Monday, November 2, 2020

‘ದೇವಿ’ ಕೇವಲ ಒಂದು ನಂಬಿಕೆ ಅಷ್ಟೇ ಅಲ್ಲ!



ದೇವಿ ಆರಾಧನೆ - ಇದು ಭಾರತದಲ್ಲಿ ಮಾತ್ರ ಇನ್ನೂ ಜೀವಂತವಿರುವ ಪರಂಪರೆ.

ಭಾರತದ ಮೂಲೆಮೂಲೆಗಳಲ್ಲಿ, ಪ್ರತೀ ಹಳ್ಳಿಯಲ್ಲಿ, ಅದೂ ದಕ್ಷಿಣ ಭಾರತದಲ್ಲಿ, ದೇವಿ ಗುಡಿಗಳು, ಆರಾಧನೆಗಳು ಕಾಣಸಿಗುತ್ತವೆ. ಸ್ತ್ರೀತತ್ವದ ಅಭೂತಪೂರ್ವ ಮಹತ್ವವನ್ನು ಹಾಗೂ ಅವಶ್ಯಕತೆಯನ್ನು ಅರಿತ ಪ್ರಪ್ರಥಮ ಸಂಸ್ಕೃತಿಗಳಲ್ಲಿ ಒಂದು.

ಇದು ಕೇವಲ ನಂಬಿಕೆಯೇ? ಒಂದಷ್ಟು ಜನ ಮೂಢವಾಗಿ ಪಾಲಿಸಿಕೊಂಡುಬಂದಿರುವ ಒಂದು idea ಅಷ್ಟೇನಾ? ಖಂಡಿತ ಅಲ್ಲ.

ದೇವಿ ಗುಡಿಗಳು, ಅತ್ಯಂತ ಸೂಕ್ಕ್ಷ್ಮರೀತಿಯಲ್ಲಿ ಪ್ರತಿಷ್ಠೆಯಾಗಿರುತ್ತಿದ್ದವು. ಈ ಹಳ್ಳಿಯಲ್ಲಿ ಒಂದು ಗ್ರಾಮದೇವತೆಯಿದ್ದರೆ, ಪಕ್ಕದ ಹಳ್ಳಿಯಲ್ಲಿ ಇನ್ನೊಂದು. ಇದು ಕೇವಲ ಜನರ ಮನಸ್ಸಿನ ಒಂದು ನಂಬಿಕೆ ಅಷ್ಟೇ ಅಲ್ಲ. ಆ ಆ ಹಳ್ಳಿಯ ಅವಶ್ಯಕತೆಗೆ ತಕ್ಕಂತೆ, ದೇವಿಗುಡಿಗಳನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. This Nation knows the technology of God Making. ದೇವರನ್ನು ಪ್ರತಿಷ್ಠಾಪಿಸುವ ಸಂಪೂರ್ಣ ವಿಜ್ಞಾನ ಈ ದೇಶದ ಋಷಿ ಮುನಿಗಳಿಗೆ, ಯೋಗ ಪರಂಪರೆಗೆ ತಿಳಿದಿತ್ತು.

ಹೀಗೆ ಪ್ರತಿಷ್ಠಾಪಿಸಿದ ದೇವತೆ, ಅದ್ಭುತವಾಗಿ ಕೆಲಸ ಮಾಡುತ್ತಿತ್ತು ಕೂಡ. ಚಾಮುಂಡೇಶ್ವರಿ, ಮೈಸೂರಿನ ಸುರಕ್ಷತೆಗೆ ಸ್ಥಾಪಿಸಲ್ಪಟ್ಟ ದೇವತೆ ಎಂಬ ನಂಬಿಕೆ ರಾಜಮನೆತನದಲ್ಲಿ ಇತ್ತು. ಇಡೀ ಭಾರತ ಬ್ರಿಟೀಷರ ಕಪಿಮುಷ್ಟಿಯಲ್ಲಿ ನಡುಗಿದರೂ, ಪಕ್ಕದ ಶ್ರೀರಂಗಪಟ್ಟಣದಲ್ಲೇ ಟಿಪ್ಪುವಿದ್ದರೂ, ಮೈಸೂರನ್ನು ಮುಟ್ಟಲಾಗಲಿಲ್ಲ. ಗ್ರಾಮದೇವತೆ ಸಂಸ್ಥಾನವನ್ನು ಕಾಯ್ದು ಹರಸಿದ್ದಳು.

ಶ್ರೀನಿವಾಸ ರಾಮಾನುಜಮ್ ನಿಮಗೆಲ್ಲ ತಿಳಿದಿರಲೇಬೇಕು. ಭಾರತ ಏನು, ವಿಶ್ವವೇ ಕಂಡ ಅದ್ಭುತ ಗಣಿತಜ್ಞ. ರಾಮಾನುಜಮ್ ಬಿಡಿಸುತ್ತಿದ್ದ ಗಣಿತ ವ್ಯಾಖ್ಯಾನಗಳಿಗೆ ಇಡೀ ವಿಶ್ವವೇ ನಿಬ್ಬೆರಗಾಗಿ ಹೋಗಿತ್ತು. ಪಾಶ್ಚಾತ್ಯ ಗಣಿತಜ್ಞರಿಗೆ ಮನುಷ್ಯರಿಗೆ ಇಂಥದ್ದು ಸಾಧ್ಯ ಎಂದೇ ಗೊತ್ತಿರಲಿಲ್ಲ. ಥಿಯರಿಯೂ ರೆಡಿಯಿರದಿದ್ದ, ವಿಜ್ಞಾನ ಪ್ರಪಂಚದಲ್ಲಿ ಇನ್ನೂ conceptualization ಕೂಡ ಆಗದಿದ್ದ ‘ಬ್ಲಾಕ್ ಹೋಲ್’ ಮುಂತಾದ ವಿಷಯಗಳ ಗಣಿತ ಸಮೀಕರಣವನ್ನು, ರಾಮಾನುಜಮ್ 20ನೇ ಶತಮಾನದ ಆದಿಯಲ್ಲೇ ಬಿಚ್ಚಿಡಲು ಪ್ರಾರಂಭಿಸಿದ್ದರು. ಈತ ಗಣಿತವನ್ನು ಬರೆಯುತ್ತಿರಲಿಲ್ಲ, ಸುರಿಯುತ್ತಿದ್ದರು.

ಕುತೂಹಲ ತಡೆಯಲಾರದ ಗಣಿತ ವಿದ್ವಾಂಸರು, “ರಾಮನುಜಮ್, ಇದು ಹೇಗೆ ಸಾಧ್ಯ?” ಎಂದು ಕೇಳಿದಾಗ, ರಾಮಾನುಜಮ್ ಹೇಳಿದ್ದಿಷ್ಟು: My Devi Bleeds Mathematics!

“ನನ್ನ ದೇವಿ ಗಣಿತವನ್ನು ಹರಿಸುತ್ತಾಳೆ!”

ಇದು ಭಾರತದಲ್ಲಿ ಆಗಿಹೋದ ಅನೇಕ ಜ್ಞಾನಿಗಳ, ವಿಜ್ಞಾನಿಗಳ ವಿಷಯದಲ್ಲಿ ನಿಜ. ಈಗಿನವರಲ್ಲ, ಪುರಾತಕಾಲದ ವಿಜ್ಞಾನಿಗಳ ಕುರಿತು ಹೇಳಿದ್ದು.

ಈ ವಿಜ್ಞಾನ ನಮ್ಮಲ್ಲಿ ಕ್ಷೀಣಿಸುತ್ತಿರುವುದು, ನಾವು ಪಾಶ್ಚಾತ್ಯರಿಗಿಂತ ಪಾಶ್ಚಾತ್ಯರ ರೀತಿಯಲ್ಲಿ ಆಡುತ್ತಿರುವುದು, ಮೂರ್ಖತನವಲ್ಲದೇ ಮತ್ತೇನು ಅಲ್ಲ.

ವಿಜಯದಶಮಿ ನಮಗೆ ವಿಜಯವನ್ನು ತರಲಿ.

ಬೇಕಾಗಿರುವುದು ಎರಡು ದಿನದ ಕ್ರೋಧವಲ್ಲ!


ದಲಿತ ಎಂಬ ಕಾರಣಕ್ಕೆ ಅಲ್ಲ, ಮಹಿಳೆ ಎಂಬ ಕಾರಣಕ್ಕೆ ಅಲ್ಲ, ಮಗು ಎಂಬ ಕಾರಣಕ್ಕೆ ಅಲ್ಲ, ತನಗಿಂತ ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಅಥವಾ ಇನ್ಯಾವುದೇ ಸ್ಥರದಲ್ಲಿ ಬಲಹೀನರಾಗಿರುವ ಯಾರನ್ನೇ ಆದರೂ exploit ಮಾಡುವುದು ಮನುಷ್ಯನ ಸ್ವಭಾವೇ ಆಗಿ ಹೋಗಿದೆ.

ನೀವು ಇದನ್ನು ಎಲ್ಲೆಲ್ಲೂ ನೋಡಬಹುದು. ಬೀದಿಬದಿಯ ಅಂಗಡಿಗಳಿಂದ ಕಾರ್ಪೋರೇಟ್ ಆಫೀಸುಗಳ ಎಸಿ ರೂಮುಗಳವರೆಗೆ, ಎಲ್ಲೆಲ್ಲೂ ಈ ಸ್ವಭಾವ ಕಾಣಸಿಗುತ್ತದೆ.

ಸ್ವಲ್ಪ ಮಾತುಕಡಿಮೆಯಾಡುವವನಿದ್ದರೆ, ಅಪಹಾಸ್ಯಕ್ಕೆ ಪ್ರತಿಹಾಸ್ಯ ಮಾಡಲು ಬರದ ವ್ಯಕ್ತಿ ಸಿಕ್ಕರೆ, ಅವನನ್ನು ಯದ್ವಾತದ್ವಾ ಹಾಸ್ಯ ಮಾಡುವ, ಆನಂದ ಪಡುವ ಜನ ಸಿಗುತ್ತಾರೆ. ಗೊತ್ತಿಲ್ಲದೇ ನಾವೂ ಮಾಡಿರುತ್ತೇವೆ. ಆಡಲು ಸರಿಯಾಗಿ ಬರದವ ನಮ್ಮ ಜೊತೆ ಕ್ರೀಡೆಯೊಂದರಲ್ಲಿ ಆಡುತ್ತಿದ್ದರೆ, ಅವನನ್ನು exploit ಮಾಡುತ್ತಿರುತ್ತೇವೆ. ಓದಲು ಸರಿಯಾಗಿ ಬಾರದ ಹುಡುಗನೊಬ್ಬ ಶಾಲೆಯಲ್ಲಿದ್ದರೆ, ಆತನ ಸ್ಠಿತಿ ಅಧೋಗತಿ. ಅಧಿಕಾರದಲ್ಲಿರುವವರು ಅಧಿಕಾರವಿರದವರ ಮೇಲೆ exploit ಮಾಡುತ್ತಿರುತ್ತಾರೆ. ಅಧಿಕಾರವಿಲ್ಲದವನು ನಾಳೆ ಅಧಿಕಾರಕ್ಕೆ ಬಂದರೆ, ಅವನು ಮಾಡುವುದೂ ಅದನ್ನಷ್ಟೇ.

ಮಹಿಳೆಯರ ಮೇಲಾಗಲೀ, ಮಕ್ಕಳ ಮೇಲಾಗಲಿ, ಜಾತಿ ಸಮುದಾಯದ ಮೇಲಾಗಲೀ, ಅಥವಾ ಇನ್ಯಾರ ಮೇಲೇ ಆಗಲಿ, ಅವರು ಶೋಷಣೆಗೊಳಗಾಗುವ ಮೂಲಕಾರಣ ದೈಹಿಕವಾಗೋ, ಸಾಮಾಜಿಕವಾಗೋ, ಮತ್ತೊಂದೋ, ಅವರು ಶೋಷಿಸಿದವರಷ್ಟು ಬಲಶಾಲಿ ಅಲ್ಲ ಎಂಬುದಷ್ಟೇ.

