇನೆ ಮತ್ತು ಇನ್ನೊಂದನ್ನು ಇಲ್ಲ - ಈ ಹಂತದಲ್ಲಿ ಪ್ರೀತಿ ಸಾಧ್ಯವೇ ಇಲ್ಲ, ಏಕೆಂದರೆ ನಾವು ನಮ್ಮ ಅಹಂ ಗೆ ಅನುಕೂಲಕರವಾಗಿರುವ ಅಥವಾ ಅದನ್ನು ಬೆಂಬಲಿಸುವ ಸಂಗತಿಗಳನ್ನು ಮಾತ್ರ ಇಷ್ಟಪಡುತ್ತೇವೆ.

ಪ್ರೀತಿ ಎಂದರೆ ನಮ್ಮನ್ನು ಸಂಪೂರ್ಣವಾಗಿ ಕರಗಿಸಬಲ್ಲ ರಸವಿದ್ಯೆ. ಹಾಗಾಗಿಯೇ ಆಂಗ್ಲದಲ್ಲಿ ‘Falling in love' (ಪ್ರೀತಿಯಲ್ಲಿ ಬೀಳುವುದು) ಎಂದು ಹೇಳುವರು, ಪ್ರೀತಿಯಲ್ಲಿ ನಿಲ್ಲುವುದು ಅಥವಾ ಪ್ರೀತಿಯಲ್ಲಿ ಏರುವುದು ಎನ್ನುವುದಿಲ್ಲ. ಬೀಳುವುದರಲ್ಲಿ ಮಾತ್ರ ಪ್ರೀತಿಯಿರಲು ಸಾಧ್ಯ. ‘ನೀವು’ ಇಲ್ಲದಿದ್ದರೆ, ಪ್ರೀತಿ ಇರಲು ಸಾಧ್ಯ. ಒಬ್ಬರು ಮಾಡುವ ಎಲ್ಲಾ ಸಾಧನಗಳು ಪ್ರೀತಿಯಿಲ್ಲದಿದ್ದರೆ, ಒಂದು ಬರಡು ಹಾಗೂ ಫಲಪ್ರದವಲ್ಲದ ಪ್ರಯತ್ನವಾಗುತ್ತದೆ. ಅನೇಕರಿಗೆ, ಅವರ ಧ್ಯಾನ ಮತ್ತು ಇತರ ಅಭ್ಯಾಸಗಳು, ಮತ್ತು ಯೋಗ ಕಾರ್ಯಕ್ರಮಗಳು ಚೈತನ್ಯದ ಏರಿಳಿತದ ತೂಗುಯ್ಯಾಲೆಯಾಗುತ್ತದೆ, ಏಕೆಂದರೆ ಅವರು ಅಮಿತವಾದ ಪ್ರೀತಿಯ ಹೆಜ್ಜೆಯನ್ನು ಇಟ್ಟಿಲ್ಲ.

ಪ್ರೀತಿ ಅಂತಿಮವಾದುದಲ್ಲ, ಆದರೆ ಅಂತಿಮದೆಡೆಗೆಮಹತ್ತರವಾದ ಹೆಜ್ಜೆ. ಪ್ರೀತಿಯಿಲ್ಲದೆ, ಅನೇಕರು ತಲುಪುವುದೇ ಇಲ್ಲ. ಗೌತಮ ಬುದ್ಧ, ಮುಕ್ತಿ ಅಥವಾ ನಿರ್ವಾಣಕ್ಕಾಗಿ ಅನೇಕ ರೀತಿಯ ಸಾಧನಗಳನ್ನು ಮಾಡಿದ ನಂತರ, ಮುಂದಿನ ಬಾರಿ ನಾನು ಮೈತ್ರೇಯನಾಗಿ ಬರುವೆ ಎಂದು ಹೇಳಿದ. ಮೈತ್ರೇಯ ಎಂದರೆ ಗೆಳೆಯ ಅಥವಾ ಪ್ರೀತಿ, ಹಾಗೆಂದರೆ ಮುಂದಿನ ಬಾರಿ ನನ್ನ ಗುಣ ಪ್ರೀತಿಯದ್ದಾಗಿರುತ್ತದೆ ಎಂದು. ಪ್ರೀತಿಯ ಸಾಂಗತ್ಯವಿಲ್ಲದಿದ್ದರೆ, ಸಾಧನಗಳು ಅಹಂನನ್ನು ಪೋಷಿಸುವ ವಿಧಾನಗಳಾಗುತ್ತವೆ.

ನಿಮ್ಮ ಪ್ರೀತಿ ಅರಳಲಿ ಹಾಗೂ ಅದರ ಸುವಾಸನೆಯು ಎಲ್ಲ ಜೀವಿಗಳಿಗೂ ಅನಿಯಮಿತವಾಗಿ ಹರಡಲಿ.

