Wednesday, May 10, 2023

ಆ ಪಕ್ಷ, ಈ ಪಕ್ಷವಲ್ಲ - ಆಡಳಿತದಲ್ಲಿರಬೇಕಿರುವುದು 'ಪ್ರಜಾಪ್ರಭುತ್ವ'!


ಮತದಾನ ಮುಗಿದಿದೆ. ಕರ್ನಾಟಕ ವಿಧಾನಸಭೆಯ ಚುಕ್ಕಾಣಿಯನ್ನು ಯಾರು ಹಿಡಿಯಲಿದ್ದಾರೆ ಎಂಬುದನ್ನು ಮತದಾರ ಗುಪ್ತವಾಗಿ ತೀರ್ಮಾನಿಸಿದ್ದಾನೆ. 

ಪ್ರಜಾಪ್ರಭುತ್ವ ಭಾರತದಲ್ಲಿ ಬಂದು 50 ವರ್ಷಗಳ ನಂತರ ಜನಿಸಿರುವ ನನ್ನಂತವರಿಗೆ, ಅಥವಾ ಅದು ಬಂದ ನಂತರ 10-20-30-40 ವರ್ಷಗಳ ನಂತರ ಜನಿಸಿರುವ ಓದುಗರಿಗೆ ಪ್ರಜಾಪ್ರಭುತ್ವವನ್ನು ಪಡೆಯುವಲ್ಲಿ ಹಿಂದಿನ ಜನಾಂಗಗಳು ಪಟ್ಟ ಕಷ್ಟ ಎಷ್ಟರ ಮಟ್ಟಿಗೆ ಅರ್ಥವಾಗುತ್ತೆ ಗೊತ್ತಿಲ್ಲ. ದೊಡ್ಡ ಸಂಖ್ಯೆಯಲ್ಲಿ ಜನರು ಯಾರನ್ನು ಬೆಂಬಲಿಸುತ್ತಾರೋ ಅವರು ರಾಜನಾಗುವ, ರಾಜನಾದ ನಂತರವೂ ಅವಶ್ಯವಿದ್ದಲ್ಲಿ ಅವನನ್ನು ಮುಂದಿನ ಐದೇ ವರ್ಷಗಳಲ್ಲಿ ಅಧಿಕಾರದಿಂದ ಕೆಳಗಿಳಿಸಬಲ್ಲ ಅಧಿಕಾರವನ್ನು ಜನರಿಗೆ ನೀಡಿರುವ ಈ ವ್ಯವಸ್ಥೆ ಸಾಮಾನ್ಯವಾದುದಲ್ಲ.

ಆದರೆ ವ್ಯವಸ್ಥೆ ಎಂತದ್ದೇ ಆದರೂ ಅದನ್ನು ಸರಿಯಾಗಿ, ಸಮರ್ಪಕವಾಗಿ ಬಳಸಿಕೊಳ್ಳುವ ಜನರಿಲ್ಲದಿದ್ದರೆ ಏನು ಪ್ರಯೋಜನ? ನಾನು ನನ್ನ ಜಾತಿಯವರನ್ನು ಮಾತ್ರ ಗೆಲ್ಲಿಸುತ್ತೇನೆ, ನನ್ನ ಜಾತಿಯವನು ಮಾತ್ರ ಮಂತ್ರಿಯಾಗಬೇಕು, ಮುಖ್ಯಮಂತ್ರಿಯಾಗಬೇಕು - ಹೀಗೆ, ನಾವು ಇದರ ಸುತ್ತವೇ ಸುತ್ತಿದರೆ ಇದು ಮತ್ತೆ ಒಂದೇ ಕುಟುಂಬದವರು(ಈಗ ಒಂದೇ ಜಾತಿಯವರು) ರಾಜನಾಗುವುದಕ್ಕಿಂತ ಹೇಗೆ ಭಿನ್ನವಾದಂತಾಗುತ್ತದೆ? Democracy ಅಥವಾ ಪ್ರಜಾಪ್ರಭುತ್ವ ಪ್ರಜೆಗೆ ಕೊಟ್ಟಿರುವ ಅತ್ಯಂತ ದೊಡ್ದ ಶಕ್ತಿ ಎಂದರೆ ಅವನಿಗೆ ‘ಯೋಚಿಸುವ ಶಕ್ತಿ’ಯನ್ನು ಕೊಟ್ಟಿದ್ದು. ಪ್ರತಿ ಚುನಾವಣೆಯಲ್ಲೂ ಅವನು ಯೋಚಿಸಿ ತನ್ನ ರಾಜ ಯಾರಾಗಬೇಕೆಂದು ನಿರ್ಧರಿಸಬಹುದು. ಕೆಲಸ ಮಾಡಿಲ್ಲವೆಂದರೆ ಮುಂದಿನ ಚುನಾವಣೆಯಲ್ಲಿ ಅವನನ್ನು ಬೀಳಿಸಬಹುದು. ಆದರೆ ಆತ ನನ್ನ ಜಾತಿಯವ ಅಂತ ಅವ ಕೆಲಸ ಮಾಡಲಿ, ಬಿಡಲಿ ಅವನನ್ನೇ ಗೆಲ್ಲಿಸಬೇಕೆಂದರೆ - ಇಷ್ಟೆಲ್ಲ ಕಷ್ಟಪಟ್ಟು ಪ್ರಜಾಪ್ರಭುತ್ವವನ್ನು ತಂದಿರೋದು ಏಕೆ?