ಮನುಷ್ಯನ ಈ ಸ್ವಭಾವದ ಮೇಲೆ ಸಮಾಜ ಕೆಲಸ ಮಾಡಬೇಕು. Exploit ಮಾಡುವ ಅವಶ್ಯಕತೆ ಮನುಷ್ಯನಿಗೆ ತೋರದ ರೀತಿಯಲ್ಲಿ ಆತನಲ್ಲಿ ಗುಣ ಸ್ವಭಾವಗಳು ಬೆಳೆಯುವಂತೆ ಮಾಡಬೇಕು. ‘ನಾನು ಓದುವುದರಲ್ಲಿ ಮುಂದಿರಬಹುದು, ಮತ್ತೊಬ್ಬ ಆಟದಲ್ಲಿರಬಹುದು. ಸಾಮಾಜಿಕವಾಗಿ ಯಾರ್ಯಾರೋ ಯಾವ್ಯಾವುದೋ ಸ್ಥಿತಿಯಲ್ಲಿ ಇರಬಹುದು. ಆರ್ಥಿಕವಾಗಿ ನನಗಿಂತ ಕೆಳಗಿನ ಸ್ಥಿತಿಯಲ್ಲಿ ಯಾರೋ ಇರಬಹುದು. ಆದರೆ ನನಗೆ ಯಾರನ್ನೂ ಶೋಷಿಸುವ ಅಥವಾ exploit ಮಾಡುವ ಅವಶ್ಯಕತೆ ಕಾಣದಂತೆ ನನ್ನ ಮಾನಸಿಕ ಮತ್ತು ಭಾವನಾತ್ಮಕ ಶಿಕ್ಷಣ ಇರಬೇಕು. ಯಾರು ಯಾವ ಸ್ಥಿತಿಯಲ್ಲೇ ಇರಲಿ, ಅವರನ್ನು ಮೇಲೆ ತರಲು ನನಗೆ ಸಾಧ್ಯವಾಗುತ್ತೋ ಇಲ್ಲೋ ಬೇರೆ ವಿಷಯ, ಆದರೆ ನನಗೆ ಅವರನ್ನು ಶೋಷಿಸುವ ಯಾವುದೇ ಅವಶ್ಯಕತೆ ಇಲ್ಲ’. ಈ ಮನಸ್ಠಿತಿ ಸಮಾಜದ ಪ್ರತೀ ವ್ಯಕ್ತಿಯಲ್ಲೂ ಬೆಳೆಯುವಂತೆ ಮಾಡಬೇಕು.

ಇದನ್ನು ನಾಳೆ ಬೆಳಗಾಗುವುದರಲ್ಲಿ ಮಾಡಲು ಸಾಧ್ಯವೇ? ಖಂಡಿತ ಇಲ್ಲ. ಹಾಗಂತ, ಇದು ಕೇವಲ ಪುಸ್ತಕದ ಮಾತೇ? ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯವಿದೆ.

ಶಿಕ್ಷಣ ಹೇಗಾಗಿಹೋಗಿದೆ ಎಂದರೆ, ಪುಸ್ತಕದ ಕಂತೆ ಸೇರಿಸಿ, ‘ಇಷ್ಟನ್ನು ಓದಿದರೆ ನೀನು ಗೆದ್ದಂತೆ, ಜಗತ್ತಿನಲ್ಲಿ ಹೇಗೆ ಬೇಕಾದರೂ ಇರು’ ಎಂಬ ವ್ಯವಸ್ಥೆ. ಮಕ್ಕಳ ಮಾನಸಿಕ, ದೈಹಿಕ, ಆಧ್ಯಾತ್ಮಿಕ ಹಾಗೂ ಸರ್ವತೋಮುಖ ದೃಢತೆಗೆ ಅಲ್ಲಿ ಯಾವ ಲಕ್ಷ್ಯವೂ ಇದ್ದಂತಿಲ್ಲ. ಒಂದು ಉದ್ಯಾನವನವಿದೆ ಎಂದುಕೊಳ್ಳಿ. ಒಂದಷ್ಟು ಗಿಡ ಬೆಳೆಸುತ್ತಿರುವಿರಿ. ನಾನು ಗಿಡಗಳಿಗೆ ಸೂರ್ಯನ ಬೆಳಕನ್ನು ಮಾತ್ರ ಕೊಡುತ್ತೇನೆ, ನೀರು ಹಾಕುವುದಿಲ್ಲ, ನೀರನ್ನು ಮಾತ್ರ ಹಾಕುವೆ, ಬುಡದಲ್ಲಿ ಮಣ್ಣನ್ನು ಒದಗಿಸುವುದಿಲ್ಲ ಎಂದರೆ ಗಿಡಗಳು ಬೆಳೆಯುತ್ತವೆಯೇ? ಅದರಲ್ಲಿ ಸುಂದರ ಹೂವುಗಳು ಅರಳುತ್ತವೆಯೇ? ನಾವು ನಮ್ಮ ಮಕ್ಕಳಿಗೆ ಮಾಡುತ್ತಿರುವುದು ಅದನ್ನೇ!

ಇರಲಿ. ಸಮಾಜದಲ್ಲಿ ಅಹಿತಕರ ಘಟನೆಗಳಾದಾಗ ಹೊಯ್ದುಕೊಳ್ಳುವ ನಾವೆಲ್ಲರೂ ಉಳಿದ ದಿನಗಳು ಮಲಗಿರುತ್ತೇವೆ. ಎರಡು ದಿನ ಹುಯ್ ಹುಯ್ ಎಂದು, ಮತ್ತೆ ಪುನರಾವರ್ತನೆ. ಇದೆಲ್ಲದರಿಂದ ಕ್ಷಣಿಕ ತೃಪ್ತಿ ಸಿಗಬಹುದೇ ಹೊರತು, ಒಂದಷ್ಟು ಕೋಪ ಹೊರಹೋಗಬಹುದೇ ಹೊರತು - ಇವು ಪರಿಣಾಮಕಾರಿ ಪರಿಹಾರವಲ್ಲ. ಪರಿಣಾಮಕಾರಿ ಪರಿಹಾರಗಳು ಎಲ್ಲರ ಪಾಲ್ಗೊಳ್ಳುವಿಕೆಯನ್ನು ಬಯಸುತ್ತವೆ. ನಿಯತ್ತನ್ನು ಬಯಸುತ್ತವೆ. ಎರಡು ದಿನದ ಕ್ರೋಧವನ್ನಲ್ಲ.

~ ಸಂಕೇತ್ ಡಿ ಹೆಗಡೆ


‘ಗುರು’ ನಾವಂದುಕೊಂಡಿರುವಂತೆ ಹಳೆಯ ಕಾಲಕಷ್ಟೇ ಸೀಮಿತವೇ?



ಅಷ್ಟಕ್ಕೂ ಇದನ್ನು ಬರೆಯುವ ಆಲೋಚನೆಯಿರಲಿಲ್ಲ. ಏಕೆಂದರೆ, ಯಾರು ಓದುತ್ತಾರೆ ಇದನ್ನೆಲ್ಲ?

ಇಡೀ ದಿನ ಪೊಲಿಟಿಕ್ಸ್ ಮತ್ತೊಂದರಲ್ಲಿ ಮುಳುಗಿಹೋಗಿರುವ ಸೋಷಿಯಲ್ ಮೀಡಿಯಾ ಪ್ರಪಂಚದಲ್ಲಿ ಬಂದು ಗುರುವಿನ ಕುರಿತು ಏನೆಂದು ಬರೆಯಲಿ. ಬರೆದು ಏನು ಸಾಧಿಸೋದು? ಹೇಗೆ ಶುರು ಮಾಡಲಿ, ಹಾಗೂ ಅಷ್ಟೆಲ್ಲ ಹೇಳಲು ’ಗುರು’ವಿನ ಅರ್ಥ ನನಗೆ ಸರಿಯಾಗಿ ಗೊತ್ತೇನು?

ಆದರೂ ಬರೆಯಬೇಕು ಅನ್ನಿಸಿತು. ಏಕೆಂದರೆ, ಸಹಸ್ರಾರು ವರ್ಷಗಳಿಂದ ಗುರು-ಶಿಷ್ಯ ಪರಂಪರೆಯಲ್ಲಿ ಮಿಂದೆದ್ದ ಈ ದೇಶ, ಇಂದು ಇಷ್ಟು ಪ್ರಾಪಂಚಿಕ ಜಂಜಾಟದಲ್ಲಿ ಮುಳುಗಿಹೋಗಿ, ತನ್ನ ತನವನ್ನು ಎಲ್ಲಿ ಚೂರು ಕಳೆದುಕೊಂಡುಬಿಟ್ಟಿದೆಯೇನೋ ಎಂಬ ಭಯ.

ನಾವು ಇಂದು ಎಲ್ಲದಕ್ಕೂ ಗುರು ಎನ್ನುತ್ತೇವೆ. ಮಾರ್ಕೆಟಿಂಗ್-ಗುರು, ಮ್ಯಾನೇಜ್ ಮೆಂಟ್ ಗುರು, ಟೆಕ್ ಗುರು, ಆ ಗುರು, ಈ ಗುರು, ಒಟ್ಟಿನಲ್ಲಿ ಎಲ್ಲವೂ ಗುರು. ಕೆಲವರು ಇನ್ನೊಂದು ಹಾದಿಯಲ್ಲಿ ನನಗೆ ಪಾಠ ಮಾಡಿದ ಶಿಕ್ಷಕರು ಗುರು ಎಂದೋ, ಅಥವಾ ಇನ್ಯಾರೋ ಹಿರಿಯರು ಗುರು ಎಂದೋ ತಿಳಿದು ಪ್ರಕಟಿಸುತ್ತಿರುತ್ತಾರೆ.

ಆದರೆ ಈ ಗುರುಪೂರ್ಣಿಮೆ, ಇದ್ಯಾವುದರ ಕುರಿತೂ ಅಲ್ಲ. ಇದು ನಿಮ್ಮ ಶಿಕ್ಷಕರಿಗೆ ಶುಭಾಶಯ ಕೋರುವ ದಿನವಲ್ಲ. ಅಥವಾ ಮರೆತುಹೋಗಬಹುದಾದ ಮತ್ತೊಂದು ಹಬ್ಬ ಕೂಡ ಅಲ್ಲ.

ಗುರು ಪೂರ್ಣಿಮೆ, summer solstice ಮುಗಿದ ನಂತರ ಬರುವ ಅಂದರೆ ಆಷಾಢದ ಪ್ರಥಮ ಪೂರ್ಣಿಮೆ. ಇದರ ನಂತರ ದಕ್ಷಿಣಾಯನ ಪ್ರಾರಂಭವಾಗುತ್ತದೆ. ಈ ದಿನ, ಆದಿಯೋಗಿ ಶಿವ, ಏಳು ಋಷಿಗಳಿಗೆ, ಮಾನವ ಇತಿಹಾಸದಲ್ಲೇ ಪ್ರಥಮ ಬಾರಿಗೆ ಆಂತರಿಕ ಜ್ಞಾನ ಅಥವಾ ಯೋಗ ವಿಜ್ಞಾನವನ್ನು ಧಾರೆ ಎರೆಯಲು ಶುರುಮಾಡಿದ. ಆ ಏಳು ಋಷಿಗಳನ್ನು ಸಪ್ತರ್ಷಿಗಳು ಎಂದು ಕರೆಯುತ್ತೇವೆ.

ಈ ಸಪ್ತರ್ಷಿಗಳು, ಅಂದರೆ ವಸಿಷ್ಠ, ಅಗಸ್ತ್ಯ, ಭೃಗು ಮುಂತಾದವರು ಈ ವಿಜ್ಞಾನವನ್ನು ಅತ್ಯಂತ ಜಾಗರೂಕತೆಯಿಂದ ವಿಶ್ವದ ಮೂಲೆಮೂಲೆಗೆ ಹರಡಿದರು. ಇಂದು ನಾವು ನೋಡಬಹುದಾದ ಅನೇಕ ಆಧ್ಯಾತ್ಮಿಕ ಪ್ರಕ್ರಿಯೆಗಳಲ್ಲಿ ಇವರ ಕೊಡುಗೆ ಸಾಕಷ್ಟಿದೆ.

ಇಲ್ಲಿಂದ ಶುರುವಾದ ಗುರು-ಶಿಷ್ಯ ಪರಂಪರೆ, ಭಾರತದ ಇತಿಹಾಸದುದ್ದಕ್ಕೂ ಒಂದು ರೋಮಾಂಚನಾಕಾರಿ ಸಂಗತಿ. ಗುರುವನ್ನು ಅತ್ಯಂತ ಶ್ರೇಷ್ಠನೆಂದೂ, ಜ್ಞಾನಿಯೆಂದೂ ಪರಿಗಣಿಸಲಾಗುತ್ತಿತ್ತು. ಆತನ ಮಾತುಗಳಿಗೆ ಅಷ್ಟು ತೂಕ ಮತ್ತು ಸನ್ಮಾನ ಇರುತ್ತಿತ್ತು.