ಪ್ರೀತಿ ಮತ್ತು ಆಶೀರ್ವಾದಗಳು
ಸದ್ಗುರು

(ಅಧಿಕೃತ ಭಾಷಾಂತರ ಅಲ್ಲ)




Monday, April 5, 2021

ನಾವು-ನೀವು ಕಲಿಯಬೇಕಾಗಿರುವುದು ಇಷ್ಟು!

 ಕೃಷ್ಣ ಒಂದು  ಅದ್ಭುತ ವ್ಯಕ್ತಿತ್ವ. ಆತ ವ್ಯಕ್ತಿತ್ವವೇ ಇಲ್ಲದ, ಎಲ್ಲ ವ್ಯಕ್ತಿತ್ವಗಳನ್ನು ಮೀರಿದ ವ್ಯಕ್ತಿತ್ವ.

‘ನಾನು ಸುಳ್ಳು ಹೇಳುವುದಿಲ್ಲ’ ಎಂದರೆ ಕೃಷ್ಣ ನಗುತ್ತಾನೆ. ‘ನಾನು ನೃತ್ಯ ಮಾಡುವುದಿಲ್ಲ’ ಎಂದರೆ ಕೃಷ್ಣ ಕರುಣೆಯ ನೋಟ ಬೀರುತ್ತಾನೆ. ರಾಧೆಯ ಪ್ರೀತಿಸಿದ ಕೃಷ್ಣ, 16ರ ನಂತರ 6 ವರುಷ ಸನ್ಯಾಸಿ. ಗುರುಕುಲಕ್ಕೆ ಹೋದ ಕೃಷ್ಣ ನಡೆಸಿದ್ದು ಕಠೋರ ಬ್ರಹ್ಮಚರ್ಯದ ಜೀವನ. ಕೊಳಲೂದುತ್ತ, ದನಗಳನ್ನು ಮೇಯಿಸುತ್ತ ಕೋಮಲ ಸ್ವಭಾವದ ಸಾಮಾನ್ಯ ಹುಡುಗನಾಗಿ ತೋರುವ ಕೃಷ್ಣ, ಯುದ್ಧಕಲೆಗಳ ನಿಪುಣ. ಸುಳ್ಳು ಹೇಳುತ್ತಾನೆ, ಮೋಸಮಾಡುತ್ತಾನೆ ಎಂದೆನಿಸುವ ಕೃಷ್ಣ, ಮಹಾಭಾರತದ ಕಾಲಕ್ಕೆ ಧರ್ಮ ಸಂಸ್ಥಾಪಿಸಿದ ಸೂತ್ರಧಾರಿ!

ಕೃಷ್ಣನನ್ನು ಒಂದು ವ್ಯಕ್ತಿತ್ವದ ಕಟ್ಟುಪಾಡಿಗೆ ಹಾಕಲು ಹೋದರೆ, ಅದು ಮೂರ್ಖತನ ಅಷ್ಟೇ.

ಇದು ಆತನ ಅತ್ಯಂತ ಪ್ರಮುಖ ಸಂದೇಶಗಳಲ್ಲಿ ಒಂದು ಎಂದು ನನ್ನ ಭಾವನೆ. ಆತನ ಬದುಕೇ ಆತನು ಜಗತ್ತಿಗೆ ನೀಡಿದ ಸಂದೇಶ. " ಸರಿ-ತಪ್ಪು, ಧರ್ಮ-ಅಧರ್ಮ ಮುಂತಾದವುಗಳು ನೀವಿರುವ ಕಾಲಕ್ಕೆ, ಅಥವಾ ಸಮಾಜಕ್ಕೆ ತಕ್ಕಂತೆ ಬದಲಾಗಬಹುದು. ಒಬ್ಬರ ಕಣ್ಣಿಗೆ ಕಂಡ ‘ಸರಿ’, ಮತ್ತೊಬ್ಬರ ಕಣ್ಣಿನಲ್ಲಿ ತಪ್ಪಾಗಬಹುದು. ಒಂದು ಪುಸ್ತಕದ ಧರ್ಮ, ಮತ್ತೊಂದು ಪುಸ್ತಕದಲ್ಲಿ ಅಧರ್ಮವಾಗಬಹುದು. ಸಾವಿರಾರು ಜನ, ಸಾವಿರಾರು ರೀತಿ ಹೇಳಬಹುದು. ಆದ್ದರಿಂದ, ನೀವು ಇರಬೇಕಾಗಿರುವುದು ಸನ್ನಿವೇಷಕ್ಕೆ ಹಾಗೂ ಜಾಗಕ್ಕೆ ’ಸೂಕ್ತ’ವಾಗಿ, ಎಲ್ಲೋ ಬರೆದಿಟ್ಟಿರುವ ಹಾಗೆ ‘ಇದೇ ಸರಿ’ ಎಂಬ ಕಟ್ಟುಪಾಡಿಗೆ ಬಂಧಿಯಾಗಿ ಅಲ್ಲ" ಎಂದು. ಈ ಮಾತುಗಳನ್ನು ಅವನು ಹೇಳಿರುವನೋ ಇಲ್ಲವೋ ಗೊತ್ತಿಲ್ಲ, ಆದರೆ ಅವನ ಜೀವನದಲ್ಲಿ ಕಾಣುತ್ತಿರುವುದಂತೂ ಅದೇ.

