ಪಾಶ್ಚಿಮಾತ್ಯ ಮಾಧ್ಯಮಗಳಿಗೆ ಭಾರತವನ್ನು ಕಂಡರೆ ಅದೇನೋ ಮತ್ಸರ. ಭಾರತವನ್ನು ನೆಗೆಟಿವ್ ಲೈಟ್ ನಲ್ಲಿ ತೋರಿಸಲು ಅವು ತುದಿಗಾಲಲ್ಲಿ ನಿಂತಿರುತ್ತವೆ. ಬಹುಶಃ ಮೊದಲೆಲ್ಲ ಅಲ್ಲಿಯ ಜನ ಅವರು ತೋರಿಸಿದ್ದನ್ನೆಲ್ಲ ನಂಬುತ್ತಿದ್ದರೇನೋ. ಈಗ ಬಹಳಷ್ಟು ಜನ ನಂಬಲಾರರು ಅಂತ ನನ್ನ ಊಹೆ. ಏಕೆಂದರೆ ಈಗ ಸಾಕಷ್ಟು international travel ಆಗುವುದರಿಂದ, ಇಲ್ಲಿಯ ಸ್ಥಿತಿಗತಿಗಳನ್ನು ಸ್ವತಃ ನೋಡಿರುವ ಅನೇಕ ಜನ ಅಲ್ಲಿರುತ್ತಾರೆ ಹಾಗೂ ಸೋಷಿಯಲ್ ಮೀಡಿಯ ಈಗಿನ ಕಾಲದಲ್ಲಿ ಕೆಲವು ಸುಳ್ಳುಗಳು ತುಂಬಾ ದಿನ ಉಳಿಯದಂತೆ ನೋಡಿಕೊಳ್ಳುತ್ತಿವೆ. ಹಾಗೂ 2014ರ ಈಚೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸ್ಥರಗಳಲ್ಲಿ ಹೆಚ್ಚಿರುವ ಭಾರತದ ವರ್ಚಸ್ಸು, ಪಾಶ್ಚಾತ್ಯ ಮಾಧ್ಯಮಗಳು ಕಾಪಿಟ್ಟುಕೊಂಡು ಬಂದಿರು ನೆಗೆಟಿವ್ ಪ್ರೊಪೊಗಂಡಾಗೆ ಹಾನಿಯುಂಟುಮಾಡಿದೆ. ಸದ್ಗುರು ಮುಂತಾದ ಭಾರತೀಯ ಸಂತರೂ ಕೂಡ ಸೋಷಿಯಲ್ ಮಿಡಿಯಾ ಮೂಲಕ ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ, ಅದರ ಸಂಸ್ಕೃತಿ ಹಾಗೂ ನೈಪುಣ್ಯವನ್ನು ಸಾರುತ್ತಿರುವುದರಿಂದ, ಬಹಳ ದೊಡ್ದ ಸಂಖ್ಯೆಯಲ್ಲಿ ಪಾಶ್ಚಿಮಾತ್ಯ ಯುವಜನಾಂಗ ಭಾರತೀಯ ಜ್ಞಾನಸುಧೆಗೆ ಮಾರುಹೋಗುತ್ತಿದೆ. ಆದರೂ ಈ ಮಾಧ್ಯಮಗಳು ಛಲಬಿಡದೆ ತಮ್ಮ ಪ್ರೊಪೊಗಂಡಾವನ್ನು ಮುಂದುವರಿಸುವುದು ನನಗೆ ಅಚ್ಚರಿ ತರುತ್ತದೆ.
ಈ ಪ್ರಯತ್ನದ ಮುಂದುವರಿದ ಭಾಗವಾಗಿ ಬಿಬಿಸಿ ‘The Modi Question’ ಎಂಬ ಡಾಕ್ಯುಮೆಂಟರಿಯೊಂದಿಗೆ ಹಳೇ ರಾಗವನ್ನು ಹೊಸದಾಗಿ ಹಾಡಲು ಬಂದಿದೆ. 20 ವರ್ಷ ಹಳೆಯ ವಿವಾದವನ್ನು ಹೊಸ ವಿಷಯದಂತೆ, ಏನೋ ಸಾಧಿಸಿದವರಂತೆ ಹೊಸದಾಗಿ ಕಥೆ ಹೇಳಲು ಬಿಬಿಸಿ ಶುರುವಿಟ್ಟುಕೊಂಡಿದೆ.