ಏಕೆಂದರೆ ಬದುಕಿನಲ್ಲಿ ನಾವೇನೇ ಮಾಡುತ್ತಿರಬಹುದು. ಕೂಲಿ ಮಾಡುತ್ತಿರಬಹುದು ಅಥವಾ ರಾಜ್ಯವಾಳುತ್ತಿರಬಹುದು, ನಾವು ಅರಿತುಕೊಳ್ಳಬೇಕಾಗಿರುವ ಸಂಗತಿಯೆಂದರೆ ನಾವಿಲ್ಲಿ ಕ್ಷಣಿಕ. ಇವತ್ತು ಹುಟ್ಟಿ ನಾಳೆ ಸಾಯುತ್ತೇವೆ. ಹೌದು, ನಾವು ನಮ್ಮ ಬಗ್ಗೆಯೇ ಏನೇನೆಲ್ಲ ಅಂದುಕೊಂದಿರಬಹುದು. ಹಾಗೆ-ಹೀಗೆ ಎಂಬ ಅಭಿಪ್ರಾಯಗಳನ್ನಿಟ್ಟುಕೊಂಡಿರಬಹುದು. ಶ್ರೇಷ್ಟ-ಕನಿಷ್ಠ ಎಂಬ ಭಾವನೆಗಳಿರಬಹುದು. ಆದರೆ ನಾವೆಲ್ಲ ಇಲ್ಲಿ ಬದುಕಿರುವುದು ಕ್ಷಣಿಕ ಮಾತ್ರ. ಇದನ್ನು ಜನ ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ಆದ್ದರಿಂದ ಈ ಹುಟ್ಟು-ಸಾವನ್ನು ಮೀರಿದ ಸಂಗತಿಯ ಬಗ್ಗೆ ಜನಕ್ಕೆ ಸಹಜ ಕುತೂಹಲವಿತ್ತು. ಈ ಚಕ್ರವನ್ನು ಮೀರಬೇಕೆಂಬ ತುಡಿತವಿತ್ತು. ಆದ್ದರಿಂದಲೇ ಈ ಸಂಸ್ಕೃತಿಯಲ್ಲಿ ’ಮುಕ್ತಿ, ಮೋಕ್ಷ’ ಎಂಬ ಪದಗಳಿಗೆ ಅಷ್ಟು ಮಹತ್ವವಿದ್ದುದ್ದು. ಜನರಿಗೆ ಅದನ್ನು ಹೊಂದಬೇಕೆಂಬ, ಸ್ವತಂತ್ರವಾಗಬೇಕೆಂಬ ಹಂಬಲವಿತ್ತು.

ಆದ್ದರಿಂದ ’ಗುರು’ ಅತ್ಯಂತ ಪ್ರಮುಖ ವ್ಯಕ್ತಿಯಾದ. ಆತ ಅಲ್ಲಿಗೆ ತಲುಪಿದ್ದ. ಹೇಗೆ ನಡೆಯಬೇಕು, ಯಾವ ದಾರಿ ಸುಲಭ, ಎಲ್ಲಿ ಬಾಗಬೇಕು, ಎಲ್ಲಿ ನಿಲ್ಲಬೇಕು, ಹೇಗೆ ಕರೆದುಕೊಂಡು ಹೋಗಬೇಕು ಎಂದು ಆತನಿಗೆ ತಿಳಿದಿತ್ತು. ಆತ ಹೇಳಿದ್ದು ಶಿರಸಾವಹಿಸಿ ಪಾಲಿಸಬೇಕಾದ ವಾಕ್ಯವಾಗಿತ್ತು.

ಈ ನೆಲದಲ್ಲಿ ಸಹಸ್ರಾರು ಗುರುಗಳು ಬಂದುಹೋದರು. ಆತ್ಮಜ್ಞಾನಿಗಳು ಸೃಷ್ಟಿಯಾದರು. ಆಧ್ಯಾತ್ಮಿಕ ಪ್ರಪಂಚವೇ ಬೆಳೆಯಿತು. ಆದಿಯೋಗಿಯಿಂದ ಶುರುವಾಗಿ, ಸಪ್ತರ್ಷಿಗಳಿಂದ ಮುಂದುವರಿದ ಈ ಪರಂಪರೆ - ವ್ಯಾಸ, ಶುಕ, ಪರಶುರಾಮ, ದತ್ತಾತ್ರೇಯ, ಅಷ್ಟಾವಕ್ರ, ಕೊನೆಗೆ ಶಂಕರರು, ಗೌತಮ ಬುದ್ಧ ಇವರನ್ನೆಲ್ಲ ಒಳಗೊಂಡಿತು. ರಾಮಕೃಷ್ಣ, ರಮಣರೂ ಆಗಿಹೋದರು. ಇವರೆಲ್ಲ ಮುಕುಟಮಣಿಗಳಷ್ಟೇ. ಸಹಸ್ರಾರು ಯೋಗಿಗಳು, ಮಹರ್ಷಿಗಳು, ಗುರುಗಳು ಆಗಿಹೋದರು. ಆಯಾ ಕಾಲದಲ್ಲಿ ಯಾವುದು ಸೂಕ್ತವೋ, ಸಮಾಜಕ್ಕೆ ಏನು ಬೇಕೋ ಎಲ್ಲವನ್ನೂ ಮಾಡಿದರು. ಹಲವರ ಆಧ್ಯಾತ್ಮ ಉನ್ನತಿಗೆ ಕಾರಣರಾದರು. ಆಧ್ಯಾತ್ಮ ಸಂಪತ್ತನ್ನು ವಿವಿಧ ರೀತಿಯಲ್ಲಿ ಬಿಟ್ಟು ಹೋದರು ಕೂಡ.

ಈ ಅಭೂತಪೂರ್ವ ಪರಂಪರೆ, ಈ ದೇಶದ ಪ್ರಜ್ಞೆಯನ್ನು ನಿರ್ಮಿಸಿತ್ತು. ಜೀವನಶೈಲಿಯನ್ನು ರೂಪಿಸಿತ್ತು. ಜನ ತಮ್ಮನ್ನು ತಾವು ನಿಭಾಯಿಕೊಳ್ಳುವಷ್ಟು, ನಗುನಗುತ್ತ ಸುತ್ತಲಿನವರಿಗೂ ಒಳ್ಳೆಯದನ್ನು ಮಾಡುವಷ್ತು ಸಶಕ್ತರಾಗಿದ್ದರು. ಜೀವನದ ಪರಮಗುರಿಯೆಡೆಗೆ ಸಾಗುವಲ್ಲಿ ಜೀವನವನ್ನು ರೂಪಿಸಿಕೊಳ್ಳುತ್ತಿದ್ದರು.

ಒಂದಷ್ಟು ಆಕ್ರಮಣಗಳಾದವು ನೋಡಿ, ಕಳೆದ ಸಾವಿರ ವರ್ಷಗಳಲ್ಲಿ. ಸುಮಾರು ಹತ್ತಿಪ್ಪತ್ತು ಹೊರದೇಶೀ ಆಕ್ರಮಗಳಾಗಿರಬಹುದಲ್ಲ? ಅಥವಾ ಅದಕ್ಕಿಂತ ಹೆಚ್ಚೇ. ಹೋಗುವವರು ಅನೇಕವನ್ನು ಕಿತ್ತುಕೊಂಡು ಹೋದದ್ದು ಹೌದು. ಆದರೆ ನಾವು ಬಿಟ್ಟ ಅನೇಕ ವಸ್ತುಗಳಲ್ಲಿ, ಕೆಲವಷ್ಟು ‘ನಮ್ಮತನ’ ಕೂಡ ಹೌದು. 1947ರ ಸ್ವಾತಂತ್ರ್ಯ ನಂತರವಂತೂ, ನಾವು ಭವ್ಯ ಭಾರತವನ್ನು ಪುನರ್ ನಿರ್ಮಿಸುವ ಕಾರ್ಯಕ್ಕಿಂತ ಹೆಚ್ಚಾಗಿ, ನಮ್ಮ ಕಣ್ಣುಗಳಲ್ಲಿ ಭವ್ಯವಾಗಿ ಕಂಡ ಪಾಶ್ಚಾತ್ಯವನ್ನು ಇಲ್ಲೂ ನಿರ್ಮಿಸುವ ದಿಕ್ಕಿನಲ್ಲೇ ಹೆಜ್ಜೆ ಇಟ್ಟೆವು.

ನಮ್ಮ ಶಿಕ್ಷಣ ಆಂಗ್ಲರ ಮಾದರಿಯದ್ದಾಯಿತು. ಅವರು ಬಿಟ್ಟುಹೋದ ಇತಿಹಾಸವನ್ನೇ ನಮ್ಮ ಮಕ್ಕಳಿಗೆ ಕಲಿಸಿದೆವು. ಇತ್ತೀಚಿಗೆ, ಆರ್ಥಿಕ ಕ್ರಾಂತಿಯ ನಂತರವಂತೂ ಅವರು ತಿನ್ನುವುದನ್ನು ನಾವೂ ತಿನ್ನಲು ಕಲಿತೆವು. ಅವರ ಬಟ್ಟೆಯನ್ನು ನಾವು ಹಾಕತೊಡಗಿದೆವು. ಒಟ್ಟಿನಲ್ಲಿ ಅವರ ಬದುಕನ್ನು ಅವರಿಗಿಂತ ಚೆನ್ನಾಗಿ ನಾವೇ ಬದುಕಲು ಆರಂಭಿಸಿದೆವು!

ಸರಿ. ತಪ್ಪೇನಿಲ್ಲ. ಸಾವಿರ ವರ್ಷಗಳ ಹಿಂದೆ ಬದುಕಿದಂತೆ ಈಗಲೂ ಬದುಕಬೇಕು ಎಂದು ಹೇಳುತ್ತಿಲ್ಲ. ಆದರೆ ನಮ್ಮ ಜೀವನಶೈಲಿ ನಮಗೆ ಸಂತೋಷವನ್ನು ತಂದುಕೊಟ್ಟಿದೆಯೇ? ಎಷ್ಟು ದಿನ ಸಂಪೂರ್ಣ ಆನಂದದಲ್ಲಿ ನಾವು ಕಳೆಯುತ್ತಿದ್ದೇವೆ? ಆರೋಗ್ಯ ತಂದುಕೊಟ್ಟಿದೆಯೇ? ಮಾನಸಿಕ ಸ್ಥಿಮಿತ ತಂದಿದೆಯೇ? ಇವೇ ಇಲ್ಲ ಎಂದ ಮೇಲೆ, ಇದರ ಮುಂದಿನ ಹೆಜ್ಜೆಯಾದ ಆಧ್ಯಾತ್ಮದ ಬಗ್ಗೆ ಮಾತನಾಡಲು ಸಾಧ್ಯವೇ ಇಲ್ಲ.

ನಾವು ಏನೇ ಮಾಡುತ್ತಿರಬಹುದು. ಸಾಫ್ಟ್ವೇರ್ ಇಂಜಿನಿಯರ್ ಆಗಿರಬಹುದು, ಶಿಕ್ಷಕರಾಗಿರಬಹು, ಡಾಕ್ಟರೋ, ವಕೀಲರೋ ಆಗಿರಬಹುದು, ಅಥವಾ ಆಟೋ, ಬಸ್ ಡ್ರೈವರ್ ಆಗಿರಬಹುದು - ಇದ್ದಷ್ಟು ದಿನ ಸಂತೋಷದಿಂದ, ಆರೋಗ್ಯದಿಂದ, ಸುಗಮವಾಗಿ ಬದುಕುವುದು ಮುಖ್ಯವಲ್ಲವೇ? ಆದ್ದರಿಂದ ಇದ್ಯಾವುದೂ ಔಟ್-ಡೇಟೆದ್ ಅಲ್ಲ. ನಮ್ಮ ಹೊರಪ್ರಪಂಚ ಬದಲಾಗಿರಬಹುದು, ಆದರೆ ಆಂತರಿಕ ವಿಜ್ಞಾನ ಹಾಗೇ ಇದೆ. ನಮ್ಮನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವ ವಿಜ್ಞಾನ ಹಾಗೇ, ಈ ದೇಶದ ಒಡಲಲ್ಲಿ, ನಮಗಾಗಿ ಕಾಯುತ್ತ ಇದೆ.