ಇದು ನನ್ನ ‘ಸಿದ್ಧಾಂತ’. ಇದು ನನ್ನ ‘ಧರ್ಮ’ ಎಂದು ನೀವು ತಿಳಿದುಕೊಂಡು, ಎಲ್ಲಾ ಸನ್ನಿವೇಶಗಳಲ್ಲೂ ಹಾಗೆಯೇ ವರ್ತಿಸಿದರೆ, ಅದು ತಪ್ಪಾದೀತು. ಉದಾಹರಣೆಗೆ, ರೌಡಿಯೊಬ್ಬ ಯಾರನ್ನೋ ಕೊಲ್ಲಲು ಅಟ್ಟಿಸಿಕೊಂಡು ಬರುತ್ತಿದ್ದಾನೆ ಎಂದುಕೊಳ್ಳಿ. ನಿಮಗೆ ಆತನ ಟಾರ್ಗೆಟ್ ಅವಿತಿರುವ ಜಾಗ ಗೊತ್ತು. ಈತ ನಿಮ್ಮ ಬಳಿ ಬಂದು ‘ಆತನನ್ನು ನೋಡಿದೆಯಾ?’ ಎಂದು ಕೇಳುತ್ತಾನೆ. ನೀವು ‘ಸತ್ಯ’ ನನ್ನ ಧರ್ಮ, ಯಾವಾಗಲೂ ಸತ್ಯವನ್ನೇ ಹೇಳಬೇಕು ಅಂತ ಹೇಳಿಕೊಟ್ಟಿದ್ದಾರೆ ಅಂತೆಲ್ಲ ಯೋಚನೆ ಮಾಡಿಕೊಂಡು, ಆತನಿಗೆ ಸತ್ಯವನ್ನೇ ಹೇಳಿದರೆ, ಆಗುವ ಪರಿಣಾಮ ಏನು? ಆ ಸನ್ನಿವೇಶದಲ್ಲಿ ಕೃಷ್ಣ ಇದ್ದಿದ್ದರೆ ಏನು ಮಾಡುತ್ತಿದ್ದ?

ಅಷ್ತಕ್ಕೂ ನೀವು ಒಂದು ‘ಸಿದ್ಧಾಂತ’ಕ್ಕೆ ಅಥವಾ ‘ನಂಬಿಕೆ’ಗೆ ಜೋತುಬಿದ್ದು, ಅದರ ಪ್ರಕಾರವಷ್ಟೇ ಕಾರ್ಯ ನಿರ್ವಹಿಸುತ್ತೀರಿ ಎಂದರೆ, ನಿಮ್ಮ ಕಾರ್ಯಾತ್ಮಕ ಬುದ್ಧಿವಂತಿಕೆ ಅಥವಾ active intelligence ಅನ್ನು ಒತ್ತೆ ಇಟ್ಟಿದ್ದೀರಿ ಅಂತ ಅರ್ಥ. ಅಥವಾ ಒಂದು ರೋಬೋಟ್ ಆಗಿದ್ದೀರಿ ಎಂದು ಅರ್ಥ. ಮನುಷ್ಯನ ನಿಜವಾದ ಗುಣ ಅದಲ್ಲ. ಅವನಿಗೆ ಒಂದು ಅದ್ಭುತವಾದ ಬುದ್ಧಿಶಕ್ತಿ ಮತ್ತು ಪ್ರಜ್ಞೆಯನ್ನು ಸೃಷ್ಟಿ ಕೊಟ್ಟಿದೆ. ಬಳಸಲಿ ಎಂದು. ನೀವಿರುವ ಪರಿಸ್ಥಿತಿಗೆ, ಸನ್ನಿವೇಶಕ್ಕೆ ಅನುಗುಣವಾಗಿ ನಿಮಗೆ ಹಾಗೂ ನಿಮ್ಮ ಸುತ್ತಲಿನವರಿಗೆ ಅತ್ಯಂತ ಶ್ರೇಷ್ಠವಾದುದನ್ನು ಮಾಡಲಿ ಎಂದು. ಹಾಗೆ ಮಾಡದಿದ್ದರೆ, ನೀವು ಸೃಷ್ಟಿಯ ಆ ಔದಾರ್ಯಕ್ಕೆ ಅಪಕೃತಿ ಎಸಗಿದ ಹಾಗೆ.