ರಾಜ್ಯದ ಮುಖ್ಯಮಂತ್ರಿಯ ವಿಚಾರದಲ್ಲೂ ಅಷ್ಟೇ. ರಾಜ್ಯದ ಬಗ್ಗೆ ತಿಳಿದುಕೊಂಡಿರುವ, ರಾಜ್ಯದ ಉದ್ದಗಲವನ್ನು ಸಂಚರಿಸಿ ಅದರ ನಾಡಿಮಿಡಿತವನ್ನು ಅರಿತಿರುವ, ರಾಜ್ಯದ ಬಗ್ಗೆ ಮುಂದಾಲೋಚನೆಯಿರುವ, ವ್ಯವಹಾರದಲ್ಲಿ, ಆಡಳಿತದಲ್ಲಿ ಚಾಣಾಕ್ಷನಾಗಿರುವವರು ರಾಜ್ಯದ ಮುಖ್ಯಮಂತ್ರಿಯಾಗಬೇಕೋ, ಅಥವಾ ಒಬ್ಬರು ಒಂದು ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕೋ? ಹಿಂದಿನ ಕಾಲದಲ್ಲಿ ಪುರೋಹಿತನ ಮಗ ಮಾತ್ರ ಪುರೋಹಿತನಾಗಬೇಕಿತ್ತು. ಬಡಗಿಯ ಮಗ ಬಡಗಿಯೇ ಆಗಬೇಕಿತ್ತು. ಕ್ಷತ್ರಿಯರು ಮಾತ್ರ ರಾಜನಾಗೋ ಕನಸು ಕಾಣಬಹುದಿತ್ತು. ಈಗಲೂ ಒಂದು ಸಮುದಾಯದವರು ಮಾತ್ರ ಮುಖ್ಯಮಂತ್ರಿಯಾಗಬೇಕು ಎಂದರೆ, ಆಗಿನದಕ್ಕೂ ಈಗಿನದಕ್ಕೂ ವ್ಯತ್ಯಾಸವೇನು? ನಾವು ಹಿಮ್ಮುಖವಾಗಿ ಚಲಿಸುತ್ತಿದ್ದೇವೆಯೇ, ಮುಮ್ಮುಖವಾಗೋ?

ಒಬ್ಬ ನಾಯಕನಿಗೆ, ಆತ ಕಾರ್ಪೋರೇಟರ್ ಇರಬಹುದು, ಎಮ್ಮೆಲ್ಲೆ ಇರಬಹುದು, ಮುಖ್ಯಮಂತ್ರಿಯಿರಬಹುದು, ಅಥವಾ ಒಂದು ಬಿಸಿನೆಸ್ ಲೀಡರ್ ಇರಬಹುದು, ಆತನಿಗೆ ಇರಬೇಕಾದ ಏಕೈಕ ಗುಣ ಎಂದರೆ ಒಳಗೂಡಿಸಿಕೊಳ್ಳುವಿಕೆ. ಇದಕ್ಕೆ ಇಂಗ್ಲೀಷಿನಲ್ಲಿ Inclusiveness ಎನ್ನುತ್ತಾರೆ. ಅಂದರೆ, ಬೇರೆಯವರನ್ನು ನಮ್ಮವರು ಎಂದು ಒಳಗೂಡಿಸಿಕೊಳ್ಳುವುದು. ಅವನು ಯಾರೇ ಆಗಿರಲಿ, ಎಡಪಂಥೀಯ, ಬಲಪಂಥೀಯ, ಆ ಪಕ್ಷ, ಈ ಪಕ್ಷ, ಮನುಷ್ಯ, ಪ್ರಾಣಿ, ಗಿಡ-ಮರ, ಕ್ರಿಮಿ-ಕೀಟ ಹೀಗೆ ಅದು ಏನೇ ಆಗಿರಲಿ, ಅವೆಲ್ಲವನ್ನೂ ತನ್ನ ಭಾಗವಾಗಿ ‘ಒಳಗೂಡಿಸಿಕೊಳ್ಳುವ’ ಗುಣ ಒಬ್ಬ ನಾಯಕನಿಗೆ ಇರಬೇಕು. ಆಗ ಮಾತ್ರ ಅವನು ಮನುಷ್ಯರಿಗೆ, ಪ್ರಾಣಿಗಳಿಗೆ, ಪರಿಸರಕ್ಕೆ, ಭೂಮಿಗೆ ಒಳಿತು ಮಾಡಲು ಸಾಧ್ಯ. ಒಬ್ಬರು ಎಷ್ಟು ಸಂಗತಿಗಳನ್ನು ಒಳಗೂಡಿಸಿಕೊಳ್ಳುತ್ತಾರೋ ಅಷ್ಟು ದೊಡ್ಡವರಾಗುತ್ತಾರೆ, ಎಷ್ಟನ್ನು ವಿಂಗಡಿಸಿ ಪ್ರತ್ಯೇಕಿಸುತ್ತಾರೋ ಅಷ್ಟು ತಮ್ಮೊಳಗೇ ಚಿಕ್ಕವರಾಗುತ್ತಾರೆ.