ಆ ಡಾಕ್ಯುಮೆಂಟರಿ ನೋಡುವ ‘ಭಾಗ್ಯ’ ನನಗೆ ಒದಗಿಬಂದಿಲ್ಲ, ಏಕೆಂದರೆ ಸರ್ಕಾರ ಅದನ್ನು ಬ್ಯಾನ್ ಮಾಡಿದೆ. ಈ ಪಾಶ್ಚಿಮಾತ್ಯ ಮಾಧ್ಯಮಗಳ ಹಿನ್ನಲೆ ಹಾಗೂ ಮನಸ್ಥಿತಿ ನನಗೆ ಗೊತ್ತಿರುವುದರಿಂದ, ಈ ಹೊಸ ಡಾಕ್ಯುಮೆಂಟರಿಯಲ್ಲಿ ಏನೋ ಹೊಸದಿರುತ್ತೆ ಅದನ್ನು ನೋಡಬೇಕು ಎಂಬ ಕುತೂಹಲ ನನಗೂ ಇಲ್ಲ. In fact, ಅದನ್ನು ನೋಡಿ ಸಮಯ ವ್ಯರ್ಥ ಮಾಡಿಕೊಳ್ಳಲು ನನಗೆ ಇಷ್ಟವೂ ಇಲ್ಲ. ಆದರೆ ಪೂರ್ವಗ್ರಹ ಪೀಡಿತ ಡಾಕ್ಯುಮೆಂಟರಿಯೊಂದು ಅಷ್ಟೊಂದು ಸುದ್ದಿ ಮಾಡುತ್ತಿರುವಾಗ, ಆ ಪ್ರಯತ್ನವನ್ನು ಖಂಡಿಸದೇ, ಹೊಸಕಿಹಾಕದೆ ಹಾಗೇ ಇದ್ದರೆ, ಅದೇಕೋ ನಮಗೇ ನಾವು ಮೋಸಮಾಡಿಕೊಂಡಹಾಗೆ.
ಆ ಕಾರಣಕ್ಕಾಗಿ, Times Now ಕಲೆಹಾಕಿರುವ, ಡಾಕ್ಯುಮೆಂಟರಿಯಲ್ಲಿ ತೋರಿಸಿರುವ 5 ಮಿಥ್ಯೆಗಳನ್ನು ನಿಮ್ಮ ಮುಂದಿಡುತ್ತೇನೆ.
ಗೋಧ್ರಾ ರೈಲಿನಲ್ಲಿ ಪೆಟ್ರೋಲ್ ಸುರಿದು ನಡೆಸಿದ ಹತ್ಯಾಕಾಂಡ ಒಂದು ಸಂಚು ಅಥವಾ conspiracy ಅಲ್ಲ ಅನ್ನುವ ರೀತಿಯ ವಾದಗಳನ್ನು ಮಂಡಿಸಲಾಗಿದೆ.
ಸತ್ಯ: 2011ರಲ್ಲಿ ನ್ಯಾಯಾಲಯ ಅದೊಂದು pre-planned ಸಂಚಾಗಿತ್ತು ಎಂದು ತೀರ್ಪು ನೀಡಿ 31 ಜನರಿಗೆ ಶಿಕ್ಷೆ ವಿಧಿಸಿದೆ.
ಗೋಧ್ರಾ ಹಿಂಸಾಚಾರವನ್ನು ತನಿಖೆ ಮಾಡಲು ರೂಪಿಸಿದ್ದ ವಿಶೇಷ ತನಿಖಾ ತಂಡ - S.I.T ಕೇವಲ ಮೇಲಿಂದ ಮೇಲಷ್ಟೇ ನಾಮ್ಕಾವಸ್ಥೆ ತನಿಖೆ ನಡೆಸಿದೆ ಎಂದು ಡಾಕ್ಯುಮೆಂಟರಿ ಹೇಳಿದೆ.
ಸತ್ಯ: S.I.T ಯನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ಸ್ವತಃ ನೇಮಿಸಿತ್ತು ಹಾಗೂ ತಂಡ ನಡೆಸಿದ ತನಿಖೆಯ ಆಳವನ್ನು ಸ್ವತಃ ಸುಪ್ರೀಂ ಕೋರ್ಟ್ ಶ್ಲಾಘಿಸಿತ್ತು.