ಹಾಗಿದ್ದರೆ ಈಗ ಸಂವಿಧಾನ ಏಕೆ ಬೇಕು? ಗ್ರಂಥಗಳು ಏಕೆ ಬೇಕು? ಇವೆಲ್ಲದರ ಅವಶ್ಯಕತೆ ಇಲ್ಲವೇ ಎಂದು ನೀವು ಕೇಳಬಹುದು. ಒಂದು ವೇಳೆ ಸಮಾಜದ ಪ್ರತಿಯೊಬ್ಬ ಮನುಷ್ಯನೂ 100% ಮಾನವನಾದರೆ, ಅವನಲ್ಲಿ ಅವನ ಮಾನವೀಯ ಪ್ರಜ್ಞೆ ಉಕ್ಕಿ ಹರಿದರೆ, ಬಹುಶಃ ಅವುಗಳ ಅವಶ್ಯಕತೆ ಇರಲಿಕ್ಕಿಲ್ಲ. ಆದರೆ ಈಗ ಹಾಗಿಲ್ಲ. ಒಂದು ದೊಡ್ಡ ಸಮಾಜವನ್ನು ನಡೆಸಲು, ಸುಗಮವಾಗಿ ದೈನಂದಿನ ಚಟುವಟಿಕೆಗಳು ಸಾಗುವಂತೆ ಮಾಡಲು ಇವುಗಳ ಅವಶ್ಯಕತೆ ಇದೆ. ಆದರೆ ವೈಯಕ್ತಿಕವಾಗಿ, ನಿಮ್ಮ ಜೀವನದ ದೈನಂದಿನ ಚಟುವಟಿಕೆಗಳಲ್ಲಿ ನಿಮಗೆ ಸಿದ್ಧಾಂತ, ನಂಬಿಕೆ, ಗ್ರಂಥಗಳ ಅವಶ್ಯಕತೆ ಬರಬಾರದು. ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು, ಅಧ್ಯಯನ ಮಾಡಲು, ನಿಮಗೆ ತಿಳಿಯದ ಜೀವನದ ಆಯಾಮಗಳ ಬಗ್ಗೆ ತಿಳಿಯಲು ಗ್ರಂಥಗಳ ಬಳಕೆ ಸರಿ. ಕೆಲಸ ಮಾಡುತ್ತಿದೆ ಎಂದು ಗೊತ್ತಿರುವುದರಿಂದ, ಹಿರಿಯರು ಹೇಳಿಕೊಟ್ಟ ಕೆಲವು ಸಂಗತಿಗಳನ್ನು ನಂಬಿ ಆಚರಿಸುವುದು ಸರಿ. ಆದರೆ, ನಿಮ್ಮ ಪಕ್ಕದ ಮನೆಯವರಿಗೆ ಸಹಾಯ ಮಾಡಲು, ಹಸಿದವರಿಗೆ ಸಾಧ್ಯವಾದರೆ ಅನ್ನಹಾಕಲು, ನಾಲ್ಕೈದು ಮರ ನೆಡಲು, ಪ್ರಾಣಿ ಪಕ್ಷಿಗಳನ್ನು ಪ್ರೀತಿಯಿಂದ ನೋಡಲು, ಸ್ವಲ್ಪ ಅಧ್ಯಾತ್ಮಿಕರಾಗಲು, ಸಮಾಜಕ್ಕೆ ಹೊರೆಯಾಗಿ ಬದುಕದೇ, ಅದಕ್ಕೆ ಪೂರಕವಾಗಿ ಬದುಕಲು - ನಿಮಗೆ ಗ್ರಂಥ, ಸಿದ್ಧಾಂತ, ನಂಬಿಕೆಗಳ ಅವಶ್ಯಕತೆ ಇರುವುದಿಲ್ಲ. ನಿಮ್ಮ ಪ್ರಜ್ಞೆ ಒಂದಿದ್ದರೆ ಸಾಕು.

ಆದರೆ ಈ ‘ಪ್ರಜ್ಞೆ’ ಎಂಬ ಸಂಗತಿಯನ್ನು ನಮ್ಮೊಳಗೆ ಕಾಪಿಟ್ಟುಕೊಳ್ಳುವುದು, ಬೆಳೆಸುವುದು, ನೀರೆರೆಯುವುದು ಬಹಳ ಸುಲಭದ ಕೆಲಸವೇನಲ್ಲ. ಸಾಧ್ಯವಾಗದ ಕೆಲಸವೂ ಅಲ್ಲ. ಭಾರತೀಯ ಸಂಸ್ಕೃತಿಯಂತೂ ಇದನ್ನು ಅರ್ಥಮಾಡಿಕೊಂಡು, ಅದರ ಸುತ್ತಲೇ ಬೆಳೆದಿರುವ ಸಂಸ್ಕೃತಿ. ನಮಗೆ - ನಿಮಗೆ ಈ ನಿಟ್ಟಿನಲ್ಲಿ ಬೆಳೆಯಲು ಕಷ್ಟವಾಗಬಾರದು.