ಹಾಗೆಯೇ ಮತದಾರ ಪ್ರಭುಗಳು ವೋಟು ಹಾಕಿ ಐದು ವರ್ಷ ಸುಮ್ಮನೆ ಕುಳಿತರೆ actually ಮತ್ತೆ ಅದು ‘ಪ್ರಜಾಪ್ರಭುತ್ವ’ ಅಲ್ಲ(ಕೆಲವರು ವೋಟನ್ನೂ ಹಾಕುವುದಿಲ್ಲ, ಅಂಥವರ ವಿಷಯ ಬಿಡಿ).  ಪ್ರಜಾಪ್ರಭುತ್ವ ಎಂದರೆ ಸಕ್ರಿಯವಾಗಿ ಭಾಗವಹಿಸುವಿಕೆ. ನನ್ನ ವಾರ್ಡಿನಲ್ಲಿ, ನನ್ನ ಕ್ಷೇತ್ರದಲ್ಲಿ ಏನಾಗುತ್ತಿದೆ, ಏನಾಗಬೇಕು ಎಲ್ಲವೂ ಪ್ರಜೆಗೆ ತಿಳಿದಿರಬೇಕು. ಪ್ರಜೆಗಳು ಒಗ್ಗಟಿನಲ್ಲಿ ಪ್ರತಿನಿಧಿಗೆ ಆಗಾಗ ಮಾರ್ಗದರ್ಶಿಸುತ್ತಿರಬೇಕು. ನನಗೆ ಗೊತ್ತು - ಒಬ್ಬ ಯಾರೋ ಹೋಗಿ ಹೇಳಿದರೆ ಕೆಲಸವಾಗೋಲ್ಲ. ಪ್ರಜ್ಞಾವಂತ ಪ್ರಜೆಗಳು ಒಕ್ಕೂಟಗಳನ್ನು ರಚಿಸಿಕೊಂಡು ಪ್ರತಿನಿಧಿ ಕೆಲಸ ಮಾಡುವಂತೆ ಮಾಡಬೇಕು. “ಅಯ್ಯೋ ಚೆನ್ನಾಗ್ ಹೇಳಿದ್ರಿ ಸರ್… ಇವೆಲ್ಲ ನಮ್ಮ ದೇಶದಲ್ಲಿ ಕೆಲಸ ಮಾಡುತ್ವೆ?” ಅಂತ ನೀವು ಹೇಳಬಹುದು. ಆದರೆ ನಮ್ಮ ದೇಶದಲ್ಲಿ ರಾಜಕಾರಣಿಗಳು ಉಂಡಾಡಿ ಗುಂಡರಾಗಿರುವುದು, ಭ್ರಷ್ಟರಾಗಿರುವುದು, ಮೈಗಳ್ಳರಾಗಿರುವುದರಲ್ಲಿ ಪ್ರಜೆಗಳ ನಿರ್ಲಕ್ಷ, ಮೇಲೆ ಹೇಳಿದ ಭಾಗವಹಿಸುವಿಕೆಯ ಕೊರತೆ ಹಾಗೂ ಅಸಡ್ಡೆಯೂ ಕಾರಣ ಎಂಬುದನ್ನು ನೀವು ಅಲ್ಲಗೆಳೆಯಲಾಗದು. “ಅಯ್ಯೋ ಈ ರಾಜಕಾರಣಿಗಳೆಲ್ಲ ಮಹಾ ಭ್ರಷ್ಟರು… ಹಾಗೆ ಹೀಗೆ” ಅಂತೆಲ್ಲ ಮನೆಯಲ್ಲಿ ಕುಳಿತು ಹರಟೆ ಹೊಡೆಯುವುದು ಸರಳ. ಆದರೆ ಅವರೂ ನಮ್ಮ ನಿಮ್ಮಂತ ಸಾಮಾನ್ಯರಾಗಿದ್ದವರೇ ಅಲ್ಲಿಗೆ ಹೋದವರು ಎಂಬುದನ್ನು ಮರೆಯಬಾರದು. “ವ್ಯವಸ್ಥೆ ಸರಿಯಿಲ್ಲ” ಎಂದು ಎಲ್ಲರೂ ಆಲಸ್ಯದಿಂದ ಕುಳಿತುಬಿಟ್ಟರೆ ವ್ಯವಸ್ಥೆ ಎಂದೆಂದೂ ಸರಿಯಾಗುವುದಿಲ್ಲ. ಬಹುಶಃ 100% ಪರ್ಫೆಕ್ಟ್ ವ್ಯವಸ್ಥೆ ಎಂದಿಗೂ ಬರುವುದಿಲ್ಲ…ಅವೆಲ್ಲ ಬಾಲಿಶ ಕನಸುಗಳಷ್ಟೆ. ಆದರೆ ಈಗಿರುವುದಕ್ಕಿಂತ ನೂರು ಪಟ್ಟು ಒಳ್ಳೆಯ ವ್ಯವಸ್ಥೆಯನ್ನು ನಾವು ನಿರ್ಮಿಸಬಹುದಲ್ಲ? ನಮ್ಮ ಗುರಿ ಅದಾಗಿರಬೇಕು.