ಮೇಲಿನ ಎರಡೂ ಸಂಗತಿಗಳು ಬಿಬಿಸಿಗೆ ಭಾರತೀಯ ಕೋರ್ಟ್ ಗಳ ಮೇಲೆ ಗೌರವ ಇಲ್ಲ ಎಂಬುದನ್ನು ಸಾಬೀತುಪಡಿಸುತ್ತವೆ. ಇಂತಹ ಡಾಕ್ಯುಮೆಂಟರಿ ಹಾಗೂ ಸಂಸ್ಥೆಯನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ಸಿಗರು ಎಂಥವರು ಎಂಬುದನ್ನು ನಾವು ಈ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕು.
ಎಹ್ಸಾನ್ ಜಫ್ರಿ (ಕಾಂಗ್ರೆಸ್ ಮಾಜಿ ಸಂಸದ) ಹತ್ಯೆಯಾಗುವ ಮುನ್ನ ಮೋದಿಗೆ ಕರೆ ಮಾಡಿರುವ ಕುರಿತು ಡಾಕ್ಯುಮೆಂಟರಿ ಹೇಳುತ್ತದೆ.
ಎಹ್ಸಾನ್ ಜಫ್ರಿ ಅಂದು ಗುಜರಾತಿನ ಮುಖ್ಯಮಂತ್ರಿಗೆ ಕರೆಮಾಡಿದ್ದ ಕಾಲ್ ರೆಕಾರ್ಡ್ಸ್ ಇಲ್ಲ ಎಂದು ಎಸ್ಐಟಿ ತನ್ನ ತನಿಖಾವರದಿಯಲ್ಲಿ ಉಲ್ಲೇಖಿಸಿದೆ. ಎಸ್ಐಟಿ ಗೇ ಸಿಗದ ದಾಖಲೆ, ಬಿಬಿಸಿ ಸಿಕ್ಕಿದ್ದು ಎಲ್ಲಿಂದ ಎಂಬುದು ಮಾತ್ರ ನಮ್ಮ ಲಿಬರಲ್ ಗಳೇ ಉತ್ತರಿಸಬೇಕಾದ ಪ್ರಶ್ನೆ.
ತೀಸ್ತಾ ಸೆತಲ್ವಾಡ್ ‘ಮಾನವ ಹಕ್ಕುಗಳಿಗಾಗಿ’ ಹೋರಾಟ ಮಾಡುತ್ತಿರುವವರು ಎಂದು ತೋರಿಸಲಾಗಿದೆ.
ಸತ್ಯ: ಈಕೆ ‘ಮಾನವ ಹಕ್ಕು’ಗಳಿಗೆ ಹೋರಾಟ ಮಾಡುವುದು ಅಷ್ಟರಲ್ಲಿರಲಿ, ಈಕೆ ಮೋದಿಗೆ ಗಲ್ಲುಶಿಕ್ಷೆ ಆಗಬೇಕೆಂದು ಸಂಚು ರೂಪಿಸಿದ್ದರು ಎಂದು ಎಸ್ಐಟಿ ತನ್ನ ತನಿಖಾವರದಿಯಲ್ಲಿ ಹೇಳಿದೆ.
ತೀಸ್ತಾ ಸೆತಲ್ವಾಡ್ ಸೆಲೆಕ್ಟಿವ್ ಹೋರಾಟಗಳಿಗೆ, so called ಎಡಪಂಥೀಯ ಧೋರಣೆಗಳಿಗೆ (ಕು)ಖ್ಯಾತವಾದ ಹೆಸರು. ಅಂಥವರನ್ನೇ ಹುಡುಕಿ ಹೆಕ್ಕಿ ಇಂಟರ್ವ್ಯೂ ಮಾಡಿ ತಾನೇನೋ ಊರಿಗಿಲ್ಲದ ಡಾಕ್ಯುಮೆಂಟರಿ ಮಾಡಿದ್ದೇನೆಂದು ಬಿಬಿಸಿ ಬೀಗುತ್ತಿರುವುದು ಹಾಸ್ಯಾಸ್ಪದವಷ್ಟೇ.