ಮನುಷ್ಯ ತನ್ನ ಪ್ರಜ್ಞೆಯ ಮೇಲೆ ಬದುಕಿದಾಗ ಮಾತ್ರ, ಪ್ರತಿಕ್ಷಣವೂ ಪ್ರಜ್ಞಾಪೂರ್ವಕವಾಗಿ ಇದ್ದಾಗ ಮಾತ್ರ, ಒಂದು ಸಂಪೂರ್ಣ ಸ್ವಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯ. ಮನುಷ್ಯ ಈ ಧರೆಗೆ ವರವಾಗಿ ಪರಿಣಮಿಸಲು ಸಾಧ್ಯ. ಆ ನಿಟ್ತಿನಲ್ಲಿ ಕೆಲಸ ಮಾಡೋಣ. 



Saturday, April 3, 2021

ದೇವಸ್ಥಾನಗಳು ಕೇವಲ ನಂಬುಗೆಯ ಸ್ಥಳವಷ್ಟೇ ಅಲ್ಲ!

 ನಮಗೆ ದೇವಸ್ಥಾನಗಳನ್ನು ಈ ದೇಶದಲ್ಲಿ ಏಕೆ ಕಟ್ಟಿದರು ಎಂಬ ವಾಸ್ತವವೇ ಮರೆತು ಹೋಗಿದೆ. ಇದು ದುರಂತವಾದರೂ ನಿಜ.

ದೇವಸ್ಥಾನಗಳು ಎಂದರೆ ಚಂದದ ಮೂರುತಿಯಿರುವ ಸ್ಥಳ ಅಲ್ಲ. ಸಹಸ್ರ ಕೆತ್ತನೆಗಳಿರುವ ಅಮೋಘ ವಾಸ್ತುಶಿಲ್ಪವಲ್ಲ. ಸಾವಿರಾರು ಜನ ಬಂದು ಹೋಗುವ ಒಂದು ಪಿಕ್ ನಿಕ್ ಸ್ಥಳವಲ್ಲ. ಒಂದಿಷ್ಟು ಕಠೋರ ಭಕ್ತರು ಮಡಿ ಮೈಲಿಗೆಯಲ್ಲಿ ನಡೆಸಿಕೊಂಡು ಹೋಗುತ್ತಿರುವ ನಂಬಿಕಾ ಸ್ಥಳವಲ್ಲ. ನಾವು ನೀವು ಹೋಗಿ, ದೇವರಿಗೆ ಜಗತ್ತನ್ನು ಹೇಗೆ ನಡೆಸಬೇಕು ಎಂದು advice ಮಾಡುವ ಸ್ಥಳವೂ ಅಲ್ಲ.

ಭಾರತದಲ್ಲಿ ದೇವಸ್ಥಾನಗಳ ಪರಿಕಲ್ಪನೆ, ಅಲ್ಲಿ ಹೋಗಿ ಪ್ರಾರ್ಥಿಸಬೇಕು ಎನ್ನುವುದಲ್ಲ. ಅಥವಾ ಅವು ದೇವರ, ಸೃಷ್ಟಿಕರ್ತನ ಮೇಲಿನ ಭಯದಿಂದ ಕಟ್ಟಿಸಿದ ಸ್ಮಾರಕಗಳಲ್ಲ. ಹಾಗಿದ್ದರೆ ದೇವಸ್ಥಾನಗಳು ಎಂದರೆ ಏನು? ಅವುಗಳನ್ನು ಕಟ್ಟಿಸಿದ್ದು ಏಕೆ? ಇದು ಕೇವಲ ಒಂದು ನಂಬಿಕೆಯೋ ಅಥವಾ ಇದರಿಂದ ಮಾನವತೆಗೆ ಪ್ರಯೋಜನಗಳಿವೆಯೋ?