ಚುನಾವಣೆ ಮುಗಿದಿದೆ. ಮತದಾರ ಗುಪ್ತವಾಗಿ ತನ್ನ ತೀರ್ಮಾನವನ್ನು ಮಾಡಿದ್ದಾನೆ. ಮುಂದಿನ ಐದು ವರ್ಷ ಪ್ರಜಾಪ್ರಭುತ್ವ ಆಡಳಿತದಲ್ಲಿರುವಂತೆ ನಾವು ನೋಡಿಕೊಳ್ಳೋಣ. ಆ ಸರ್ಕಾರ, ಈ ಸರ್ಕಾರ, ಯಾವುದೋ ಒಂದು ಸರ್ಕಾರ ಬರುತ್ತೆ. ಬರಲಿ. ಆದರೆ, ಮುಂದಿನ ಐದು ವರ್ಷಗಳ ಕಾಲ ‘ಪ್ರಜಾಪ್ರಭುತ್ವ’ ಆಡಳಿತದಲ್ಲಿರುವಂತೆ ನೋಡಿಕೊಳ್ಳುವುದು ಸಾಮಾನ್ಯರಾದ ನಮ್ಮ ಜವಾಬ್ದಾರಿ.


Wednesday, January 25, 2023

'ದಿ ಮೋದಿ ಕ್ವೆಶ್ಚನ್': ಬಿಬಿಸಿಯ ಹಳೇ ರಾಗ, ಹೊಸ ಹಾಡು!


ಪಾಶ್ಚಿಮಾತ್ಯ ಮಾಧ್ಯಮಗಳಿಗೆ ಭಾರತವನ್ನು ಕಂಡರೆ ಅದೇನೋ ಮತ್ಸರ. ಭಾರತವನ್ನು ನೆಗೆಟಿವ್ ಲೈಟ್ ನಲ್ಲಿ ತೋರಿಸಲು ಅವು ತುದಿಗಾಲಲ್ಲಿ ನಿಂತಿರುತ್ತವೆ. ಬಹುಶಃ ಮೊದಲೆಲ್ಲ ಅಲ್ಲಿಯ ಜನ ಅವರು ತೋರಿಸಿದ್ದನ್ನೆಲ್ಲ ನಂಬುತ್ತಿದ್ದರೇನೋ. ಈಗ ಬಹಳಷ್ಟು ಜನ ನಂಬಲಾರರು ಅಂತ ನನ್ನ ಊಹೆ. ಏಕೆಂದರೆ ಈಗ ಸಾಕಷ್ಟು international travel ಆಗುವುದರಿಂದ, ಇಲ್ಲಿಯ ಸ್ಥಿತಿಗತಿಗಳನ್ನು ಸ್ವತಃ ನೋಡಿರುವ ಅನೇಕ ಜನ ಅಲ್ಲಿರುತ್ತಾರೆ ಹಾಗೂ ಸೋಷಿಯಲ್ ಮೀಡಿಯ ಈಗಿನ ಕಾಲದಲ್ಲಿ ಕೆಲವು ಸುಳ್ಳುಗಳು ತುಂಬಾ ದಿನ ಉಳಿಯದಂತೆ ನೋಡಿಕೊಳ್ಳುತ್ತಿವೆ. ಹಾಗೂ 2014ರ ಈಚೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸ್ಥರಗಳಲ್ಲಿ ಹೆಚ್ಚಿರುವ ಭಾರತದ ವರ್ಚಸ್ಸು, ಪಾಶ್ಚಾತ್ಯ ಮಾಧ್ಯಮಗಳು ಕಾಪಿಟ್ಟುಕೊಂಡು ಬಂದಿರು ನೆಗೆಟಿವ್ ಪ್ರೊಪೊಗಂಡಾಗೆ ಹಾನಿಯುಂಟುಮಾಡಿದೆ. ಸದ್ಗುರು ಮುಂತಾದ ಭಾರತೀಯ ಸಂತರೂ ಕೂಡ ಸೋಷಿಯಲ್ ಮಿಡಿಯಾ ಮೂಲಕ ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ, ಅದರ ಸಂಸ್ಕೃತಿ ಹಾಗೂ ನೈಪುಣ್ಯವನ್ನು ಸಾರುತ್ತಿರುವುದರಿಂದ, ಬಹಳ ದೊಡ್ದ ಸಂಖ್ಯೆಯಲ್ಲಿ ಪಾಶ್ಚಿಮಾತ್ಯ ಯುವಜನಾಂಗ ಭಾರತೀಯ ಜ್ಞಾನಸುಧೆಗೆ ಮಾರುಹೋಗುತ್ತಿದೆ. ಆದರೂ ಈ ಮಾಧ್ಯಮಗಳು ಛಲಬಿಡದೆ ತಮ್ಮ ಪ್ರೊಪೊಗಂಡಾವನ್ನು ಮುಂದುವರಿಸುವುದು ನನಗೆ ಅಚ್ಚರಿ ತರುತ್ತದೆ.

