Friday, September 3, 2021

’ಸದ್ಗುರು’ - ಇಡೀ ವಿಶ್ವ ಭಾರತೀಯ ಸಂಸ್ಕೃತಿಯೆಡೆಗೆ ಬೆರಗುಗಣ್ಣಿನೊಂದಿಗೆ ನೋಡುವಂತೆ ಮಾಡುತ್ತಿರುವ ಚೈತನ್ಯ!

'ಸದ್ಗುರು'. ಇವತ್ತು ಆ ಒಂದು ಹೆಸರನ್ನು ಹೇಳಿದರೆ ಕಣ್ಣಲ್ಲಿ ನೀರು ತಂದುಕೊಂಡು ವಿನೀತರಾಗುವ ಲಕ್ಷಾಂತರ ಜನ ನಿಮಗೆ ಕಾಣಸಿಗುತ್ತಾರೆ. ಸದ್ಗುರುಗಳ ಮಾತುಗಳು, ಅವರ ಯೋಗ  ಕಾರ್ಯಕ್ರಮಗಳು, ಇನ್ನರ್ ಇಂಜಿನಿಯರಿಂಗ್ ಹೀಗೆ ಅವರ ಸಮರ್ಪಣೆಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರ ಸಂಪೂರ್ಣ ಪರಿವರ್ತನೆಗೆ ಕಾರಣವಾಗಿದೆ. ಇಂದು ಸದ್ಗುರುಗಳಿಗಾಗಿ ಪೂರ್ಣ ಪ್ರಮಾಣದಲ್ಲಿ ಕೆಲಸಮಾಡುತ್ತಿರುವ ಸಾವಿರಾರು ಜನರಿದ್ದಾರೆ. ತಮಗೆ ಸಮಯ ಸಿಕ್ಕಾಗ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು ಸ್ವಯಂಸೇವೆ ಮಾಡುವ ಲಕ್ಷಾಂತರ ಜನ ಸದ್ಗುರುಗಳ ಬೆನ್ನಹಿಂದಿದ್ದಾರೆ. 


ಈಗ ಸದ್ಗುರು ಎಂದು ಖ್ಯಾತರಾಗಿರುವ ಜಗದೀಶ್ ವಾಸುದೇವ್ ಹುಟ್ಟಿದ್ದು ಮೈಸೂರಿನ ಬಿ.ವಿ. ವಾಸುದೇವ್ ಹಾಗೂ ಸುಶೀಲಾ ದಂಪತಿಗಳಿಗೆ. ಅದು ಒಂದು ತೆಲುಗು ಮಾತನಾಡುವ ಕುಟುಂಬ. ಬಿ.ವಿ. ವಾಸುದೇವ್ ರೈಲ್ವೇ ಇಲಾಖೆಯಲ್ಲಿ ಹಾಗೂ ಮೈಸೂರಿನಲ್ಲಿ ಹೆಸರಾಂತ ಕಣ್ಣಿನ ತಜ್ಞರಾಗಿದ್ದರು. ಸದ್ಗುರುಗಳು ಹೇಳುವ ಪ್ರಕಾರ ಅವರ ತಾಯಿ ಕರುಣಾಮಯಿ. ತಮ್ಮ ಪತಿ ಹಾಗೂ ಮಕ್ಕಳು ಸ್ವಚ್ಛಂದವಾಗಿ ಜೀವಿಸಲು ಸಾಧ್ಯವಾದ ಎಲ್ಲವನ್ನೂ ಮಾಡುವ ಅಪೂರ್ವ ಗೃಹಿಣಿ. ತಂದೆ ಅತ್ಯಂತ ಶಿಸ್ತು ಮತ್ತು ನಿಯತ್ತಿನ ವ್ಯಕ್ತಿ. ಚಿಕ್ಕ ವಯಸ್ಸಿನಲ್ಲಿ ತಮ್ಮ ತಾಯಿ ಅನಾರೋಗ್ಯಕ್ಕೀಡಾದಾಗ ಸರಿಯಾದ ವೈದ್ಯಕೀಯ ಸೌಲಭ್ಯಗಳು ಸಿಗದೆ ಆಕೆಯನ್ನು ಕಳೆದುಕೊಂಡು, ತಾನು ಶತಾಯುಗತಾಯು ಡಾಕ್ಟರ್ ಆಗಲೇಬೇಕೆಂಬ ಛಲದಿಂದ ಡಾಕ್ಟರ್ ಆದವರು. ವೈದ್ಯರಾದ ಬಳಿಕ ಯಾವ ಹೊತ್ತಿನಲ್ಲಿ ಎಲ್ಲೇ ಕರೆಬಂದರೂ, ಕ್ಷಣವೂ ಯೊಚಿಸದೇ ಅಲ್ಲಿ ಧಾವಿಸುವಷ್ಟು ಕರ್ತವ್ಯನಿಷ್ಠೆ. ತಾಯಿ ಮಮತಾಮಯಿ. ಮಕ್ಕಳು ಹಾಗೂ ಪತಿಗೆ ಚೂರೂ ಕುಂದಾಗದಂತೆ ಸಕಲ ವ್ಯವಸ್ಥೆಗಳನ್ನೂ ಅಚ್ಚುಕಟ್ಟಾಗಿ ಮಾಡುವವರು. ತಾಯಿಯ ಕಾಳಜಿ, ನಡವಳಿಕೆ ತಮ್ಮ ವ್ಯಕ್ತಿತ್ವದ ಮೇಲೆ ಹೇಗೆ ಅಪಾರ ಪ್ರಭಾವ ಬೀರಿದೆ ಎಂದು ಸದ್ಗುರು ಆಗಾಗ ನೆನಪಿಸಿಕೊಳ್ಳುತ್ತಿರುತ್ತಾರೆ.