ಮೂಲತಃವಾಗಿ ಭಾರತೀಯ ಸಂಸ್ಕೃತಿ ಬೆಳೆದು ಬಂದ ಚಿಕ್ಕ ಚಿತ್ರಣವನ್ನು ನೋಡೋಣ. ಯಾವ ಕಾಲದಲ್ಲಿ, ಪ್ರಪಂಚದ ಇನ್ನಿತರ ಸ್ಥಳಗಳಲ್ಲಿ ಮನುಷ್ಯರು ಇನ್ನೂ ಕಾಡುಗಳಲ್ಲಿ ವಾಸಿಸುತ್ತಿದ್ದರೋ, ಆ ಕಾಲದಲ್ಲಿ - ಕಲೆ, ಸಂಸ್ಕೃತಿ, ವಿಜ್ಞಾನ, ಯೋಗ, ವೇದ, ಖಗೋಳ, ಸಾಹಿತ್ಯ, ಜ್ಯೋತಿಷ್ಯ, ನೃತ್ಯ, ಸಂಗೀತ ಇವೆಲ್ಲವುಗಳ ಪರಾಕಾಷ್ಠೆಯನ್ನು ಕಂಡಿತ್ತು ಈ ನೆಲ. ಇವೆಲ್ಲ ಹೇಗೆ ಸಾಧ್ಯವಾಯಿತು? ಭಾರತದ ಭೌಗೋಳಿಕ ಸ್ಥಾನ ನೋಡಿದರೆ, ಕೆಲವು ಉತ್ತರಗಳು ಸಿಕ್ಕಾವು. ಮೇಲಿನಿಂದ ಹಿಮಾಲಯ, ಕೆಳಗಿನಿಂದ ಇಂದೂ ಮಹಾಸಾಗರದಿಂದ ಸುತ್ತುವರೆದ gifted ಭೌಗೋಳಿಕ ಸ್ಥಾನ, ಭಾರತಕ್ಕೆ ಹೊರಗಿನವರಿಂದ ಅಪಾರ ರಕ್ಷಣೆಯನ್ನು ನೀಡಿತು. ಹೊಡೆದಾಟ ಬಡಿದಾಟದಲ್ಲೇ ಜೀವನ ಕಳೆಯುವ ಬದಲು, ಕೊಂಚ ಒಳಮುಖರಾಗಲು, ಆಧ್ಯಾತ್ಮ, ಕಲೆ, ವಿಜ್ಞಾನ ಮುಂತಾದವುಗಳನ್ನು ಶೋಧಿಸಲು ನೆರವಾಯಿತು. ಅಷ್ಟಕ್ಕೂ ‘ಹಿಂದೂ’ ಎಂಬ ಹೆಸರು ಬಂದಿದ್ದೇ ‘ಹಿ’ಮಾಲಯ+'ಇಂದು' ಮಹಾಸಾಗರ ಸೇರಿಸಿ, ಇಲ್ಲಿಯ ಜನ ಅವುಗಳು ತಮಗೆ ನೀಡುತ್ತಿರುವ ರಕ್ಷಣೆಯ ಗೌರವಾರ್ಥವಾಗಿ ತಮ್ಮನ್ನು ತಾವು ‘ಹಿಂದು’ ಎಂದು ಕರೆದುಕೊಂಡಿದ್ದರಿಂದ.

ಇಲ್ಲಿಯ ಜನ ಕಂಡುಕೊಂಡ ಒಂದು ಸತ್ಯ ಎಂದರೆ - ‘ದೇವರು’ ನಮ್ಮ ಸೃಷ್ಟಿ. ಆ ಕಾರಣಕ್ಕಾಗಿಯೇ ಭಾರತದಲ್ಲಿ 33 ಮಿಲಿಯನ್ ದೇವತೆಗಳು ಅಸ್ತಿತ್ವಕ್ಕೆ ಬಂದದ್ದು. ಹಾಗೆಂದು ಇದು ಒಂದು ‘ನಂಬಿಕೆಯ’ ಹಿನ್ನಲೆಯಿಂದ ಬಂದಿದ್ದೇ? ಅಲ್ಲ!

‘ಆಗಮ ಶಾಸ್ತ್ರ’ ಎನ್ನುವ ಒಂದು ಶಾಸ್ತ್ರವೇ ದೇವಸ್ಥಾನಗಳನ್ನು ಕಟ್ಟುವ ಕುರಿತು ಶೋಧಿಸಲ್ಪಟ್ಟಿತು. ಪ್ರಾಣಶಕ್ತಿಯನ್ನು ವಿವಿಧ ಬಗೆಯಲ್ಲಿ ಪ್ರತೀಷ್ಠೀಕರಿಸುವ ವಿಧಾನಗಳು ಶೋಧಿಸಲ್ಪಟ್ಟವು. ಸದ್ಗುರುಗಳ ಮಾತಿನಲ್ಲಿ, ನೀವು ಆಹಾರವನ್ನು ಮಾಂಸ, ಎಲುಬುಗಳಿಗೆ ಬದಲಾಯಿಸುವುದನ್ನು ಕಲಿತರೆ - ಅದು ಜೀರ್ಣ ಪ್ರಕ್ರಿಯೆ. ಮಾಂಸ, ಎಲುಬುಗಳನ್ನು ಮಣ್ಣು ಮಾಡುವುದು - ಅಂತ್ಯಸಂಸ್ಕಾರ. ನೀವು ಅದೇ ಮನುಷ್ಯರನ್ನು, ಅಥವಾ ಒಂದು ಕಲ್ಲನ್ನು, ಅಥವಾ ಒಂದು ಖಾಲಿ ಜಾಗವನ್ನು, ಒಂದು ದೈವೀಕ ಸಾಧ್ಯತೆಯನ್ನಾಗಿಸುವುದನ್ನು ಕಲಿತರೆ - ಅದು ಪ್ರಾಣ ಪ್ರತಿಷ್ಠೆ. ಈ ಅಮೋಘ ವಿಜ್ಞಾನ ಭಾರತದಲ್ಲಿ ಮೊಳಕೆಯೊಡೆದು, ಬೃಹತ್ ವೃಕ್ಷವಾಗಿ ನಿಂತಿತು. ಅಗಸ್ತ್ಯ ಮುನಿಗಳು ಕೂಡ ಪ್ರಾಣ ಪ್ರತಿಷ್ಠೀಕರಿಸಿದ ಹಲವು ಸ್ಥಳಗಳು ದಕ್ಷಿಣ ಭಾರತದಲ್ಲಿವೆ.