ಈ ಪ್ರಯತ್ನದ ಮುಂದುವರಿದ ಭಾಗವಾಗಿ ಬಿಬಿಸಿ ‘The Modi Question’ ಎಂಬ ಡಾಕ್ಯುಮೆಂಟರಿಯೊಂದಿಗೆ ಹಳೇ ರಾಗವನ್ನು ಹೊಸದಾಗಿ ಹಾಡಲು ಬಂದಿದೆ. 20 ವರ್ಷ ಹಳೆಯ ವಿವಾದವನ್ನು ಹೊಸ ವಿಷಯದಂತೆ, ಏನೋ ಸಾಧಿಸಿದವರಂತೆ ಹೊಸದಾಗಿ ಕಥೆ ಹೇಳಲು ಬಿಬಿಸಿ ಶುರುವಿಟ್ಟುಕೊಂಡಿದೆ.

ಆ ಡಾಕ್ಯುಮೆಂಟರಿ ನೋಡುವ ‘ಭಾಗ್ಯ’ ನನಗೆ ಒದಗಿಬಂದಿಲ್ಲ, ಏಕೆಂದರೆ ಸರ್ಕಾರ ಅದನ್ನು ಬ್ಯಾನ್ ಮಾಡಿದೆ. ಈ ಪಾಶ್ಚಿಮಾತ್ಯ ಮಾಧ್ಯಮಗಳ ಹಿನ್ನಲೆ ಹಾಗೂ ಮನಸ್ಥಿತಿ ನನಗೆ ಗೊತ್ತಿರುವುದರಿಂದ, ಈ ಹೊಸ ಡಾಕ್ಯುಮೆಂಟರಿಯಲ್ಲಿ ಏನೋ ಹೊಸದಿರುತ್ತೆ ಅದನ್ನು ನೋಡಬೇಕು ಎಂಬ ಕುತೂಹಲ ನನಗೂ ಇಲ್ಲ. In fact, ಅದನ್ನು ನೋಡಿ ಸಮಯ ವ್ಯರ್ಥ ಮಾಡಿಕೊಳ್ಳಲು ನನಗೆ ಇಷ್ಟವೂ ಇಲ್ಲ. ಆದರೆ ಪೂರ್ವಗ್ರಹ ಪೀಡಿತ ಡಾಕ್ಯುಮೆಂಟರಿಯೊಂದು ಅಷ್ಟೊಂದು ಸುದ್ದಿ ಮಾಡುತ್ತಿರುವಾಗ, ಆ ಪ್ರಯತ್ನವನ್ನು ಖಂಡಿಸದೇ, ಹೊಸಕಿಹಾಕದೆ ಹಾಗೇ ಇದ್ದರೆ, ಅದೇಕೋ ನಮಗೇ ನಾವು ಮೋಸಮಾಡಿಕೊಂಡಹಾಗೆ.

ಆ ಕಾರಣಕ್ಕಾಗಿ, Times Now ಕಲೆಹಾಕಿರುವ, ಡಾಕ್ಯುಮೆಂಟರಿಯಲ್ಲಿ ತೋರಿಸಿರುವ 5 ಮಿಥ್ಯೆಗಳನ್ನು ನಿಮ್ಮ ಮುಂದಿಡುತ್ತೇನೆ.

ಗೋಧ್ರಾ ರೈಲಿನಲ್ಲಿ ಪೆಟ್ರೋಲ್ ಸುರಿದು ನಡೆಸಿದ ಹತ್ಯಾಕಾಂಡ ಒಂದು ಸಂಚು ಅಥವಾ conspiracy ಅಲ್ಲ ಅನ್ನುವ ರೀತಿಯ ವಾದಗಳನ್ನು ಮಂಡಿಸಲಾಗಿದೆ.