ಜಗ್ಗಿ ಅತ್ಯಂತ ತುಂಟ ಹುಡುಗ. ಶಾಲೆಗೆ ಹೋಗುತ್ತೇನೆ ಎಂದು ಹೇಳಿ ಹೋಗುತ್ತಿದ್ದುದು ಕಾಡು-ಮೇಡು ಅಲೆಯಲು. ಒಮ್ಮೊಮ್ಮೆ ಮನೆಯಲ್ಲಿ ಪತ್ರ ಬರೆದಿಟ್ಟೇ, ಕಾಡಿನ ಚಾರಣಕ್ಕೆಂದು ವಾರಾನುಗಟ್ಟಲೇ ತೆರಳುತ್ತಿದ್ದುದೂ ಉಂಟು. ಶಾಲೆಯಲ್ಲಿ ಶಿಕ್ಷಕರಿಗೆ  ಅತಿ ಹೆಚ್ಚು ಸವಾಲುಗಳನ್ನು ತಂದಿಡುವ ಪೋರ. ತನ್ನ ಸೈಕಲ್ ನಲ್ಲೇ ದಿನವೂ ಹತ್ತಾರು ಮೈಲುಗಳನ್ನು ತುಳಿಯುವ ಮಹಾ ಉತ್ಸಾಹಿ.
ಕಾಲೇಜಿನಲ್ಲಂತೂ ಈ ಯುವಕನ ಆಟಾಟೋಪ ಹೇಳತೀರದು. ಈತ ಕ್ಲಾಸಿನಲ್ಲಿದ್ದರೆ ಉತ್ತರಿಸಲಾಗದ ಹಲವಾರು ಪ್ರಶ್ನೆಗಳನ್ನು ಕೇಳುತ್ತಾನೆ. ನಮಗೂ ತೊಂದರೆ. ಅವನಿಗಂತೂ ನಮ್ಮ ತರಗತಿಗಳಲ್ಲಿರಲು ಕಿಂಚಿತ್ತೂ ಇಷ್ಟವಿಲ್ಲ. ಹಾಗಿದ್ದರೆ ನಿನಗೆ ಅಟೆಂಡೆನ್ಸ್ ಕೊಡುತ್ತೇವೆ, ಏನು ಬೇಕಾದರೂ ಮಾಡಿಕೊಂಡಿರು, ಉಪದ್ರವ ಕೊಡಬೇಡ ಎಂಬ ನಿರ್ಧಾರಕ್ಕೆ ಶಿಕ್ಷಕರು ಬಂದರು. ಜಗ್ಗಿ ಗೆ ಬೇಕಾದದ್ದೂ ಬೇರೇನೂ ಅಲ್ಲವಲ್ಲ?! ಇವೆಲ್ಲದರ ನಡುವೆಯೂ ಫೈನಲ್ ಇಯರ್ ಡಿಗ್ರಿಯನ್ನು ಮೈಸೂರು ಯೂನಿವರ್ಸಿಟಿಯಲ್ಲಿ ರ‍್ಯಾಂಕ್ ನೊಂದಿಗೆ ಸಮಾಪಣೆಗೊಳಿಸಿದ್ದು, ಇವರಿಗಿದ್ದ ತೀಕ್ಷ್ಣ ಬುದ್ಧಿಗೆ ಹಿಡಿದ ಕನ್ನಡಿ.