’ಗುರು’ ಆ ನಿಟ್ಟಿನಲ್ಲಿ ಪ್ರಮುಖನಾಗುತ್ತಾನೆ. ಇರುವ ಮೂರು ದಿನವನ್ನು ಪ್ರಜ್ಞಾಪೂರ್ವಕವಾಗಿ ಹೇಗೆ ಕಳೆಯುವುದು ಎಂಬುದನ್ನು ಅರ್ಥಮಾಡಿಸಲು. ಆ ದಾರಿಯಲ್ಲಿ ಕರೆದೊಯ್ಯಲು. ಅಡೆತಡೆಗಳಿದ್ದರೆ ತನ್ನ ಹೆಗಲ ಮೇಲೆ ಹೊತ್ತು ದಾಟಿಸಲು. ಸದಾ ಪ್ರೀತಿ ತೋರಲು ಹಾಗೂ ನಾವು ನಿದ್ರಿಸದಂತೆ ಹಾಗೇ ಕಠೋರವಾಗಿರಲು. ಮುಳುಗಿಹೋಗಿರುವ, ಚಿಕ್ಕ ಸಂಗತಿಗಳನ್ನು ಪರಮೋನ್ನತ ಅಂದುಕೊಂಡು ನಮ್ಮದೇ ಲೋಕದಲ್ಲಿ ಸಾಗುತ್ತಿರುವ ನಮ್ಮನ್ನು ಬಡಿದೆಬ್ಬಿಸಿ, ಬೆಳಕು ಚೆಲ್ಲಲು. ಒಂದಷ್ಟು ನಗು ತರಲು. ಒಂದಷ್ಟು ಹಗುರಮಾಡಲು.

ಶುಭವಾಗಲಿ. ಗುರುವಿನ ಕೃಪೆ ನಮ್ಮ ಮೇಲಿರಲಿ.

Friday, October 30, 2020

CAA ಮತ್ತು NRC: ಬೆಂಕಿಯ ಭ್ರಮೆಯಲ್ಲಿ ಬಾವಿಗೆ ಧುಮುಕುವುದೇಕೆ?



‘Citizenship Amendment Bill’ – ಇಂಥದ್ದೊಂದು ಬಾಂಬ್ ಅನ್ನೇ ಅಮಿತ್ ಶಾ ಆವತ್ತು ಪಾರ್ಲಿಮೆಂಟ್ ನಲ್ಲಿ ಹಾಕಿದರು. ಇದು ಇಷ್ಟೊಂದು ಶಕ್ತಿಯುತ ಬಾಂಬ್ ಎಂದು ಬಹುಶಃ ಗೃಹಮಂತ್ರಿಯಾಗಿ ಸ್ವತಃ ಅವರೂ ಯೋಚಿಸಿರಲಿಕ್ಕಿಲ್ಲ. ಡಿಸೆಂಬರ್ ನಾಲ್ಕಕ್ಕೆ ಕ್ಯಾಬಿನೆಟ್ ಅನುಮೋದನೆ ಪಡೆದ ಈ ಮಸೂದೆ, 9 ಡಿಸೆಂಬರ್ ರಂದು ಲೋಕಸಭೆಯಲ್ಲಿ ಮಂಡನೆಯಾಯಿತು. ಮರುದಿನ ಅಲ್ಲಿ ಸಲೀಸಾಗಿ ಅನುಮೋದನೆಯಾದ ಈ ಪ್ರಸ್ತಾವನೆ, ’ರಾಜ್ಯಸಭೆ’ಯಲ್ಲೂ ಈಜಿ ದಡ ಸೇರುವುದೇ ಎಂಬುದೇ ಎಲ್ಲರ ಪ್ರಶ್ನೆಯಾಗಿತ್ತು. ಆದರೆ  ಡಿಸೆಂಬರ್ 11ರಂದು 20 ಮತಗಳ ಅಂತರದಲ್ಲಿ ಇದು ರಾಜ್ಯಸಭೆಯಲ್ಲೂ ಅನುಮೋದನೆಗೊಂಡಿತು. ಮರುದಿನವೇ ರಾಷ್ಟ್ರಪತಿಗಳ ಅಂಕಿತವೂ ಬಿದ್ದು, ’Bill’ ಇದ್ದದ್ದು ‘Act’ ಆಯಿತು. ‘ಮಸೂದೆ’ ಅಧಿಕೃತವಾಗಿ ಕಾಯಿದೆಯಾಯಿತು. ಈಗ ಶುರುವಾಯಿತು ನೋಡಿ ಈ ಬಾಂಬಿನ ಆಟಾಟೋಪ!

ಇದ್ದಕ್ಕಿದ್ದಂತೆ ಯೂನಿವರ್ಸಿಟಿಗಳು ರಣಾಂಗಣಗಳಾದವು. ’ಜಾಮಿಯಾ ಇಸ್ಲಾಮಿಯಾ’ ವಿಶ್ವವಿದ್ಯಾಲಯದ ಒಳಬದಿಯಿಂದ ಕಲ್ಲುಗಳು ತೂರಿಬಂದವು. ಇಂಥವುಗಳಿಗೆ ಸದಾ ’ಹೆಸರುವಾಸಿ’ಯಾದ ಜೆಎನ್ಯೂ ಸುಮ್ಮನಿರಲು ಸಾಧ್ಯವೇ? ಅಲ್ಲಿಯೂ ಪರಿಸ್ಥಿತಿ ಭುಗಿಲೆದ್ದಿತು.  ’ಜಾಮಿಯ’ದಿಂದ ಶುರುವಾದದ್ದು ಸಾಂಕ್ರಾಮಿಕ ರೋಗದಂತೆ ’ಆಲಿಗಡ್ ಮುಸ್ಲಿಮ್ ಯುನಿವರ್ಸಿಟಿ’, ‘ನಾದ್ವಾ’ ಹೀಗೆ ದೇಶದ ಅನೇಕ ಯೂನಿವರ್ಸಿಟಿಗಳಿಗೆ ಹಬ್ಬಿತು. ಅದಲ್ಲದೇ ಯೂನಿವರ್ಸಿಟಿಗಳ ಹೊರಗೂ, ಸದ್ಯದ ಕೇಂದ್ರ ಸರ್ಕಾರದ ಸೈದ್ಧಾಂತಿಕ ವೈರಿಗಳ ಸಕಲ ಗುಂಪುಗಳಿಂದ ದೊಡ್ಡ ಹಿಂಸಾಚಾರಗಳೇ ನಡೆದವು. ಇಂಥ ಕಾಯ್ದೆಯೊಂದು ಈ ಮಟ್ಟಿಗೆ ಪ್ರತಿಕ್ರಿಯೆಗಳನ್ನು ಪಡೆಯಬೇಕಾಗುತ್ತದೆ ಎಂಬುದನ್ನು ಬಹುಶಃ ನೀರಿಕ್ಷಿಸದಿದ್ದ ಸರ್ಕಾರಕ್ಕೆ, ಇದೊಂದು ಆಘಾತವೇ ಸರಿ. ನೇಮಿಸಿದ್ದ ಪೋಲೀಸ್ ತುಕಡಿಗಳು ಸಾಕಾಗಲಿಲ್ಲ. ಬೆರಳೆಣಿಕೆಯಷ್ಟಿದ್ದ ಪೋಲೀಸರು ಸಾವಿರ ಸಂಖ್ಯೆಗಳಲ್ಲಿದ್ದ ಗಲಭೆನಿರತರನ್ನು ಸಂಭಾಳಿಸಲು ಸಾಧ್ಯವಾಗಲಿಲ್ಲ. ಪೋಲೀಸರು ದೇಶದ ಅನೇಕ ಕಡೆ ಹೊಡೆತ ತಿಂದರು, ಗಾಯಗೊಂಡರು. ಲಕ್ನೋ ನಗರದಲ್ಲೊಂದರಲ್ಲೇ 250ಕ್ಕೂ ಅಧಿಕ ಪೋಲಿಸರು ಗಾಯಗೊಂಡರು ಮತ್ತು ದೇಶವೇ ನಿಬ್ಬೆರಗಾಗುವಂತೆ 50ಕ್ಕೂ ಹೆಚ್ಚು ಪೋಲಿಸರಿಗೆ ಗುಂಡೇಟಾಯಿತು. ಪೋಲೀಸರಿಗೆ ಗುಂಡೇಟಾಯಿತು! ಪ್ರತಿಭಟನಾಕಾರರ ಕಿಸೆಯಲ್ಲಿ ಗುಂಡು ತುಂಬಿ, ಮರೆಯಲ್ಲೆಲ್ಲೋ ಕೈಯಲ್ಲಿ ಬಂದೂಕು ಕೊಟ್ಟದ್ದು ಯಾರು ಅಂತ ಮಾತ್ರ ’ಜಾಮಿಯಾ’, ’ಜೆ ಎನ್ಯೂ’ಗಳಲ್ಲಿ ಪಿಎಚ್ಡಿ ಮಾಡುತ್ತಿರುವವರಿಗೇ ಗೊತ್ತಿರಬೇಕು, ನನಗಂತೂ ಗೊತ್ತಿಲ್ಲ.

ಇಂಥ ಭಯಾನಕ ಗಲಭೆಗಳು ಅನೀರಿಕ್ಷಿತವಾಗಿ ನಡೆದಾಗ, ಇದ್ದಬದ್ದ ಪೋಲೀಸರೇ ಹೊಡೆತ ತಿಂದಾಗ, ಸಹಜವಾಗಿ ಹೆಚ್ಚುವರಿ ತುಕಡಿಗಳು ಪ್ರತಿಭಟನಾ ಸ್ಥಳವನ್ನು ತಲುಪುತ್ತವೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಕಾರಣದಲ್ಲಿ, ಅಲ್ಲಿ ಪೋಲೀಸ್ ಹಿಂಸಾಚಾರ ಕೂಡ ನಡೆಯುತ್ತದೆ. ಲಾಠಿ ಚಾರ್ಜ್ ಗಳಾಗುತ್ತವೆ, ಅಶ್ರುವಾಯುಗಳು ಸಿಡಿಯುತ್ತವೆ, ಗಾಳಿಯಲ್ಲಿ ಗುಂಡು ಹಾರುತ್ತದೆ, ಕೆಲವೊಮ್ಮೆ ಗೋಲೀಬಾರ್ ಕೂಡ ನಡೆದುಹೋಗುತ್ತದೆ. ದುರದೃಷ್ಟಕರವಾಗಿ ಎಲ್ಲವೂ ಹೀಗೇ ಆಯಿತು. ಇವೇನು ವಿಶ್ವವಿದ್ಯಾಲಯಗಳೋ, ಯುದ್ಧಭೂಮಿಗಳೋ ಎಂದು ಜನರಿಗೆ ಗೊಂದಲವಾಗುವಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿತ್ತು. ಅದು ದೇಶಕ್ಕೆ ಒಳಿತಿರಲಿ ಅಥವಾ ಕೆಡುಕಿರಲಿ, ಏನೇ ಇರಲಿ, ಈ ಸರ್ಕಾರ ಯಾವ ಹೆಜ್ಜೆಯಿಟ್ಟರೂ ದೇಶದಲ್ಲಿ ‘ಕೆಂಪು’ ರಕ್ತ ಹರಿಸಬೇಕು ಎಂದು ಸದಾಕಾಲ ಕಾದುಕುಳಿತಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಟ್ಟೆಂದು ಎದ್ದುನಿಂತವು. ಪರಿಸ್ಥಿತಿ ವಿಕೋಪಕ್ಕೆ ಹೋಗಲು ಏನೇನು ಮಾಡಬಹುದೋ ಅದನ್ನೆಲ್ಲ ಚಾಚೂ ತಪ್ಪದೇ ಮಾಡಿದವು. “ನಿಮ್ಮ ಅಸ್ತಿತ್ವವೇ ಅಪಾಯದಲ್ಲಿದೆ” ಎಂಬ ತಪ್ಪುಸಂದೇಶವನ್ನು ಅತ್ಯಂತ ಅಚ್ಚುಕಟ್ಟಾಗಿ ಒಂದು ನಿರ್ದಿಷ್ಟ ಸಮುದಾಯಕ್ಕೆ ತಲುಪುವ ಹಾಗೆ ನೋಡಿಕೊಂಡವು. ’ಇನ್ನೇನು ನಿಮ್ಮನ್ನು ದೇಶದಿಂದ ಹೊರಹಾಕಿಯೇ ಬಿಡುತ್ತಾರೆ’ ಅಂತ ಹುಚ್ಚು ಕಲ್ಪನೆಯನ್ನು ಒಂದು ದೊಡ್ಡ ಸಂಖ್ಯೆಯ ಜನರ ತಲೆಯಲ್ಲಿ ವ್ಯವಸ್ಥಿತವಾಗಿ ತೂರಿಬಿಟ್ಟರು. ಆಹ್.. ಹೊತ್ತುತ್ತಿದ್ದ ಬೆಂಕಿಗೆ ಗಾಳಿ ಊದಿದಂತಾಯಿತು.