ಮೋದಿ ವಿರುದ್ಧ ಅನೇಕ ಬಾರಿ ಮಾತಾಡಿದ ಖ್ಯಾತಿ ಹೊಂದಿರುವ ಸಂಜೀವ್ ಭಟ್ ಎಂಬ ಮಾಜಿ ವಿವಾದಿತ ಐಪಿಎಸ್ ಅಧಿಕಾರಿ, ತಾನು ಗೋಧ್ರಾ ರೈಲು ಹತ್ಯಾಕಾಂಡದ ನಂತರ ಮುಖ್ಯಮಂತ್ರಿಗಳ ಗೃಹದಲ್ಲಿ ನಡೆದ ಸಭೆಯಲ್ಲಿ ಇದ್ದೆನೆಂದೂ, ಅಲ್ಲಿ ಮೋದಿ “ಹಿಂದೂಗಳಿಗೆ ಅವರ ಆಕ್ರೋಶವನ್ನು ಹೊರಹಾಕಲು ಬಿಡಿ” ಎಂದು ಹೇಳಿದರೆಂದೂ ಹೇಳುತ್ತಾನೆ.
ಸತ್ಯ: ಈತ ಅಲ್ಲಿ ಇದ್ದುದ್ದಕ್ಕೆ ಯಾವ ದಾಖಲೆಯೂ ಇಲ್ಲವೆಂದೂ, ಈತ ಸುಳ್ಳುಹೇಳುತ್ತಿದ್ದಾನೆಂದು ಎಸ್ಐಟಿ ಕೋರ್ಟ್ ಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದೆ. ಹಾಗೆಯೇ ಈತ ದಾಖಲೆಯೊಂದನ್ನು ಈ ಕಾರಣಕಾಗಿ ಫೋರ್ಜ್(ನಕಲಿ) ಮಾಡಿದ ಸಂಗತಿಯನ್ನೂ ಉಲ್ಲೇಖಿಸಲಾಗಿದೆ.
ಬೆಳಿಗ್ಗೆ ಮೋದಿ ತುಂಬಾ ಹಿಂದೆ ಬಿಬಿಸಿಗೆ ಕೊಟ್ಟ ಸಂದರ್ಶನದ ತುಣುಕೊಂದನ್ನು ನೋಡುತ್ತಿದ್ದೆ. ಅದರಲ್ಲಿ ಪ್ರಶ್ನೆ ಕೇಳುವಾಕೆ ಧಿಮಾಕಿನಿಂದ ಮಾತನಾಡುತ್ತಾ ಕೊನೆಗೊಮ್ಮೆ ‘ಮಾನವ ಹಕ್ಕು’ಗಳ ಕುರಿತು ಏನೋ ತೆಗೆದಾಗ, ಮೋದಿ ತಕ್ಷಣ ‘You Britishers don’t tell us about the human rights. We know human rights” ಎಂದಿದ್ದರು. ಶತಮಾನಗಳ ಕಾಲ ಅರ್ಧ ಪ್ರಪಂಚದ ಜೀವಹಿಂಡಿದ ಬ್ರಿಟಿಷರು, ಜಲಿಯನ್ ವಾಲಾಭಾಗ್ ನಂತಹ ಕೃತ್ಯಗೈದಿದ್ದ ಬ್ರಿಟೀಷರು ಉಳಿದವರಿಗೆ ಮಾನವಹಕ್ಕುಗಳ ಬಗ್ಗೆ ಮಾತನಾಡುವಾಗ ಸ್ವಲ್ಪ ನೋಡಿಕೊಳ್ಳಬೇಕು. 1943ರಲ್ಲಿ ಬಂಗಾಳವನ್ನು ಕಾಡಿದ ಮಹಾಕ್ಷಾಮ ಸುಮಾರು 37 ಲಕ್ಷ ಜನರನ್ನು ಬಲಿಪಡೆಯಿತು. ಈ ಕ್ಷಾಮ ಮಳೆಯ ಅಭಾವದಿಂದ ಆದದ್ದಲ್ಲ! ಬಂಗಾಳ ಬರಬೇಕಿದ್ದ ಆಹಾರ ಪದಾರ್ಥಗಳನ್ನು ಎರಡನೇ ವಿಶ್ವಯುದ್ಧದಲ್ಲಿದ್ದ ಬ್ರಿಟಿಷ್ ಪಡೆಗಳಿಗೆ ಕಳಿಸಲಾಗುತ್ತಿತ್ತು. ಇದು