ಕಾಲೇಜಿನ ಸಮಯದಲ್ಲಿ, ಹಾಗೂ ನಂತರ ಜಗ್ಗಿಗೆ ಬೈಕಿನಲ್ಲಿ ದೇಶವನ್ನೆಲ್ಲ ತಿರುಗುವ ಹೆಬ್ಬಯಕೆ. ಆ ಸಮಯದಲ್ಲಿ ಅವರು ಭಾರತವನ್ನು ಹಲವು ಬಾರಿ ಉತ್ತರದಿಂದ ದಕ್ಷಿಣಕ್ಕೆ, ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ಬೈಕ್ನಲ್ಲೇ ಕ್ರಮಿಸಿದ್ದಾರೆ. ಒಮ್ಮೆ ನೇಪಾಳದ ಗಡಿಗೆ ಹೋಗಿ ಪಾಸ್ ಪೋರ್ಟ್ ಇಲ್ಲ ಎಂಬ ಕಾರಣಕ್ಕೆ ಹಿಂದಿರುಗಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಕಾಲೇಜ್ ನಂತರ, ಜಗ್ಗಿಗೆ construction ಬಿಸಿನೆಸ್ ಅಭೂತಪೂರ್ವವಾಗಿಯೇ ಕೈಹಿಡಿದಿತ್ತು. ಸಾಕಷ್ಟು ಹಣ ಸಂಪಾದನೆಯಾಗುತ್ತಿತ್ತು. ಹೀಗೆ ಎಲ್ಲವೂ ಸರಿಯಿತ್ತು ಎನ್ನುವಾಗ ‘ಆ’ ಘಟನೆ ನಡೆಯಿತು.