ಸತ್ಯ: 2011ರಲ್ಲಿ ನ್ಯಾಯಾಲಯ ಅದೊಂದು pre-planned ಸಂಚಾಗಿತ್ತು ಎಂದು ತೀರ್ಪು ನೀಡಿ 31 ಜನರಿಗೆ ಶಿಕ್ಷೆ ವಿಧಿಸಿದೆ.

ಗೋಧ್ರಾ ಹಿಂಸಾಚಾರವನ್ನು ತನಿಖೆ ಮಾಡಲು ರೂಪಿಸಿದ್ದ ವಿಶೇಷ ತನಿಖಾ ತಂಡ - S.I.T ಕೇವಲ ಮೇಲಿಂದ ಮೇಲಷ್ಟೇ ನಾಮ್ಕಾವಸ್ಥೆ ತನಿಖೆ ನಡೆಸಿದೆ ಎಂದು ಡಾಕ್ಯುಮೆಂಟರಿ ಹೇಳಿದೆ.

ಸತ್ಯ: S.I.T ಯನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ಸ್ವತಃ ನೇಮಿಸಿತ್ತು ಹಾಗೂ ತಂಡ ನಡೆಸಿದ ತನಿಖೆಯ ಆಳವನ್ನು ಸ್ವತಃ ಸುಪ್ರೀಂ ಕೋರ್ಟ್ ಶ್ಲಾಘಿಸಿತ್ತು.

ಮೇಲಿನ ಎರಡೂ ಸಂಗತಿಗಳು ಬಿಬಿಸಿಗೆ ಭಾರತೀಯ ಕೋರ್ಟ್ ಗಳ ಮೇಲೆ ಗೌರವ ಇಲ್ಲ ಎಂಬುದನ್ನು ಸಾಬೀತುಪಡಿಸುತ್ತವೆ. ಇಂತಹ ಡಾಕ್ಯುಮೆಂಟರಿ ಹಾಗೂ ಸಂಸ್ಥೆಯನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ಸಿಗರು ಎಂಥವರು ಎಂಬುದನ್ನು ನಾವು ಈ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕು.

ಎಹ್ಸಾನ್ ಜಫ್ರಿ (ಕಾಂಗ್ರೆಸ್ ಮಾಜಿ ಸಂಸದ) ಹತ್ಯೆಯಾಗುವ ಮುನ್ನ ಮೋದಿಗೆ ಕರೆ ಮಾಡಿರುವ ಕುರಿತು ಡಾಕ್ಯುಮೆಂಟರಿ ಹೇಳುತ್ತದೆ.

ಎಹ್ಸಾನ್ ಜಫ್ರಿ ಅಂದು ಗುಜರಾತಿನ ಮುಖ್ಯಮಂತ್ರಿಗೆ ಕರೆಮಾಡಿದ್ದ ಕಾಲ್ ರೆಕಾರ್ಡ್ಸ್ ಇಲ್ಲ ಎಂದು ಎಸ್ಐಟಿ ತನ್ನ ತನಿಖಾವರದಿಯಲ್ಲಿ ಉಲ್ಲೇಖಿಸಿದೆ. ಎಸ್ಐಟಿ ಗೇ ಸಿಗದ ದಾಖಲೆ, ಬಿಬಿಸಿ ಸಿಕ್ಕಿದ್ದು ಎಲ್ಲಿಂದ ಎಂಬುದು ಮಾತ್ರ ನಮ್ಮ ಲಿಬರಲ್ ಗಳೇ ಉತ್ತರಿಸಬೇಕಾದ ಪ್ರಶ್ನೆ.

ತೀಸ್ತಾ ಸೆತಲ್ವಾಡ್ ‘ಮಾನವ ಹಕ್ಕುಗಳಿಗಾಗಿ’ ಹೋರಾಟ ಮಾಡುತ್ತಿರುವವರು ಎಂದು ತೋರಿಸಲಾಗಿದೆ.

ಸತ್ಯ: ಈಕೆ ‘ಮಾನವ ಹಕ್ಕು’ಗಳಿಗೆ ಹೋರಾಟ ಮಾಡುವುದು ಅಷ್ಟರಲ್ಲಿರಲಿ, ಈಕೆ ಮೋದಿಗೆ ಗಲ್ಲುಶಿಕ್ಷೆ ಆಗಬೇಕೆಂದು ಸಂಚು ರೂಪಿಸಿದ್ದರು ಎಂದು ಎಸ್ಐಟಿ ತನ್ನ ತನಿಖಾವರದಿಯಲ್ಲಿ ಹೇಳಿದೆ. 