ಹ್ಮ್… ಇಷ್ಟೆಲ್ಲ ಏಕಾಯಿತು? ಅಂಥ ’ಸ್ಫೋಟಕ ವಸ್ತು’ ಈ ಕಾಯ್ದೆಯಲ್ಲಿದೆಯೇ? ಇದು ಅಸಾಂವಿಧಾನಿಕವೇ? ಇದು ಧರ್ಮಗಳ ನಡುವೆ ಪಕ್ಷಾತೀತ ಮಾಡುವ ಹುನ್ನಾರವೇ? ನಾಳೆ ನಮ್ಮನ್ನೂ ಹೊರಹಾಕಿಬಿಡುತ್ತಾರೆಯೇ?

ಇಂಥ ಪ್ರಶ್ನೆಗಳನ್ನೆಲ್ಲ ಕೇಳಿದಾಗ ಅಳಬೇಕೋ ನಗಬೇಕೋ ಗೊತ್ತಾಗುವುದಿಲ್ಲ. ಆದರೆ ಇಂಥ ಅಸಂಬದ್ಧಗಳನ್ನೇ ಅಷ್ಟು ವ್ಯವಸ್ಥಿತವಾಗಿ ಒಂದಿಷ್ಟು ಜನರ ತಲೆಗೆ ನಮ್ಮೆದುರೇ ತುಂಬಿ ಹುಯಿಲೆಬ್ಬಿಸಿಬಿಟ್ಟರಲ್ಲ ಎಂದು ನೆನೆಸಿಕೊಂಡರೆ ಬೇಸರವಾಗುತ್ತದಷ್ಟೇ. ಸರಿ ಈಗ ಕಾಯ್ದೆಯ ವಿಷಯಕ್ಕೆ ಬರೋಣ.

ಈ ಕಾಯ್ದೆ ಏನು ಹೇಳುತ್ತದೆ ಎಂದು ಬಹುಶಃ ನೀವೆಲ್ಲ ಇಷ್ಟುದಿನದಲ್ಲಿ ಖಂಡಿತವಾಗಿ ತಿಳಿದುಕೊಂಡಿರುತ್ತೀರಿ. ಆದರೂ ಒಂದು ಚಿಕ್ಕ ವಿವರಣೆ ಕೊಡುವುದು ನನ್ನ ಕರ್ತವ್ಯ. ಇದು ನಮ್ಮ ನೆರೆಹೊರೆಯಲ್ಲಿರುವ 3 ರಾಷ್ಟ್ರಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ, ಅವರು ಅಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ಹಿಂಸೆಗೊಳಗಾಗಿ ಭಾರತಕ್ಕೆ ಐದು ವರ್ಷಗಳ ಹಿಂದೆ – ಅಂದರೆ ಡಿಸೆಂಬರ್ 31, 2014ಕ್ಕೂ ಮೊದಲು ಓಡಿ ಬಂದಿದ್ದರೆ, ಅವರಿಗೆ ಭಾರತೀಯ ಪೌರತ್ವವನ್ನು ದಯಪಾಲಿಸುವ ಕಾಯ್ದೆ. ಈ ಕಾಯ್ದೆಯಡಿ ಆ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಅನ್ನಿಸಿಕೊಂಡಿರುವ ಆರು ಧರ್ಮಗಳನ್ನು ಪಟ್ಟಿಮಾಡಲಾಗಿದೆ – ಹಿಂದು, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ. ಈ ಧರ್ಮಗಳ ಜನರು ತಾವು ಇತರ ಧರ್ಮದವರು ಎಂಬ ಏಕೈಕ ಕಾರಣಕ್ಕೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾಗಿ, ಅಪಕೃತ್ಯ- ಅತ್ಯಾಚಾರಗಳಿಗೆ ಒಳಗಾಗಿ ಭಾರತದ ಗಡಿಯೊಳಗೆ ದಾಖಲೆಗಳಿಲ್ಲದೆ, ಅನುಮತಿಯಿಲ್ಲದೆ ಓಡಿ ಬಂದಿದ್ದರೂ – ಮಾನವೀಯ ನೆಲೆಗಟ್ಟಿನಲ್ಲಿ ನಾವು ಅವರಿಗೆ ಪೌರತ್ವ ಕೊಡುತ್ತೇವೆ ಎಂಬುದು ಈ ಕಾಯ್ದೆಯ ವಾಗ್ದಾನ. ‘ಮುಸ್ಲೀಮರನ್ನೇಕೆ ಹೊರಗಿಟ್ಟಿರಿ?’ ಆಯ್ತು, ಅಲ್ಲಿಗೇ ಬರೋಣ.

1947ರಲ್ಲಿ ದೇಶದ ವಿಭಜನೆ ನಡೆಯಿತು. ಯಾಕೆ ನಡೆಯಿತು, ಅದು ಸರಿಯೇ, ತಪ್ಪೇ, ಮಾಡಬಾರದಿತ್ತೇ? ಇವೆಲ್ಲ ಪೋಸ್ಟ್ ಮಾರ್ಟಮ್ ಗಳಿಗೆ ನಾನು ಹೋಗುವುದಿಲ್ಲ. ಹೌದು, 70 ವರ್ಷಗಳ ಹಿಂದೆ ಅಂಥದ್ದೊಂದು ಭಯಾನಕ ಘಟನೆ ನಡೆದುಹೋಯಿತು. ಕೋಟ್ಯಂತರ ಜನ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹಾದು ಬಂದರು. ಮೊದಲೇ ಬ್ರಿಟೀಷರು ನುಂಗಿ-ನೀರ್ಕುಡಿದಿದ್ದ ಆರ್ಥಿಕ ಪರಿಸ್ಥಿತಿ, ಅದರ ಮೇಲೆ ’ವಿಭಜನೆ’ ಎಂಬ ಬರೆ! ಲಕ್ಷಾಂತರ ಜನ ಹಾದಿ ಮಧ್ಯೆ ಸತ್ತರು, ಹಸಿದು ದಣಿದು ಸತ್ತರು. ಎರಡೂ ಕಡೆ ನಡೆಯಲೇಬಾರದಂತಹ ಘಟನೆಗಳು ನಡೆದುಹೋದವು. ಆದರೆ ಎರಡೂ ಕಡೆ, ನೂರಾರು ವರ್ಷಗಳಿಂದ, ತಲೆತಲೆಮಾರುಗಳಿಂದ ಅಲ್ಲೇ ವ್ಯವಸಾಯ ಮಾಡಿ, ಅಲ್ಲೇ ಬದುಕುಕಟ್ಟಿಕೊಂಡಿರುವವರಲ್ಲಿ ಅನೇಕರಿಗೆ ಅದನ್ನು ಬಿಟ್ಟುಬರಲಾಗಲಿಲ್ಲ. ಹೌದು! ಯಾರೋ ಎಲ್ಲೋ ದೊಡ್ಡ ಮಟ್ಟದಲ್ಲಿ, ಸಹಿಹಾಕಿದರು, ಒಪ್ಪಂದಕ್ಕೆ ಬಂದರು ಎಂಬ ಮಾತ್ರಕ್ಕೆ – it simply doesn’t make any sense to normal people living around, striving for a livelihood everyday to just leave everything and migrate to some unknown land. ಅಂಥವರು ಅಲ್ಲೇ ಉಳಿದರು. ಆಗಿನ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳಾಗಿ ಒಂದೇ ದೇಶವೆನಿಸಿಕೊಂಡಿದ್ದ ಈಗಿನ ಬಾಂಗ್ಲಾ ಮತ್ತು ಪಾಕಿಸ್ತಾನಗಳು ಅವರ ನೆಲೆಬೀಡಾದವು. ಆದರೆ ತಾನು ’ಇಸ್ಲಾಮಿಕ್ ಗಣರಾಜ್ಯ’ ಎಂದು ಅಧಿಕೃತವಾಗಿ ಘೋಷಿಸಿಕೊಂಡಿತು ನೋಡಿ ಪಾಕಿಸ್ತಾನ – ಅಲ್ಲಿನ ಮತೀಯ ಮೃಗಗಳಿಗೆ ಸರ್ಕಾರದ ಬೆಂಬಲ ಸಿಕ್ಕಂತಾಯಿತು. ‘ಕಾಫಿರ’ರ ಮೇಲೆ ದೌರ್ಜನ್ಯ ಮಾಡುವುದು ಒಂಥರಾ ಕಾನೂನಿಗೆ ವಿರುದ್ಧವಲ್ಲದ ಸಂಗತಿ ಎಂಬಂತಾಗಿಹೋಯಿತು. ಏಕೆಂದರೆ ಇಸ್ಲಾಮ್ ರಾಷ್ಟ್ರೀಯ ಧರ್ಮ ನೋಡಿ. ಆ ದೇಶ ತನ್ನನ್ನು ಗುರುತಿಸಿಕೊಳ್ಳುವುದೇ ಧರ್ಮದ ಆಧಾರದ ಮೇಲೆ – ಪಾಕಿಸ್ತಾನದ ಧ್ವಜವನ್ನು ನೋಡಿದರೆ ನಿಮಗೆಲ್ಲವೂ ಅರ್ಥವಾಗಿಬಿಡಬೇಕು.

ಪಾಕಿಸ್ತಾನದಲ್ಲಿ 1947ರಲ್ಲಿ 22%ರಷ್ಟು ಇದ್ದ ಇಸ್ಲಾಮೇತರ ಜನಸಂಖ್ಯೆ 2011ರ ವೇಳೆಗೆ 7.8% ಗೆ ಇಳಿದಿತ್ತು ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ. ಈಗಿನ ಅಂದಾಜಿನ ಪ್ರಕಾರ 3.1% ಗೆ ಇಳಿದಿದೆ. ಇವೆಲ್ಲ ಅಧಿಕೃತ ಲೆಕ್ಕಗಳಾದರೆ ವಾಸ್ತವವಾಗಿ ಇನ್ನೆಂಥ ದುಸ್ವಪ್ನವಿದೆಯೋ! ಹೀಗೊಂದು ವ್ಯವಸ್ಥಿತ ನರಮೇಧ ಆ ನೆಲಗಳಲ್ಲಿ ನಡೆದಿದೆ. 2017ರ ವರೆಗೆ ಪಾಕಿಸ್ತಾನದಲ್ಲಿ ಹಿಂದೂ ಪದ್ಧತಿಯ ಮದುವೆಗಳು ಕಾನೂನುಬಾಹಿರವಾಗಿದ್ದವು ಎಂಬ ವಿಷಯ ನಿಮಗೆ ಗೊತ್ತೇ? ಒಬ್ಬನು ಹಿಂದೂ ರೀತಿಯಲ್ಲಿ ಮದುವೆಯಾಗಿದ್ದರೆ, ಅದನ್ನು ಕಾನೂನು ಗುರುತಿಸುವುದಿಲ್ಲ. ನಾಳೆ ಯಾರೋ ಬಂದು ಆತನ ಪತ್ನಿಯನ್ನು ಅವನ ಕಣ್ಣೆದುರೇ ಅಪಹರಿಸಿಕೊಂಡುಹೋದರೂ ಕಾನೂನು ಅವನ ಸಹಾಯಕ್ಕೆ ಬರದು! ಇಂಥ ಸಾವಿರಾರು ಕಥನಗಳು, ಅಮಾನುಷ ಘಟನೆಗಳಿಗೆ ಆ ನೆಲಗಳು ಕಳೆದ 70 ವರ್ಷಗಳಲ್ಲಿ ಸಾಕ್ಷಿಯಾಗಿವೆ. ಪತ್ನಿಯನ್ನು ಕದ್ದೊಯ್ದರೂ, ಮನೆಯ ಮಕ್ಕಳನ್ನು ಅತ್ಯಾಚಾರಕ್ಕೊಳಪಡಿಸಿದರೂ, ಕೊನೆಗೆ ಬಂದು ತನ್ನನ್ನು ಕೊಂದು ಹೋದರೂ ದೇಶ ಅಥವಾ ಕಾನೂನು ಸಹಾಯಕ್ಕೆ ಬರುವುದಿಲ್ಲ ಎಂದು ಗೊತ್ತಾದಮೇಲೆ, ಜೀವಿಸುವ ಪರಿಸರ ಮತ್ತು ಪರಿಸ್ಥಿತಿ ದಿನದಿನಕ್ಕೂ ವಿಷಮವಾಗುತ್ತ ಹೋದಮೇಲೆ ಅನೇಕರು ಅಲ್ಲಿಂದ ಇಲ್ಲಿಗೆ ಗುಳೆ ಬರಲು ಪ್ರಾರಂಭಿಸಿದರು. ಅವರೇ ನಾವು ಮಾತನಾಡುತ್ತಿರುವ ನಿರಾಶ್ರಿತರು. ಅವರಿಗೇ ನಾವು ಮಾನವೀಯ ನೆಲೆಗಟ್ಟಿನಲ್ಲಿ ಪೌರತ್ವವನ್ನು ಕೊಡಲು ಸಿದ್ಧರಿದ್ದೇವೆ ಎನ್ನುತ್ತಿರುವುದು.