‘ಆಗಮ’ - ದೇವಸ್ಥಾನಗಳನ್ನು ಕಟ್ಟುವ, ಒಂದು ದೈವೀಕ ಅನುಭೂತಿಯನ್ನು ಸ್ಥಾಪಿಸುವ, ಆ ಮೂಲಕ ಸಮಾಜದ ಪ್ರಜ್ಞೆಯನ್ನು ಅಪಾರ ಮಟ್ಟದಲ್ಲಿ ಉನ್ನತೀಕರಿಸುವ ಅಮೋಘ ವಿಜ್ಞಾನದ ಆಳ-ಅಗಲವನ್ನು ಶೋಧಿಸಿತು.

ನೀವು ನೋಡಿರಬಹುದು - ದಕ್ಷಿಣ ಭಾರತದಲ್ಲಿ ಕೆಲವೆಡೆ ‘ಟೆಂಪಲ್ ಟೌನ್’ಗಳಿವೆ. ಹಾಗೆಂದರೆ, ಅದನ್ನು ಕಟ್ಟಿದ ಕಾಲಕ್ಕೆ ಜನ ಮೊದಲು ಪಟ್ಟಣ ನಿರ್ಮಿಸಿ ನಂತರ ದೇವಸ್ಥಾನ ನಿರ್ಮಿಸಲಿಲ್ಲ. ಮೊದಲು ಬೃಹತ್ ದೇವಸ್ಥಾನಗಳನ್ನು ನಿರ್ಮಿಸಿ, ಸುತ್ತಲೂ ಜೋಪಡಿಯಲ್ಲಿ ವಾಸಿಸಿದರು! ಅವರು ಮೂರ್ಖರಾ? ಖಂಡಿತ ಅಲ್ಲ. ಪ್ರಾಣಪ್ರತಿಷ್ಠಿತ ಸ್ಥಳಗಳ ಸುತ್ತ ವಾಸಿಸುವುದು, ಸಮಾಜದ ಪ್ರಜ್ಞೆಯ ಮೇಲೆ ಎಂಥಹ ಅದ್ಭುತ ಪರಿಣಾಮಗಳನ್ನು ಮಾಡಬಹುದು ಎಂಬ ಪ್ರಜ್ಞೆ ಅವರಿಗಿತ್ತು.

ಭಾರತದಲ್ಲಿ ಕಲೆ, ಸಂಸ್ಕೃತಿ, ವಿಜ್ಞಾನ, ಖಗೋಳ, ಗಣಿತ, ಜ್ಯೋತಿಷ್ಯ ಇವೆಲ್ಲವೂ ಆ ಮಟ್ಟಿಗೆ ಆಗಿನ ಕಾಲದಲ್ಲೇ ಮುಂದುವರಿಯಲು - ಪ್ರಾಣ ಪ್ರತಿಷ್ಥಿತ ಸ್ಥಳಗಳ ಕೊಡುಗೆ ಅಪಾರ. ಭಾರತದಲ್ಲಿ ಎಲ್ಲೋ ಒಂದಿಬ್ಬರು ವಿಜ್ಞಾನಿಗಳು ಆಗಿ ಹೋಗಲಿಲ್ಲ. ಒಂದೆರಡು ಆತ್ಮಜ್ಞಾನಿಗಳು ಸಂಭವಿಸಲಿಲ್ಲ. ಕಲೆ, ವಿಜ್ಞಾನಗಳ ಒಂದೆರಡು ಭಾಗವನ್ನಷ್ಟೇ ಈ ನಾಗರೀಕತೆ ಸಂಶೋಧಿಸಿದ್ದಲ್ಲ. ಕಲೆಗೆ ಬಂದರೆ - ಶಾಸ್ತ್ರೀಯ ಸಂಗೀತ, ಭರತನಾಟ್ಯ ಇವೆಲ್ಲ ಸುಮ್ಮನೆ ಮನಸ್ಸಿಗೆ ಬಂದ ರೀತಿಯಲ್ಲಿ ಮಾಡಿದ್ದಲ್ಲ. ಹೊರಡುವ ಸ್ವರಗಳ, ನೃತ್ಯಗಳಲ್ಲಿ ರೂಪಿತವಾಗುವ ಚಲನೆಗಳ ಹಿಂದೆ ದೊಡ್ಡ ವ್ಯವಸ್ಥಿತ ಜ್ಞಾನದ ಭಂಡಾರವೇ ಇದೆ! ನಾನು ಹೇಳಲು ಹೊರಟಿರುವುದು ಏನೆಂದರೆ, ಇವೆಲ್ಲವುಗಳಲ್ಲಿ ಉನ್ನತವಾಗಿದ್ದ ಸಮಾಜಗಳನ್ನೇ ಈ ನೆಲ ಸೃಷ್ಟಿಸಿತು, ಒಂದೆರಡು ವ್ಯಕ್ತಿಗಳನ್ನಲ್ಲ! ಇವೆಲ್ಲ ಸಾಧ್ಯವಾಗಬೇಕು ಎಂದರೆ, ಮಾನವ ಪ್ರಜ್ಞೆ (consciousness) ಅನ್ನು ಪೋಷಿಸುವ, ನೀರೆರೆದು ಬೆಳೆಸುವ ಪ್ರಾಣಪ್ರತಿಷ್ಠಿತ ಸ್ಥಳಗಳು ಬೇಕು ಎಂಬ ಜ್ಞಾನ ಆ ಸಮಾಜಗಳಿಗೆ ಇತ್ತು. ಅದಕ್ಕೇ ದೇಶದ ತುಂಬೆಲ್ಲ ಸಹಸ್ರಾರು ದೇವಸ್ಥಾನಗಳನ್ನು ಕಟ್ಟಿದ್ದು, ರಾಜರು ಸ್ವತಃ ಕಾಳಜಿ ವಹಿಸಿ, ಭಕ್ತಿಯಿಂದ ಕಟ್ಟಿಸಿದ್ದು.