ಜಗ್ಗಿ ವಾಸುದೇವ್ ಗೆ ಆಗ 25ರ ವಯಸ್ಸು. ಅವರು ಯೋಗಾಭ್ಯಾಸಗಳನ್ನು ಮಾಡಲು ಶುರುಮಾಡಿ ಆಗಲೇ ಹನ್ನೆರಡು ವರ್ಷವಾಗಿತ್ತು. ಅಂದೂ ಅವರು ಎಂದಿನಂತೆ ಮೈಸೂರಿನ ತಮ್ಮ ಕಚೇರಿಯಲ್ಲಿ ಒಂದಿಷ್ಟು ಕೆಲಸ ಮುಗಿಸಿದ್ದರು. ಮಧ್ಯಾಹ್ನದ ಹೊತ್ತಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಬರುವ ಮನಸ್ಸಾಯಿತು. ಚಾಮುಂಡಿ ಬೆಟ್ಟ ಅವರು ಅಪರೂಪಕ್ಕೆ ಹೋಗುವ ತಾಣ ಅಲ್ಲ. ಅವರು, ಅವರ ಗೆಳೆಯರು ಮನೆಯ ಹಿತ್ತಲಿಗೆ ಹೋಗುವಷ್ಟು ಬಾರಿ ಚಾಮುಂಡಿ ಬೆಟ್ಟಕ್ಕೂ ಹೋಗುತ್ತಿದ್ದರು. ಅವರಿಗೆ ಅದು ಅಂಗೈನ ಗೆರೆಗಳಷ್ಟು ಚಿರಪರಚಿತವಾದ ತಾಣ. ಅಂದೂ ಹಾಗೆಯೇ ಅಲ್ಲಿಗೆ ಹೋದರು. ಬೆಟ್ಟದ ಬಂಡೆಯೊಂದರ ಮೇಲೆ ಕುಳಿತರು. ಕುಳಿತಿದ್ದಷ್ಟೇ, ಒಂದು ಅಭೂತಪೂರ್ವ ಅನುಭಾವ ಅವರದ್ದಾಯಿತು. ಸುತ್ತಲಿನ ಮರ, ಗಿಡ, ಬಂಡೆ, ಬೆಟ್ಟ, ಗಾಳಿ, ನೀರು ಸರ್ವಸ್ವವೂ ತಮ್ಮದೇ ಭಾಗ ಎಂಬ ಜೀವಂತ ಅನುಭವ. ಕಣ್ಣಿನಲ್ಲಿ ಧಾರಾಕಾರ ನೀರು. ಅವರು ಈ ಭಾವದಿಂದ ಹೊರಬಂದಾಗ ಸುಮಾರು 5-6 ಘಂಟೆಗಳು ಕಳೆದಿದ್ದವು! ಆದರೆ ಅವರಿಗೆ ಕೇವಲ ಐದು ನಿಮಿಷವಷ್ಟೇ ಕುಳಿತ ಅನುಭವ. ಈ ಅನುಭವ ಮುಂದಿನ ದಿನಗಳಲ್ಲಿ ಹಲವು ಬಾರಿ ಮರುಕಳಿಸಿತು.



ತಮಗೆ ಆದ ಈ ಅಭೂತಪೂರ್ವ ಅನುಭವವನ್ನು, ತಾವು ಅನುಭವಿಸಿದ ಈ ಎಲ್ಲೆ ಮೀರಿದ ಮಹದಾನಂದವನ್ನು ಜಗತ್ತಿಗೆಲ್ಲ ಹಂಚಬೇಕು ಎಂಬ ಹಿರಿದಾಸೆ ಇವರದಾಯಿತು. ಈ ಶಪಥ ತೊಟ್ಟು, ತಮ್ಮ ಇಡೀ ಜೀವನವನ್ನೇ ಅದಕ್ಕಾಗಿ ಮುಡಿಪಾಗಿಟ್ಟರು.

ಆರಂಭದ ದಿನಗಳು ಸುಲಭವಿರಲಿಲ್ಲ. ತಾವೇ ಎಲ್ಲಾಕಡೆ ಬೈಕ್ ನಲ್ಲಿ ಕ್ರಮಿಸಿ, ತಾವೇ ಸ್ಥಳಗಳನ್ನು ಹುಡುಕಿ, ಜನರ ಮನವೊಲಿಸಿ, ಅವರಿಗೆ ಯೋಗ ಕಾರ್ಯಕ್ರಮಗಳನ್ನು ಮಾಡುವಷ್ಟರಲ್ಲಿ ಹರಸಾಹಸವೇ ಆಗುತ್ತಿತ್ತು. ಬಹುಶಃ ಇವರು ಆ ದಿನಗಳಲ್ಲಿ ಲಕ್ಷ್ಮಣನಂತೆ ನಿದ್ರಿಸಿದ್ದೇ ಇಲ್ಲ. ಒಂದು ದಿನ ಮೈಸೂರಾದರೆ, ಮತ್ತೊಂದು ದಿನ ಮಂಗಳೂರು ಅಥವಾ ಶಿವಮೊಗ್ಗ. ಮುಂದಿನವಾರ ಹೈದರಾಬಾದ್! ಹೀಗೆ. 