ಹಾಗಿದ್ದರೆ ‘ಇಸ್ಲಾಂ’ ಧರ್ಮವನ್ನು ಈ ಕಾಯ್ದೆಯಿಂದ ಹೊರಗಿಟ್ಟಿರುವುದೇಕೆ? ಸರಿ ಆ ವಿಷಯಕ್ಕೆ ಬರೋಣ. ಈ ಕಾಯ್ದೆ ಇರುವುದು ಆ ಮೂರು ದೇಶಗಳಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ತುಳಿತಕ್ಕೊಳಗಾದ ಅಲ್ಪಸಂಖ್ಯಾತರನ್ನು ಉದ್ದೇಶಿಸಿ.  ಅಲ್ಲಿಗೆ ಆ ದೇಶಗಳಲ್ಲಿ ಮುಸ್ಲೀಮರು ಅಲ್ಪಸಂಖ್ಯಾತರೂ ಅಲ್ಲ, ಶೋಷಿತರೂ ಅಲ್ಲ. ಹಾಗಿದ್ದರೆ ಅಹ್ಮದಿಯರೂ, ಶಿಯಾಗಳು ಮೇಲೂ ಅಲ್ಲಿ ದೌರ್ಜನ್ಯಗಳಗುತ್ತವಲ್ಲ? ಅವರನ್ನೂ ಸೆಳೆದುಕೊಳ್ಳಬಹುದಲ್ಲ? ಮಾಡಬಹುದೇನೋ.. ಆದರೆ ಇದು ಈ ಕಾಯ್ದೆಯಡಿ ಬರುವುದಿಲ್ಲ. ಏಕೆಂದರೆ ಭಾರತದ ಅತ್ಯುತ್ಕೃಷ್ಟ ಕಾನೂನು ತಜ್ಞರಲ್ಲಿ ಒಬ್ಬರಾದ ಹರೀಶ್ ಸಾಳ್ವೆ ಅವರೇ ಹೇಳುವಂತೆ – ಒಂದು ದೇಶದಲ್ಲಿ ಅನೇಕ ಕಾರಣಗಳಿಂದ ನಿರ್ದಿಷ್ಟ ಗುಂಪಿನ ಜನರು ಕಿರುಕುಳಕ್ಕೆ ಒಳಗಾಗಿರಬಹುದು. ಸಾಮಾಜಿಕ ಕಾರಣಗಳಿರಬಹುದು, ಆರ್ಥಿಕ ಕಾರಣಗಳಿರಬಹುದು, ನಂಬಿಕೆಯ ಆಧಾರದ ಮೇಲೆ ಮೇಲು-ಕೀಳೆಂಬ ಭೇದದಿಂದಿರಬಹುದು. ಆದರೆ ಈ ಕಾಯ್ದೆ ಉದ್ದೇಶಿಸುತ್ತಿರುವ ಸಮೂಹ ‘ಧಾರ್ಮಿಕ ನೆಲೆಗಟ್ಟಿನಲ್ಲಿ’ ಕಿರುಕುಳಕ್ಕೆ ಒಳಗಾದವರನ್ನು ಮಾತ್ರ. ಅಹ್ಮದೀಯರಿರಲಿ, ಶಿಯಾಗಳಿರಲಿ ‘ಧಾರ್ಮಿಕ ನೆಲೆಗಟ್ಟಿನಲ್ಲಿ’ ಕಿರುಕುಳಕ್ಕೆ ಒಳಗಾದವರಲ್ಲ. ಏಕೆಂದರೆ ಅವರ ಧರ್ಮ ಬೇರೆಯದು ಎಂದು ಕಾನೂನು ಪರಿಗಣಿಸುವುದಿಲ್ಲ. ಅವರ ಧರ್ಮವೂ ಇಸ್ಲಾಮೇ. ಒಳಗಿನ ಕೆಲವು ನಂಬಿಕೆಗಳಿಂದ ಅಲ್ಲವರು ಕಿರುಕುಳಕ್ಕೆ ಒಳಗಾಗಿರಬಹುದು. ಆದರೆ ಈ ಕಾಯ್ದೆ ಅದನ್ನು ಉದ್ದೇಶಿಸುವುದಿಲ್ಲ.

ಅವರನ್ನೂ ಸೇರಿಸಬಹುದಲ್ಲ? ಏಕೆ ಬಿಡುತ್ತೀರಿ? ಮತ್ತು ಮೂರೇ ದೇಶಗಳು ಏಕೆ? ಮಯನ್ಮಾರನ್ನೂ ಸೇರಿಸಿ.. ರೊಹಿಂಗ್ಯಾಗಳಿಗೂ ಕೊಡಿ. ಚೀನಾದಲ್ಲಿ ಕಿರುಕುಳಾಕ್ಕೊಳಗಾದ ಮುಸ್ಲೀಮರಿಗೆ ಕೊಡಿ ಅನ್ನೋದು ಇನ್ನು ಕೆಲವರ ವಾದ. ಅಲ್ಲೇ ಅವರು ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳದೇ ಇರುವುದು. ಈ ಕಾಯ್ದೆ ಯಾವ ಉದ್ದೇಶಕ್ಕೆ ತರಲ್ಪಟ್ಟಿತು ಎಂಬುದನ್ನೇ ಮರೆತಿರುವುದು. ಇದು ದೇಶ ವಿಭಜನೆಯಾದ ಕಾಲದಲ್ಲಿ ಇಲ್ಲಿ ಬರಲಾಗದೇ ಅಲ್ಲೇ ಉಳಿದುಕೊಂಡರಲ್ಲ, ನಂತರ ಪರಿಸ್ಥಿತಿ ವಿಷಮವಾದಾಗ ಇಲ್ಲಿಗೆ ಗುಳೆ ಬಂದರಲ್ಲ, ಆ ಸಮಸ್ಯೆಯನ್ನು ಬಗೆಹರಿಸಲು ರಚಿಸಲ್ಪಟ್ಟಿದ್ದು. ಹಾಗೂ ಅಫಘಾನಿಸ್ತಾನದಲ್ಲೂ ಕೊಂಚ ಹರಡಿಕೊಂಡಿದ್ದ ಹಿಂದೂ, ಸಿಖ್ ಮುಂತಾದ ಜನಾಂಗಗಳು ದಶಕಗಳ ಕಾಲ ನಡೆದ ’ಆಫ್ಘನ್ ಯುದ್ಧ’ದಲ್ಲಿ ನರಳಿದ್ದರಲ್ಲ, ಅವರನ್ನು ಉದ್ದೇಶಿಸಲು. ಜಗತ್ತಿನ ಎಲ್ಲಾ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾದವರ ಸಮಸ್ಯೆಯನ್ನು ಬಗೆಹರಿಸಲು ರಚಿಸಿದ್ದಲ್ಲ. 1947ರಲ್ಲಿ ಈ ದೇಶದಿಂದ ವಿಭಜನೆಯಾದದ್ದು ಯಾವುವು? ಪಾಕಿಸ್ತಾನ ಮತ್ತು ಬಾಂಗ್ಲಾ. ಮಯನ್ಮಾರ್ ಆಗಲೀ, ಶ್ರೀಲಂಕಾವಾಗಲೀ, ಚೀನಾವಾಗಲೀ ಸ್ವಾತಂತ್ರ್ಯ ಸಿಕ್ಕಾಗ ನಡೆದ ನಮ್ಮಿಂದ ವಿಭಜಿತವಾದ ರಾಷ್ಟ್ರಗಳಲ್ಲ. ಈ ಕಾಯ್ದೆ ಬಹುವಾಗಿ ಆಗ ನಡೆದ ಘನಘೋರ ವಿಭಜನೆಯ ಸಂತ್ರಸ್ತರೂ ಅಲ್ಲ. ಈ ಕಾಯ್ದೆ ಆಗ ನಡೆದ ವಿಭಜನೆಯ ಸಂತ್ರಸ್ತ ಕುಟುಂಬಗಳಿಗೇ ಹೊರತು ನೀವಂದುಕೊಂಡಿರುವ ಹಾಗೆ ಜಗತ್ತಿನ ಎಲ್ಲಾ ಸಂತ್ರಸ್ತರಿಗೂ ಅಲ್ಲ.

ಇಷ್ಟು ಹೇಳಿದ ಮೇಲೂ, ಇನ್ನೂ ಕೆಲವರು ಮತ್ತೂ ಮುಂದೆ ಹೋಗಿ ‘ಇರಲಿ. ಇವರು ವಿಭಜನೆಯ ಸಂತ್ರಸ್ತರಲ್ಲದಿರಬಹುದು. ಎಲ್ಲರಿಗೂ ಪೌರತ್ವ ಕೊಡೋಣ. ಎಲ್ಲಿಂದ ಬಂದರೂ ಕೊಡೋಣ’ ಎನ್ನಬಹುದು. ಸ್ವಾಮಿ, ನೀವು ಮಹಾ ಮನವತಾವಾದಿಯೇ ಇರಬಹುದು. ಆದರೆ ದಯವಿಟ್ಟು ಲ್ಯಾಪ್ ಟಾಪ್, ಫೇಸ್ಬುಕ್, ಟ್ವಿಟ್ಟರ್ ಬಿಟ್ಟು ಮನೆಯಿಂದ ಹೊರಬಂದು ನಮ್ಮ ದೇಶವನ್ನೊಮ್ಮೆ ಕಣ್ಣುಬಿಟ್ಟು ನೋಡಿ. ಈ ದೇಶದಲ್ಲಿ ಇನ್ನೂ ಅರ್ಧಕ್ಕರ್ಧ ಜನ ಹಸಿವಿನಿಂದಿದ್ದಾರೆ. ಶಿಕ್ಷಣದ ಮಟ್ಟ ಸುಧಾರಿಸಬೇಕಾಗಿದೆ. ಭ್ರಷ್ಟಾಚಾರವಿದೆ. ಬಡತನವಿದೆ. ನಿರುದ್ಯೋಗವಿದೆ. ಸ್ವಚ್ಛತೆಯ ಸಮಸ್ಯೆಯೂ ಇದೆ. ಇಲ್ಲೇ ಜನರಿಗೆ ಮೂಲಭೂತ ಸೌಕರ್ಯವನ್ನು ತಕ್ಕ ಮಟ್ಟಿಗೆ ಒದಗಿಸಲು ನಮ್ಮಿಂದ ಸಾಧ್ಯವಾಗಿರದೇ ಇರುವಾಗ, ಜಗತ್ತಿನ ಎಲ್ಲೆಡೆಯಿಂದ ಜನರನ್ನು ಬರಮಾಡಿಕೊಳ್ಳೋಣವೇನು? ನಿಮಗೆ ಒಂದು ದೇಶ ಹೇಗೆ ಕಾರ್ಯನಿರ್ವಹಿಸುತ್ತದೆ, ಒಂದು ಸಮಾಜ ಸುಸ್ಥಿತಿಯಲ್ಲಿರಲು ಏನೇನು ಮಾಡಬೇಕಾಗುತ್ತದೆ ಎಂಬ ಕಿಂಚಿತ್ತು ಅರಿವಾದರೂ ಇದೆಯೇ? ನಮ್ಮ ಜನರಲ್ಲೇ ಎಲ್ಲರಿಗೂ ನಾವು ಎರಡು ಹೊತ್ತು ಊಟ ಕೊಡಲು ಸಾಧ್ಯವಾಗದೇ ಇರುವಾಗ, ಅವರನ್ನೂ ಬರಮಾಡಿಕೊಂಡರೆ – ಇಲ್ಲಿರುವ ಹಾಗೂ ಹೊಸತಾಗಿ ಬರುವ ಇಬ್ಬರಿಗೂ ಗೌರವಯುತ ಜೀವನವನ್ನು ಒದಗಿಸಲು ನಮಗೆ ಸಾಧ್ಯವಾಗುವುದಿಲ್ಲ. ಅದು ಖಂಡಿತ ಮಾನವೀಯತೆಯಲ್ಲ.ಈಗ ನಾವು ಬರಮಾಡಿಕುಳ್ಳುತ್ತಿರುವವರು, ಬಹುವಾಗಿ 70 ವರ್ಷದ ಹಿಂದೇ ನಮ್ಮಲ್ಲಿಗೆ ಬರಬೇಕಾಗಿದ್ದು, ಕಾರಣಾಂತರಗಳಿಂದ ಬರದೇ, ಅಲ್ಲಿ ಪರಿಸ್ಥಿತಿ ವಿಷಮವಾಗಿ ಬದುಕಲು ಸಾಧ್ಯವಾಗದೇ ಗುಳೆ ಬಂದವರಿಗಾಗಿ.