ಅಂದಿನ ಬ್ರಿಟನ್ ಪ್ರಧಾನಿ ಚರ್ಚಿಲ್ ನ ನಿರ್ಧಾರ. ಲಕ್ಷಾಂತರ ಜನರು ಬಂಗಾಳದಲ್ಲಿ ಆಹಾರವಿಲ್ಲದೇ ಸಾಯುತ್ತಿದ್ದಾಗ ಚರ್ಚಿಲ್ ಹೇಳಿದ್ದೇನು ಗೊತ್ತಾ? “Anyway, they will breed like rabbits” ಎಂದರೆ “ಹೇಗಿದ್ದರೂ ಭಾರತೀಯರು ಇಲಿಗಳಂತೆ ಮಕ್ಕಳಿಗೆ ಜನ್ಮನೀಡುತ್ತಾರೆ” ಎಂದು ಹೇಳಿದ್ದ ರಾಕ್ಷಸ ವಿನ್ಸ್ಟನ್ ಚರ್ಚಿಲ್! ಅವನನ್ನು ಇಂದಿಗೂ ಹೀರೋನಂತೆ ಬಿಂಬಿಸುವ ಬ್ರಿಟೀಷರು ನಮಗೆ ಮಾನವ ಹಕ್ಕುಗಳನ್ನು ಹೇಳಿಕೊಡುವರೇ?
ಯಾರು ಏನೇ ಹೇಳಿದರೂ ಭಾರತಕ್ಕೆ ಇಂದು ಅಂತರಾಷ್ಟ್ರೀಯ ವೇದಿಕೆಯಲ್ಲಿ ಒಂದು ಬೆಲೆಯಿದೆ. ಮೋದಿ ನಿಂತಿದ್ದರೆ, ಬೈಡೆನ್ ಕೂಡ ಅವರೇ ಬಂದು ಮಾತನಾಡಿಸಿಕೊಂಡು ಹೋಗುತ್ತಾರೆ. ಭಾರತ ತಾನೇ ವ್ಯಾಕ್ಸಿನ್ ತಯಾರಿಸಿದ್ದು(ಒಂದಲ್ಲ ಎರಡು!), ಅನೇಕ ದೇಶಗಳಿಗೆ ಹಂಚಿದ್ದು, ಇಸ್ರೋದ ಸಾಧನೆಗಳು, ಕೇಂದ್ರ ಸರ್ಕಾರದ ದಿಟ್ಟ ನಿಲುವುಗಳು - ಹೀಗೆ, ಅನೇಕ ವಿಚಾರಗಳು ಇಂದು ಭಾರತದ ಸ್ಥಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೇರೆಯದೇ ಸ್ಥಾನಕ್ಕೆ ಕರೆದೊಯ್ದಿದೆ. ಬದಲಾದ ವಿದೇಶ ನೀತಿ ಕೂಡ ಇದಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಆದ್ದರಿಂದ ನಮ್ಮೊಳಗೇ ಇರುವವರು ನಮ್ಮ ಕಾಲೆಳೆಯದಂತೆ ನೋಡಿಕೊಳ್ಳಬೇಕಾಗಿರುವುದು ನಮ್ಮ ಜವಾಬ್ದಾರಿ. ನಮ್ಮ ಸರ್ಕಾರಗಳ ತಪ್ಪುಗಳನ್ನು, ಅಸಡ್ದೆಗಳನ್ನು ನಾವು ಗಟ್ಟಿಕಂಠದಿಂದ ವಿರೋಧಿಸೋಣ. ಆದರೆ ಹೊರಗಿನವರು ಇಲ್ಲಿ ಬಂದು ಕಡ್ಡಿ ಅಲ್ಲಾಡಿಸುವುದು ಬೇಡ. ಸದ್ಯಕ್ಕೆ, ನಮ್ಮ ದೇಶದ ಉಸಾಬರಿಯನ್ನು ಹೇಗೆ ನೋಡಿಕೊಳ್ಳುವುದು ಎಂದು ನಮಗೆ ಗೊತ್ತು.

No comments:
Post a Comment