ನಿಧಾನವಾಗಿ ಶಿಷ್ಯರನ್ನು, ಸ್ವಯಂಸೇವಕರನ್ನು ಸಂಪಾದಿಸುತ್ತಾ, 1992ರಲ್ಲಿ ಇವರು ಸ್ಥಾಪಿಸಿದ್ದು ‘ಈಶಾ ಫೌಂಡೇಶನ್’. ಸದ್ಗುರು ಪ್ರಾಣಪ್ರತಿಷ್ಠೆಯ ವಿಜ್ಞಾನದಲ್ಲಿ ನಿಸ್ಸೀಮರು. 1999ರಲ್ಲಿ ‘ಧ್ಯಾನಲಿಂಗ’ ಎಂಬ ಅದ್ಭುತ ಲಿಂಗವನ್ನು ಪ್ರಾಣಪತಿಷ್ಠೆಗೊಳಿಸಿದರು. ಈ ಲಿಂಗದ ವೈಶಿಷ್ಟ್ಯವೆಂದರೆ, ಇದರಲ್ಲಿ ಎಲ್ಲಾ ಏಳೂ ಚಕ್ರಗಳೂ ಅತ್ಯುನ್ನತ ಶಿಖರದಲ್ಲಿವೆ. ಇಂಥಹ ಲಿಂಗ ಮತ್ತೊಂದು ಸಿಗಲಾರದು. ಇದರ ಮಂಟಪದಲ್ಲಿ ಕುಳಿತರೆ, ಇನ್ಯಾವ ಸಹಾಯವೂ ಇಲ್ಲದೇ ನೀವು ಧ್ಯಾನಸ್ಥರಾಗಬಲ್ಲಿರಿ. ಕೊಯಮತ್ತೂರಿಗೆ ಹೋದಾಗ, ನೀವು ಇಲ್ಲೊಮ್ಮೆ ಭೇಟಿ ನೀಡಬೇಕು.


                                                    (ಚಿತ್ರ: ಧ್ಯಾನಲಿಂಗ, ಕೊಯಮತ್ತೂರು)
ಸದ್ಗುರು ತಮ್ಮ ಜ್ಞಾನಸುಧೆಯನ್ನು ಕಳೆದೆರಡು ದಶಕಗಳಿಂದ ವಿಶ್ವದ ಮುಂದೆ ಹರವಿಟ್ಟ ಬಗೆಯೇ ಬೆರಗುಹುಟ್ಟಿಸುವಂಥದ್ದು! ಸದ್ಗುರು ಬಹುಶಃ ಮಾತನಾಡದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವೇದಿಕೆಗಳೇ ಇಲ್ಲ. ಅದು ವಿಶ್ವಸಂಸ್ಥೆಯಾಗಿರಬಹುದು, ಯುನೆಸ್ಕೊ ಆಗಿರಬಹುದು, ವರ್ಲ್ಡ್ ಇಕೊನಾಮಿಕ್ ಫಾರ್ಮ್ ಆಗಿರಬಹುದು, ವಿಶ್ವಪ್ರಸಿದ್ಧ ಆಕ್ಸ್ ಫರ್ಡ್, ಕೇಂಬ್ರಿಡ್ಜ್, ಟೆಡ್ ಆಗಿರಬಹುದು, ಭಾರತದ ಐಐಟಿ, ಐಐಎಮ್ ಗಳಿರಬಹುದು ಸದ್ಗುರುವಾಣಿ ಇಲ್ಲೆಲ್ಲ ಪ್ರತಿಧ್ವನಿಸಿದೆ. ವಿಶ್ವಪ್ರಸಿದ್ಧ ವಿಜ್ಞಾನಿಗಳು, ವಿದ್ವಾಂಸರು ಎಲ್ಲರೂ ಸದ್ಗುರುಗಳೊಂದಿಗೆ ಸಂವಾದ ನಡೆಸಿದ್ದಾರೆ ಹಾಗೂ ಇವರ ಅಪಾರ ಜ್ಞಾನಕ್ಕೆ ತಲೆದೂಗಿದ್ದಾರೆ.