ಒಂದು ಜವಾಬ್ದಾರಿಯುತ ದೇಶವಾಗಿ ಅಷ್ಟೂ ಮಾಡದಿದ್ದರೆ, ಅದು ನಮ್ಮ ಮಾನವೀಯತೆನ್ನು ನಾವೇ ಅಪಹಾಸ್ಯ ಮಾಡಿಕೊಂಡಂತೆ. ಕೇವಲ ಅಜೆಂಡಾಗಳನ್ನು, ಐಡಿಯಾಲಜಿಗಳನ್ನು ಹೊತ್ತುಕೊಂಡು ಮೂರುಹೊತ್ತೂ ಪ್ರತಿಭಟಿಸುವವರಿಗೆ, ಏನೋ ಮಾಡುತ್ತೇನೆ ಎಂದು ಅಂದುಕೊಂಡಿರುವವರಿಗೆ ವಾಸ್ತವಗಳು ಅರ್ಥವಾಗುವುದು ಕಷ್ಟ. ಅಥವಾ ಒಂದು ಮಾನವೀಯ ಮತ್ತು ಸುಭದ್ರ ದೇಶವನ್ನು ಕಟ್ಟುವ ಯಾವ ಆಸಕ್ತಿಯೂ ಇವರಿಗೆ ಇಲ್ಲ ಎಂದೆನಿಸುತ್ತದೆ. ತಾವು ಸುಭಗರು ಎನ್ನಿಸಿಕೊಳ್ಳಬೇಕು, ತಾವು ಪ್ರಸಿದ್ಧಿ ಪಡೆಯಬೇಕು, ತಮ್ಮ ಮೂಗಿನ ನೇರಕ್ಕೇ ಎಲ್ಲವೂ ನಡೆಯಬೇಕು ಎಂದಾಗಲು ಇವರು ದೇಶದ ತಲೆಯಮೇಲೆ ಕಲ್ಲು ಜರುಗಿಸಲೂ ಸಿದ್ಧ! ತಮ್ಮ ಹುಚ್ಚು ಚಪಲಗಳಿಗೆ ದೇಶದ ಹಿತಾಸಕ್ತಿಯನ್ನು, ಭದ್ರತೆಯನ್ನು ಬಲಿಕೊಡಲು ಸಿದ್ಧ. ದೇಶದೊಳಗೇ ಸುಳ್ಳುಸುದ್ದಿಗಳನ್ನು ಬಿಟ್ಟು, ಜನರನ್ನು ತಪ್ಪು ದಾರಿಗೆಳೆದು ಅಸ್ಥಿರತೆ ಸೃಷ್ಟಿಸುತ್ತಿರುವ ಇಂಥವರ ಮೇಲೆ ನಿಗಾ ಇಡುವುದು ಒಳಿತು. ಈ ನಾಟಕಗಳು ತುಂಬಾ ಬೆಳೆಯಲು ಬಿಟ್ಟರೆ, ಮುಂದೆ ನಮಗೇ ಅಪಾಯ. ಏಕೆಂದರೆ, ದೇಶವಿದ್ದರೆ ಮಾತ್ರ ನಾನು, ನೀವು. ದೇಶ ಅಸ್ಥಿರವಾದರೆ ನಮಗೇ ಮುಂದೊಂದು ದಿನ ಮತ್ತೊಂದು ದೇಶ CAA ಮಾಡಬೇಕಾದೀತು! 


~ ಸಂಕೇತ್ ಡಿ ಹೆಗಡೆ

ಅಷ್ಟಕ್ಕೂ ಆಗಬೇಕಿರುವುದು ಅವರಿಗೇನೂ ಇಲ್ಲ!




ಕಳೆದೆರಡು ದಿನಗಳಿಂದ ಸಾವರ್ಕರ್ ಕುರಿತ ಬರಹಗಳಿಂದ ಫೇಸ್ಬುಕ್ ತುಂಬಿ ಹೋಗಿದೆ. ಬಹಳ ಒಳ್ಳೆಯ ವಿಷಯ.

ಅಷ್ಟಕ್ಕೂ ಸಾವರ್ಕರ್ ರಿಗೆ ನಮ್ಮ-ನಿಮ್ಮ ಪ್ರೀತಿ ಬೇಕಿಲ್ಲ. ಸ್ವಾತಂತ್ರ್ಯ ಒಂದು ಮುಗಿದ ವಿಷಯ. ನೀವು ಈಗ ಅವರಿಗೆ ಎಷ್ಟು ಗೌರವ ತೋರಿಸುತ್ತೀರಿ ಎಂಬುದರ ಮೇಲೆ ಅವರ ಬದುಕು ಬದಲಾಗುವುದಿಲ್ಲ. ನೀವು ಫ಼್ಲೈ-ಓವರ್ ಗೆ ಹೆಸರಿಟ್ಟ ಮಾತ್ರಕ್ಕೆ ಅವರ ಗೌರವ ಏರುವುದೋ ಅಥವಾ ತಗ್ಗುವುದೋ ಆಗುವುದಿಲ್ಲ.

ಆದರೆ ನಾವು ಇವತ್ತು ಹೀಗೆ ಬದುಕುತ್ತಿರಲು ಕಾರಣವಾದ ಅಸಂಖ್ಯಾತ ಜೀವಿಗಳ ಬಗ್ಗೆ ಚೂರು ಗೌರವಾದಾರಗಳಿಲ್ಲದೇ ಬದುಕಿದರೆ, ನಷ್ಟವಾಗುವುದು ನಮಗೆ. ಸೃಷ್ಟಿ ನಮಗೆ ಇಂಥದ್ದೊಂದು ಹೃದಯ, ಇಂಥದ್ದೊಂದು ತಲೆ, ನೆನಪಿನ ಶಕ್ತಿ, ಭಾವಿಸುವ ಶಕ್ತಿ ಇದನ್ನೆಲ್ಲ ಧಾರೆಯೆರೆಯಿತಲ್ಲ? ಅದನ್ನೆಲ್ಲ ಮೊಟಕುಗೊಳಿಸಿ, ಅಂಥವರ ಕುರಿತು ಚೂರು ಕೃತಜ್ಞತೆಯಿಲ್ಲದೇ ಬದುಕಿದರೆ, ನಷ್ಟವಾಗುವುದು ನಮಗೆ. 

ಸಾವರ್ಕರ್ ಒಬ್ಬ ದೇಶಭಕ್ತಿಯ, ದೇಶಕ್ಕಾಗಿ ಮಾಡಬಲ್ಲ ತ್ಯಾಗದ, ಇತರರ ಒಳಿತಿಗಾಗಿ ಒಬ್ಬ ಮನುಷ್ಯ ಹೋಗಬಲ್ಲ ತೀವ್ರತೆಯ ಕುರಿತು ಒಂದು ಅಪ್ರತಿಮ ಉದಾಹರಣೆಯಷ್ಟೇ. ನೀವು ಗೌರವ ಕೊಡುವುದರಿಂದ ಅಥವಾ ಕೊಡದಿರುವುದರಿಂದ ಅವರಲ್ಲೇನು ಬದಲಾಗುವುದಿಲ್ಲ. ಬದಲಾಗುವುದು ನಮ್ಮ ಪ್ರಜ್ಞೆಯಲ್ಲಿ ಮತ್ತು ನಾವು ಬದುಕುತ್ತಿರುವ ಮಟ್ಟದಲ್ಲಿ ಅಷ್ಟೇ.

ಅಷ್ಟಕ್ಕೂ ಈ ದೇಶದ ಇತಿಹಾಸವನ್ನು ನಮಗೆ ಕಲಿಸಿದವರ್ಯಾರು? ಬ್ರೀಟೀಷರು ಬಿಟ್ಟುಹೋದ ಹಾಳುಮೂಳನ್ನೇ ಹೌದೌದೆಂದು ನಂಬಿಕೊಂಡು ಬರುತ್ತಿರುವ ಜನಸಮೂಹವಲ್ಲವೇ ನಾವು? ಊಹೂಂ, ನಾವು ಹೀಗೆ ಇರಲಿಲ್ಲ. ಈ ದೇಶದ ಕಾಲಮಾನದಲ್ಲಿ ಸ್ವಲ್ಪವೇ ಹಿಂದೆ ಹೋದರೆ, ನಾವು ಹೀಗಿರಲಿಲ್ಲ.

ಜಗತ್ತಿನ ಬೇರೆಡೆಗಳಲ್ಲಿ ಇನ್ನೂ ನಾಗರೀಕತೆಗಳ ಶುರುವಿಲ್ಲದಾಗ – ಅಧ್ಯಾತ್ಮ, ವಿಜ್ಞಾನ. ಗಣಿತ, ಖಗೋಳ, ವೈದ್ಯಕೀಯ, ಯೋಗ ಶಾಸ್ತ್ರಗಳಲ್ಲಿ ಔನ್ನತ್ಯವನ್ನು ಸಾಧಿಸಿದ್ದ ನೆಲವಿದು. ವಿಶ್ವವೇ ನಿಬ್ಬೆರಗಾಗುವಂತ ಸಾಮ್ರಾಜ್ಯಗಳು, ರಾಜಾಡಳಿತ ಪರಂಪರೆಗೆ ಮುಕುಟವಾಗಬಲ್ಲ ರಾಜರುಗಳು, ಮಾನವ ವ್ಯವಸ್ಥೆಯನ್ನು ಪರಿಶೋಧಿಸಿದ ಅತ್ಯುತ್ಕೃಷ್ಟ ಯೋಗಿಗಳು, ವಿಜ್ಞಾನಿಗಳು ಆಗಿಹೋದ ನೆಲವಿದು. ಮಾರ್ಕ್ ಟ್ವೇನ್ ಒಂದು ಕಡೆ ‘Anything that can ever be done either by man or God has been done in this land’ ಎಂದಿದ್ದ ಈ ದೇಶದ ಕುರಿತು!

ಹೀಗಿದ್ದಿದ್ದ ಈ ದೇಶ, ಕಳೆದ ಸಹಸ್ರಮಾನದಲ್ಲಿ ತೀವ್ರ ಆಕ್ರಮಣಗಳಿಗೆ, ಲೂಟಿಗಳಿಗೆ, ಹೇರಿಕೆಗಳಿಗೆ ಒಳಗಾಯಿತು. ಜೇನು ಸವಿಯಲು ಜಂತುಗಳು ಬರುವುದು ಸಾಮಾನ್ಯವಲ್ಲವೇ? ತೀವ್ರ ದಾಳಿಗಳಿಗೆ ಒಳಗಾಗಬೇಕಾಯಿತು. Exploration ಮನಸ್ಥಿತಿಯಿದ್ದ ಇಂಥ ದೇಶ, ಇಂಥ ಖಂಡ ಭಾರತ ಮೇಲೆ ಆಕ್ರಮಣ ಮಾಡಿಲ್ಲ ಅಂತ ಇಲ್ಲ. ಅಷ್ಟು ದೇಶಗಳ ಜನರು ಇಲ್ಲಿ ಬಂದು ತಮ್ಮ ನೆಲೆ ಸ್ಥಾಪಿಸಲು ಪ್ರಯತ್ನಿಸಿದರು.

ಅದರಲ್ಲೆಲ್ಲ ಅತ್ಯಂತ ನಿರ್ದಯಿ, ಕ್ರೂರಿ ಸಾಮ್ರಾಜ್ಯಗಳಲ್ಲಿ ಆಂಗ್ರರ ದಂಡೂ ಒಂದು. ಇವರದ್ದು sophesticated ತಂತ್ರಗಾರಿಕೆ. ತಮ್ಮ ಸೈನಿಕರನ್ನೇ ತಂದು, ಅದೆಂಥದೋ ಯುದ್ಧವಾಡಿ, ಒಂದಷ್ಟು ಕಬಳಿಸಿ, ಲೂಟಿ ಹೊಡೆದು ಹೋಗುವ ಕ್ರೂಡ್ ಜನರಲ್ಲ. ಸಣ್ಣಗೆ ಒಳನುಸುಳುತ್ತಾರೆ. ನಿಧಾನವಾಗಿ ಪೂಸಿಹೊಡೆಯುತ್ತಾರೆ. ನಮ್ಮವರನ್ನೇ ನಮ್ಮ ವಿರುದ್ಧವಾಗಿ ತಿರುಗಿಸುತ್ತಾರೆ. ನಮ್ಮ ನಮ್ಮಲ್ಲೇ ಜಗಳ ಹಚ್ಚುತ್ತಾರೆ. ನಮ್ಮ ಸಂಸ್ಕೃತಿಯನ್ನು ವಿವಿಧ ಹಂತಗಳಲ್ಲಿ ನಾಶ ಮಾಡಲು ಪ್ರಯತ್ನಿಸುತ್ತಾರೆ. ವಿವಿಧ ಮಾರ್ಗಗಳಲ್ಲಿ ನಾವು ತುಚ್ಛರು, ಅವರು ಶ್ರೇಷ್ಠರು ಎಂದು ನಮ್ಮನ್ನೇ ನಂಬಿಸುತ್ತಾರೆ. ನಮ್ಮನ್ನು ಉಪವಾಸ ಕೆಡುಗಿ ತಮ್ಮ ದೇಶದಲ್ಲಿ ಐಶಾರಾಮಿ ಜೀವನ ನಡೆಸುತ್ತಾರೆ. ಇದು ನಯವಂಚಕ ಸಾಮ್ರಾಜ್ಯ!