ಆದರೆ ಇಂದು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಈ ವಿಷಯಗಳನ್ನು ತಿಳಿದ ಜನರ ಸಂಖ್ಯೆ ಕೂಡ ಕಡಿಮೆಯೇ! ಹಿಂದೂಗಳಲ್ಲೇ ದೇವಸ್ಥಾನ ಕೇವಲ ’ಒಂದು ನಂಬಿಕೆ’ ಅಂದುಕೊಂಡು ವಾದಿಸುವವರಿದ್ದಾರೆ. ಈಗ ದೇವಸ್ಥಾನಗಳನ್ನು ಕಟ್ಟುವ ಪರಿಯೂ ಹಾಗೇ ಆಗಿದೆಯೇ? ಗೊತ್ತಿಲ್ಲ.

ಆದರೆ ಇವೆಲ್ಲವನ್ನು ಹೇಳಬೇಕು ಅನ್ನಿಸಿತು. ಕಂಪ್ಯೂಟರ್, ಫೋನ್, ರಾಕೆಟ್, ಮತ್ತೊಂದು ಮಾತ್ರ ವಿಜ್ಞಾನ ಅಂದುಕೊಂಡಿರುವ ನಮಗೆ, ಇಲ್ಲ, ಅವುಗಳಿಗಿಂತ ಗಹನವಾದ, ಬದುಕಿಗೆ ಹತ್ತಿರವಾದ, ಸರ್ವರ ಏಳಿಗೆ ಬಯಸುವ ಅಗಾಧ ಜ್ಞಾನ, ವಿಜ್ಞಾನಗಳು ನಮ್ಮಲ್ಲಿದ್ದವು ಎಂದು ನೆನಪಿಸುವ ಬಯಕೆಯಾಯಿತು. ಮತ್ತೊಮ್ಮೆ ಆ ಜ್ಞಾನಗಳು ಜೀವಂತವಾದರೆ, ಎಷ್ಟು ಚೆನ್ನಾಗಿರುತ್ತೆ ಅಲ್ಲವೇ? ಆದರೆ ಅದು ನಾಳೆ ಬೆಳಗಾಗುವುದರಲ್ಲಿ ಸಂಭವಿಸುವುದಿಲ್ಲ. ಅದನ್ನು ಕಾಲಕ್ರಮದಲ್ಲಿ ಆಗಿಸುವ, ಅದರ ಮಹತ್ವವನ್ನು ನಮ್ಮ ಹೃದಯಗಳಲ್ಲಿ ಜೀವಂತವಾಗಿರಿಸಿಕೊಂಡು ಬದುಕುವ, ಅದಕ್ಕಾಗಿ ಶ್ರಮಿಸುವ ಬದ್ಧತೆ ನಮ್ಮಲ್ಲಿ ಇದೆಯೇ?



ಮೊನ್ನೆ CEASEFIRE ಎಂದು ಟ್ರಂಪ್ ಟ್ವೀಟ್ ಮಾಡಿದಾಗ ನಂಬಲೇ ಆಗಿರಲಿಲ್ಲ… ಈ ಮನುಷ್ಯ ಸ್ವಲ್ಪ ಎಡವಟ್ಟು ಜಾಸ್ತಿ… ಏನೋ ಮಾಡಿದ್ದಾನೆ… ನಾವು ಒಪ್ಪಿರಲಿಕ್ಕಿಲ್ಲ ಅನ್ನಿಸಿತ್...