ಅವರ ಯೋಗ ಕಾರ್ಯಕ್ರಮಗಳೂ ವಿಶ್ವಮಟ್ಟದಲ್ಲಿ, ಬಹಳ ದೊಡ್ದ ಸ್ಕೇಲ್ ನಲ್ಲಿ ಅರ್ಪಿತವಾಗುತ್ತಾ ಬಂದಿವೆ. ಇಂದು ಬಹುಶಃ 500-700 ಮಿಲಿಯನ್ ಜನ ವಿಶ್ವದಾದ್ಯಂತ ಇನ್ನರ್ ಇಂಜಿನಿಯರಿಂಗ್ ಮಾಡಿದ್ದಾರೆ. ಈಶಾ ಸಂಪೂರ್ಣ ಸ್ವಯಂಸೇವಕರಿಂದಲೇ ನಡೆಯುತ್ತಿರುವ ಸಂಸ್ಥೆ. ಸುಮಾರು 10 ಮಿಲಿಯನ್ ಗೂ ಅಧಿಕ ಸ್ವಯಂಸೇವಕರು ಈ ಸಂಸ್ಥೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  
ಸದ್ಗುರು ಸೃಷ್ಟಿಸಿದ ‘ರ‍್ಯಾಲಿ ಫಾರ್ ರಿವರ್ಸ್’ ಜಗತ್ತಿನ ಅತ್ಯಂತ ದೊಡ್ಡ ಪರಿಸರ ಸಂರಕ್ಷಣಾ ಆಂದೋಲನವಾಯಿತು. ದೇಶದಾದ್ಯಂತ 16 ಕೋಟಿ ಜನ ಇದನ್ನು ಬೆಂಬಲಿಸಿದರು. ಪಕ್ಷಭೇದ ಮರೆತು 15 ರಾಜ್ಯಸರ್ಕಾರಗಳು ಬೆಂಬಲಕ್ಕೆ ನಿಂತವು. ಇವೆಲ್ಲದರ ಪರಿಣಾಮ ರ‍್ಯಾಲಿ ಫಾರ್ ರಿವರ್ಸ್ ನ ನೀತಿಯನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ರಾಜ್ಯಗಳಿಗೆ ಶಿಫಾರಸ್ಸು ಮಾಡಿತು. ಒಂದು ಅನುಕರಣೀಯ ಮಾಡೆಲ್ ಆಗಿ ಕಾವೇರಿಯನ್ನು ಆಯ್ದುಕೊಂಡು, ಈಶಾ ಫೌಂಡೇಶನ್ ಕಳೆದೆರಡು ವರ್ಷಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಅಪಾರ ಕೆಲಸಗಳನ್ನು ಮಾಡುತ್ತಿದೆ. ಇದು ರೈತರಿಗೆ ಅಪಾರ ಲಾಭ ತರಬಲ್ಲ ಹಾಗೂ ಕಾವೇರಿಯ ಪುನರುಜ್ಜೀವನಕ್ಕೂ ಕಾರಣವಾಗಬಲ್ಲ ’ಅರಣ್ಯ ಕೃಷಿ’ಯ ಕೆಲಸ. 2020ರ ಸಾಲಿನಲ್ಲಿ ಅಮೋಘ 1.1 ಕೋಟಿ ಸಸಿಗಳನ್ನು ಜಲಾನಯನ ಪ್ರದೇಶದಲ್ಲಿ ನೆಡಲಾಗಿದೆ. 12 ವರ್ಷಗಳಲ್ಲಿ 242 ಕೋಟಿ ಸಸಿಗಳನ್ನು ನೆಡಬೇಕೆಂಬುದು ಗುರಿ. ಇವೆಲ್ಲ ಸಾಧ್ಯವಾದದ್ದು ಸದ್ಗುರುಗಳ ವರ್ಚಸ್ಸು ಹಾಗೂ ಅಪಾರ ಶ್ರಮದಿಂದ. 