ಇದು ಭಾರತೀಯರಿಗೆ ಅರ್ಥವಾದರೂ, ಅವರ ತಂತ್ರಗಾರಿಕೆಯ ಮುಂದೆ ವ್ಯವಸ್ಥಿತವಾದ ಹೋರಾಟ ಮಾಡಿ ಅವರನ್ನು ಓಡಿಸಲು ಎಷ್ಟು ವರ್ಷ ಬೇಕಾಯಿತು ನೋಡಿ. ಅದು ಆ ಸಾಮ್ರಾಜ್ಯದ ‘ಹರಿತ’ಕ್ಕೆ ಹಿಡಿದ ಕನ್ನಡಿ.

ಹಾಗಂತ ಭಾರತೀಯರೇನು ಸುಮ್ಮನೆ ಕುಳಿತಿರಲಿಲ್ಲ. ಎಲ್ಲರೂ ಅವರವರಿಗೆ ತೋಚಿದ ಮಾರ್ಗದಲ್ಲಿ ಪ್ರತಿಭಟನೆಗೆ ಇಳಿದರು. ಕೆಲವರು ಕ್ರಾಂತಿಕಾರಿಗಳಾದರು, ಕೆಲವರು ರಾಜಕೀಯ ಚಳುವಳಿಗಳ ನೇತಾರರಾದರು, ಕೆಲವರು ಜಾಗತಿಕ ಮಟ್ಟದಲ್ಲಿ ಶಮಿಸಿದರು. ಇನ್ನು ಕೆಲವರು ಬಂದ್, ಹರತಾಳ, ಉಪವಾಸಗಳ ರೂಪದಲ್ಲಿ ದೊಡ್ಡ ಅಲೆಯನ್ನು ಸೃಷ್ಟಿಸಿದರು. ಅವರವರು ಅವರವರಿಗೆ ಅತ್ಯುತ್ತಮ ಅನ್ನಿಸಿದ ಮಾರ್ಗದಲ್ಲಿ ರಕ್ತ ಕೊಟ್ಟರು.

ಸಾವರ್ಕರ್ ಅಂದಾಗ ನೆನಪಿಗೆ ಬರುವುದೇ ಅವರು ಅನುಭವಿಸಿದ ಕರಾಳ ಕಷ್ಟಗಳು. 50 ವರ್ಷ ಕಾಲಾಪಾನಿ! ಇದು ಆಂಗ್ಲರು ಅವರಿಗೆ ವಿಧಿಸಿದ ಶಿಕ್ಷೆ. ಸರಿಯಾದ ಊಟವಿಲ್ಲ, ನಿದ್ದೆಯಿಲ್ಲ, ಗಾಣಕ್ಕೆ ಎತ್ತು ಕಟ್ಟಿದಂತೆ ಕಟ್ಟಿ ಎಣ್ಣೆ ತೆಗೆಯುವ ಕೆಲಸ. ಇಷ್ಟೇ ನೀರು ಕುಡಿಯಬೇಕು, ಇಷ್ಟೇ ತಿನ್ನಬೇಕು, ನಿದ್ದೆಯೋ ದೇವರಿಗೇ ಪ್ರೀತಿ. ಬೆಳಿಗ್ಗೆ ತಿಂಡಿ ತಿನ್ನದೇ ಮಧ್ಯಾಹ್ನವಾಗುವಷ್ಟರಲ್ಲಿ ಹಸಿಯುತ್ತೇವೆ ನಾವು. ಮಧ್ಯಾಹ್ನವೂ ಏನಾದರೂ ತಪ್ಪಿಹೋಯಿತು ಅಂದುಕೊಳ್ಳಿ. ಅಷ್ಟೇ! ಸಂಜೆಯಾಗುವಷ್ಟರಲ್ಲಿ ಹೈರಾಣಾಗುತ್ತೇವೆ ನಾವು. ’ಗಾಣ ತಿರುಗಿಸಿ ಇಷ್ಟು ಎಣ್ಣೆ ತೆಗೆಯಬೇಕು, ಇಲ್ಲವಾದರೆ ನಿನಗೆ ಊಟವಿಲ್ಲ’ ಅಂದರೆ ಹೇಗಿರುತ್ತೆ ಹೇಳಿ? ಸಾವರ್ಕರ್ ಅನುಭವಿಸಿದ್ದು ಅದನ್ನು. ಎರಡು ಸೊಳ್ಳೆಗಳು ಹಾರಾಡುತ್ತಿದ್ದರೆ ಮಲಗುವುದು ಕಷ್ಟ. ಸಾವರ್ಕರ್ ಮಲಗಿದ್ದು ಎಂಥ ಪರಿಸ್ಥಿತಿಯಲ್ಲಿರಬಹುದು ಹೇಳಿ? ಅದೂ ಒಂದೆರಡು ದಿನವೇ?

ಇಲ್ಲ, ಅವರ ಕಷ್ಟಗಳನ್ನು ಹೇಳಲು ಇದನ್ನೆಲ್ಲ ಹೇಳುತ್ತಿಲ್ಲ. ಅವರಿಂದ ಸ್ವಾತಂತ್ರ್ಯ ಪೂರ್ಣವಾಗಿ ಬಂತು ಎಂಬ ಲೋಕವನ್ನೂ ನಿಮ್ಮ ಮುಂದೆ ತೆರೆದಿಡುತ್ತಿಲ್ಲ. ಆದರೆ ಒಬ್ಬ ಮನುಷ್ಯ ತನ್ನ ದೇಶಕ್ಕಾಗಿ, ತನ್ನ ದೇಶದ ಜನರಿಗಾಗಿ ಈ ರೀತಿಯ ಬದುಕನ್ನು ತನ್ನದಾಗಿಸಿಕೊಳ್ಳುತ್ತಾನೆ ಅಂದರೆ ನಿಮಗೆ ಊಹಿಸಲು ಸಾಧ್ಯವೇ? ಸಾವರ್ಕರ್ ಮಾಡಿದ್ದು ಅದನ್ನ. ತಮ್ಮ ಸಾಮರ್ಥ್ಯದಲ್ಲಿ ಏನೇನನ್ನೆಲ್ಲ ಮಾಡಬಹುದೋ, ಅದನ್ನ ಶಕ್ತಿ ಮೀರಿ ಮಾಡಿದರು. ಮನುಷ್ಯರು ಒಳಹೋಗಬಾರದ ಕಷ್ಟಗಳನ್ನೆಲ್ಲ ತಮ್ಮದಾಗಿಸಿಕೊಂಡರು.

‘ಅವರು ಕ್ಷಮಾಪಣೆ ಪತ್ರ ಬರೆದರು’ ಅನ್ನುತ್ತಾರೆ. ಮೇಲಿನ ಸ್ಥಿತಿಯಲ್ಲಿ 9 ವರ್ಷ ಜೈಲಿನಲ್ಲಿದ್ದರೆ ನೀವೇನು ಮಾಡುತ್ತಿದ್ದಿರಿ? ನಾನೇನು ಮಾಡುತ್ತಿದ್ದೆ? ಇಲ್ಲ, ಅವರು ಕ್ಷಮಾಪಣೆಯನ್ನು ಕೇಳಿದರು ಎಂದು ನಾನು ಹೇಳುತ್ತಿಲ್ಲ. ಅದು ತಂತ್ರಗಾರಿಕೆಯ ನಡೆ. ಅದು ಬಿಡಿ, ಕಾಂಗ್ರೆಸ್ ಮುಟ್ಠಾಳರಿಗೆ ಎಂದಿಗೂ ಅರ್ಥವಾಗುವುದಿಲ್ಲ. ಸಾವರ್ಕರ್ ಸ್ಥಾನದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ? ಟಿವಿ ಸ್ಟುಡಿಯೋಗಳಲ್ಲಿ ಬಂದು ಮಾತನಾಡುವುದು ಸುಲಭ. ಆದರೆ ಇವರುಗಳೇ ಆ ಸ್ಥಾನದಲ್ಲಿದ್ದರೆ ಏನು ಮಾಡುತ್ತಿದ್ದರು?

ಬಿಡಿ, ಇದಕ್ಕೆಲ್ಲ ಅರ್ಥವಿಲ್ಲ. ನೂರುವರ್ಷದ ಹಿಂದೆ ಇದ್ದ ಸ್ವಾತಂತ್ರ್ಯ ಹೋರಾಟಗಾರನನ್ನು ಗೌರವಿಸುವುದೋ, ಬೇಡವೋ ಎಂಬ ದ್ವಂದ್ವದಲ್ಲೇ ನನಗೆ ಹುರುಳು ಕಾಣಿಸುತ್ತಿಲ್ಲ. It’s a shame we’re still thinking about it. ಅವರನ್ನು ಹೃದಯದಲ್ಲಿಟ್ಟುಕೊಂಡು, ಕೃತಜ್ಞರಾಗಿ, ದೇಶದ ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸುವುದನ್ನು ನೋಡುವ ಬದಲು ಇದನ್ನು ಒಂದು ವಿವಾದವನ್ನಾಗಿ ಮಾಡಿ ಎಲ್ಲರ ಸಮಯ ವ್ಯರ್ಥಮಾಡುತ್ತಿದ್ದೀರಲ್ಲ, ನಿಮಗೆ ಏನು ಹೇಳುವುದು? ಸಾವಿರಾರು ಸ್ಮಾರಕಗಳು , ಫ್ಲೈ ಓವರ್ ಗಳು ಇವೆ. ಗೌರವಾರ್ಥವಾಗಿ ನಾವು ಹೆಸರುಗಳನ್ನು ಇಡುತ್ತೇವೆ. ಇದಕ್ಕೆ ಸಾವರ್ಕರ್ ಹೆಸರಿಡುತ್ತಿದ್ದೇವೆ. ಮತ್ತೊಂದಕ್ಕೆ ಗಾಂಧಿ ಹೆಸರಿಡುತ್ತೇವೆ. ಇದು ನಮ್ಮ ಕೃತಜ್ಞತಾ ಭಾವದ ಸಮರ್ಪಣೆಯೇ ಹೊರತು, ಅವರಿಗೆ ಇದರಿಂದ ಯಾವ ಪ್ರಯೋಜನವೂ ಇಲ್ಲ. ಇಟ್ಟು ಮುಂದೆ ಸಾಗುತ್ತೇವೆ. ದೇಶದ ಇತರ ಸವಾಲುಗಳ ಬಗ್ಗೆ ಗಮನಹರಿಸುತ್ತೇವೆ. ಊಹೂಂ, ಇದಿಲ್ಲ! ಇದು ನಿಜವಾಗಿಯೂ ಶೋಚನೀಯ.

ನಾವು ಇಂಥವುಗಳಿಗೆ ಸೊಪ್ಪು ಹಾಕಬಾರದು. ಇಲ್ಲವಾದರೆ 10 ವರ್ಷಗಳಲ್ಲಿ ಸಾಧಿಸಬಹುದಾದ ಪ್ರಗತಿಯನ್ನು ಸಾಧಿಸಲು 100 ವರ್ಷಗಳು ಬೇಕಾಗುತ್ತವೆ!


~ ಸಂಕೇತ್ ಡಿ ಹೆಗಡೆ

ಮೊನ್ನೆ CEASEFIRE ಎಂದು ಟ್ರಂಪ್ ಟ್ವೀಟ್ ಮಾಡಿದಾಗ ನಂಬಲೇ ಆಗಿರಲಿಲ್ಲ… ಈ ಮನುಷ್ಯ ಸ್ವಲ್ಪ ಎಡವಟ್ಟು ಜಾಸ್ತಿ… ಏನೋ ಮಾಡಿದ್ದಾನೆ… ನಾವು ಒಪ್ಪಿರಲಿಕ್ಕಿಲ್ಲ ಅನ್ನಿಸಿತ್...