ತೀಸ್ತಾ ಸೆತಲ್ವಾಡ್ ಸೆಲೆಕ್ಟಿವ್ ಹೋರಾಟಗಳಿಗೆ, so called ಎಡಪಂಥೀಯ ಧೋರಣೆಗಳಿಗೆ (ಕು)ಖ್ಯಾತವಾದ ಹೆಸರು. ಅಂಥವರನ್ನೇ ಹುಡುಕಿ ಹೆಕ್ಕಿ ಇಂಟರ್ವ್ಯೂ ಮಾಡಿ ತಾನೇನೋ ಊರಿಗಿಲ್ಲದ ಡಾಕ್ಯುಮೆಂಟರಿ ಮಾಡಿದ್ದೇನೆಂದು ಬಿಬಿಸಿ ಬೀಗುತ್ತಿರುವುದು ಹಾಸ್ಯಾಸ್ಪದವಷ್ಟೇ.

ಮೋದಿ ವಿರುದ್ಧ ಅನೇಕ ಬಾರಿ ಮಾತಾಡಿದ ಖ್ಯಾತಿ ಹೊಂದಿರುವ ಸಂಜೀವ್ ಭಟ್ ಎಂಬ ಮಾಜಿ ವಿವಾದಿತ ಐಪಿಎಸ್ ಅಧಿಕಾರಿ, ತಾನು ಗೋಧ್ರಾ ರೈಲು ಹತ್ಯಾಕಾಂಡದ ನಂತರ ಮುಖ್ಯಮಂತ್ರಿಗಳ ಗೃಹದಲ್ಲಿ ನಡೆದ ಸಭೆಯಲ್ಲಿ ಇದ್ದೆನೆಂದೂ, ಅಲ್ಲಿ ಮೋದಿ “ಹಿಂದೂಗಳಿಗೆ ಅವರ ಆಕ್ರೋಶವನ್ನು ಹೊರಹಾಕಲು ಬಿಡಿ” ಎಂದು ಹೇಳಿದರೆಂದೂ ಹೇಳುತ್ತಾನೆ.

ಸತ್ಯ: ಈತ ಅಲ್ಲಿ ಇದ್ದುದ್ದಕ್ಕೆ ಯಾವ ದಾಖಲೆಯೂ ಇಲ್ಲವೆಂದೂ, ಈತ ಸುಳ್ಳುಹೇಳುತ್ತಿದ್ದಾನೆಂದು ಎಸ್ಐಟಿ ಕೋರ್ಟ್ ಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದೆ. ಹಾಗೆಯೇ ಈತ ದಾಖಲೆಯೊಂದನ್ನು ಈ ಕಾರಣಕಾಗಿ ಫೋರ್ಜ್(ನಕಲಿ) ಮಾಡಿದ ಸಂಗತಿಯನ್ನೂ ಉಲ್ಲೇಖಿಸಲಾಗಿದೆ.

ಬೆಳಿಗ್ಗೆ ಮೋದಿ ತುಂಬಾ ಹಿಂದೆ ಬಿಬಿಸಿಗೆ ಕೊಟ್ಟ ಸಂದರ್ಶನದ ತುಣುಕೊಂದನ್ನು ನೋಡುತ್ತಿದ್ದೆ. ಅದರಲ್ಲಿ ಪ್ರಶ್ನೆ ಕೇಳುವಾಕೆ ಧಿಮಾಕಿನಿಂದ ಮಾತನಾಡುತ್ತಾ ಕೊನೆಗೊಮ್ಮೆ ‘ಮಾನವ ಹಕ್ಕು’ಗಳ ಕುರಿತು ಏನೋ ತೆಗೆದಾಗ, ಮೋದಿ ತಕ್ಷಣ ‘You Britishers don’t tell us about the human rights. We know human rights” ಎಂದಿದ್ದರು. ಶತಮಾನಗಳ ಕಾಲ ಅರ್ಧ ಪ್ರಪಂಚದ ಜೀವಹಿಂಡಿದ ಬ್ರಿಟಿಷರು, ಜಲಿಯನ್ ವಾಲಾಭಾಗ್ ನಂತಹ ಕೃತ್ಯಗೈದಿದ್ದ ಬ್ರಿಟೀಷರು ಉಳಿದವರಿಗೆ ಮಾನವಹಕ್ಕುಗಳ ಬಗ್ಗೆ ಮಾತನಾಡುವಾಗ ಸ್ವಲ್ಪ ನೋಡಿಕೊಳ್ಳಬೇಕು. 1943ರಲ್ಲಿ ಬಂಗಾಳವನ್ನು ಕಾಡಿದ ಮಹಾಕ್ಷಾಮ ಸುಮಾರು 37 ಲಕ್ಷ ಜನರನ್ನು ಬಲಿಪಡೆಯಿತು. ಈ ಕ್ಷಾಮ ಮಳೆಯ ಅಭಾವದಿಂದ ಆದದ್ದಲ್ಲ! ಬಂಗಾಳ ಬರಬೇಕಿದ್ದ ಆಹಾರ ಪದಾರ್ಥಗಳನ್ನು ಎರಡನೇ ವಿಶ್ವಯುದ್ಧದಲ್ಲಿದ್ದ ಬ್ರಿಟಿಷ್ ಪಡೆಗಳಿಗೆ ಕಳಿಸಲಾಗುತ್ತಿತ್ತು. ಇದು ಅಂದಿನ ಬ್ರಿಟನ್ ಪ್ರಧಾನಿ ಚರ್ಚಿಲ್ ನ ನಿರ್ಧಾರ. ಲಕ್ಷಾಂತರ ಜನರು ಬಂಗಾಳದಲ್ಲಿ ಆಹಾರವಿಲ್ಲದೇ ಸಾಯುತ್ತಿದ್ದಾಗ ಚರ್ಚಿಲ್ ಹೇಳಿದ್ದೇನು ಗೊತ್ತಾ? “Anyway, they will breed like rabbits” ಎಂದರೆ “ಹೇಗಿದ್ದರೂ ಭಾರತೀಯರು ಇಲಿಗಳಂತೆ ಮಕ್ಕಳಿಗೆ ಜನ್ಮನೀಡುತ್ತಾರೆ” ಎಂದು ಹೇಳಿದ್ದ ರಾಕ್ಷಸ ವಿನ್ಸ್ಟನ್ ಚರ್ಚಿಲ್! ಅವನನ್ನು ಇಂದಿಗೂ ಹೀರೋನಂತೆ ಬಿಂಬಿಸುವ ಬ್ರಿಟೀಷರು ನಮಗೆ ಮಾನವ ಹಕ್ಕುಗಳನ್ನು ಹೇಳಿಕೊಡುವರೇ?