ಇಂದು ವಿಶ್ವಸಂಸ್ಥೆಗೆ ನೀರಿನ ಬಗ್ಗೆ, ಪರಿಸರದ ಬಗ್ಗೆ, ಮಣ್ಣಿನ ಬಗ್ಗೆ ಮಾತನಾಡಲೂ ಸದ್ಗುರು ಬೇಕು, ಅಂತರಾಷ್ಟ್ರೀಯ ಯೋಗ ದಿನಕ್ಕೂ ಸದ್ಗುರು ಬೇಕು. ಇವರ ಜ್ಞಾನಸುಧೆಯನ್ನು, ಪರಿಸರ ಕಾರ್ಯಕ್ರಮಗಳನ್ನು ವಿಶ್ವವೇ ಬೆರಗುಗಣ್ಣುಗಳಿಂದ ನೋಡುತ್ತಿದೆ. ಇವರ ಕೆಲಸಗಳನ್ನು ಮನ್ನಿಸಿ, ಸರ್ಕಾರ ಪರಿಸರದ ಕೆಲಸಗಳಿಗಾಗಿ ಭಾರತದ ಅತ್ಯುನ್ನತ ಪುರಸ್ಕಾರವಾದ ’ಇಂದಿರಾಗಾಂಧಿ ಪರ್ಯಾವರಣ್ ಪುರಸ್ಕಾರ್’ಅನ್ನು ಹಾಗೂ ಅತ್ಯುನ್ನತ ವಾರ್ಷಿಕ ನಾಗರೀಕ ಪ್ರಶಸ್ತಿ ’ಪದ್ಮವಿಭೂಷಣ’ಗಳು ಇವರನ್ನು ಹುಡುಕಿಕೊಂಡು ಬಂದಿವೆ. ಇವರ ಯೋಗ ಕಾರ್ಯಕ್ರಮಗಳಲ್ಲಿ ವಿಶ್ವದ ಕೋಟ್ಯಂತರ ಜನರು ಮಿಂದೇಳುತ್ತಿದ್ದಾರೆ. ಅವರ ಬದುಕನ್ನು ಅದು ಸಂಪೂರ್ಣವಾಗಿ ಬದಲಿಸಿದ್ದನ್ನು ಅವರೇ ಹೇಳಿಕೊಳ್ಳುತ್ತಾರೆ. ಬೆಂಗಳೂರಲ್ಲೇ ಅವರ ಕಾರ್ಯಕ್ರಮಗಳನ್ನು ಮಾಡಿದ ಡಾಕ್ಟರುಗಳು, ಇಂಜಿನಿಯರುಗಳು, ವಿಜ್ಞಾನಿಗಳು, ವಿದ್ಯಾರ್ಥಿಗಳು ಹೀಗೆ ಲಕ್ಷಾಂತರ ಜನ ನಿಮಗೆ ಸಿಗುತ್ತಾರೆ. ಅಪಾರ ಕೃತಜ್ಞತೆಯಿಂದ ಸದ್ಗುರುಗಳನ್ನು ಪೂಜಿಸುತ್ತಾರೆ. 
ಇಂಥವರು ಭಾರತದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಹಾಗೂ ಹೆಮ್ಮೆ. ಇಂಥಹ ಸಂತರು ಮತ್ತು ಋಷಿಗಳಿಂದಲೇ ಭಾರತ ಮಾತೆ ವಿಶ್ವದಾದ್ಯಂತ ತನ್ನ ಅಪಾರ ಅಧ್ಯಾತ್ಮ ಹಾಗೂ ಜ್ಞಾನ ಸಂಪತ್ತನ್ನು ಬೀರಲು ಸಾಧ್ಯವಾಗಿರುವುದು. ಇವರು ಮತ್ತಷ್ಟು ಜನರ ಬದುಕಿನ ದಾರಿದೀಪವಾಗಲಿ. ಭಾರತದ ಅಧ್ಯಾತ್ಮ ಸಂಪತ್ತು ‘ಜಗ’ಮಗಿಸಲಿ.

No comments:

Post a Comment

ಮೊನ್ನೆ CEASEFIRE ಎಂದು ಟ್ರಂಪ್ ಟ್ವೀಟ್ ಮಾಡಿದಾಗ ನಂಬಲೇ ಆಗಿರಲಿಲ್ಲ… ಈ ಮನುಷ್ಯ ಸ್ವಲ್ಪ ಎಡವಟ್ಟು ಜಾಸ್ತಿ… ಏನೋ ಮಾಡಿದ್ದಾನೆ… ನಾವು ಒಪ್ಪಿರಲಿಕ್ಕಿಲ್ಲ ಅನ್ನಿಸಿತ್...