ಯಾರು ಏನೇ ಹೇಳಿದರೂ ಭಾರತಕ್ಕೆ ಇಂದು ಅಂತರಾಷ್ಟ್ರೀಯ ವೇದಿಕೆಯಲ್ಲಿ ಒಂದು ಬೆಲೆಯಿದೆ. ಮೋದಿ ನಿಂತಿದ್ದರೆ, ಬೈಡೆನ್ ಕೂಡ ಅವರೇ ಬಂದು ಮಾತನಾಡಿಸಿಕೊಂಡು ಹೋಗುತ್ತಾರೆ. ಭಾರತ ತಾನೇ ವ್ಯಾಕ್ಸಿನ್ ತಯಾರಿಸಿದ್ದು(ಒಂದಲ್ಲ ಎರಡು!), ಅನೇಕ ದೇಶಗಳಿಗೆ ಹಂಚಿದ್ದು, ಇಸ್ರೋದ ಸಾಧನೆಗಳು, ಕೇಂದ್ರ ಸರ್ಕಾರದ ದಿಟ್ಟ ನಿಲುವುಗಳು - ಹೀಗೆ, ಅನೇಕ ವಿಚಾರಗಳು ಇಂದು ಭಾರತದ ಸ್ಥಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೇರೆಯದೇ ಸ್ಥಾನಕ್ಕೆ ಕರೆದೊಯ್ದಿದೆ. ಬದಲಾದ ವಿದೇಶ ನೀತಿ ಕೂಡ ಇದಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಆದ್ದರಿಂದ ನಮ್ಮೊಳಗೇ ಇರುವವರು ನಮ್ಮ ಕಾಲೆಳೆಯದಂತೆ ನೋಡಿಕೊಳ್ಳಬೇಕಾಗಿರುವುದು ನಮ್ಮ ಜವಾಬ್ದಾರಿ. ನಮ್ಮ ಸರ್ಕಾರಗಳ ತಪ್ಪುಗಳನ್ನು, ಅಸಡ್ದೆಗಳನ್ನು ನಾವು ಗಟ್ಟಿಕಂಠದಿಂದ ವಿರೋಧಿಸೋಣ. ಆದರೆ ಹೊರಗಿನವರು ಇಲ್ಲಿ ಬಂದು ಕಡ್ಡಿ ಅಲ್ಲಾಡಿಸುವುದು ಬೇಡ. ಸದ್ಯಕ್ಕೆ, ನಮ್ಮ ದೇಶದ ಉಸಾಬರಿಯನ್ನು ಹೇಗೆ ನೋಡಿಕೊಳ್ಳುವುದು ಎಂದು ನಮಗೆ ಗೊತ್ತು. 


ಮೊನ್ನೆ CEASEFIRE ಎಂದು ಟ್ರಂಪ್ ಟ್ವೀಟ್ ಮಾಡಿದಾಗ ನಂಬಲೇ ಆಗಿರಲಿಲ್ಲ… ಈ ಮನುಷ್ಯ ಸ್ವಲ್ಪ ಎಡವಟ್ಟು ಜಾಸ್ತಿ… ಏನೋ ಮಾಡಿದ್ದಾನೆ… ನಾವು ಒಪ್ಪಿರಲಿಕ್ಕಿಲ್ಲ ಅನ್ನಿಸಿತ್...